"ಬಿಜೆಪಿ ಸಂಸದರು, ಶಾಸಕರು ನೋಟು ರದ್ದತಿಗೆ 6 ತಿಂಗಳು ಮೊದಲ ಆದಾಯ ಬಹಿರಂಗಪಡಿಸಲಿ"
ಕೇಂದ್ರಕ್ಕೆ ರೇಣುಕಾ ಶಹಾಣೆ ಹತ್ತು ಸಲಹೆ
ಹೊಸದಿಲ್ಲಿ, ಡಿ.4: ನೋಟು ಅಮಾನ್ಯಗೊಳಿಸಿದ ಬಗೆಗಿನ ವಿವಾದ ಹಾಗೂ ಅವ್ಯವಸ್ಥೆಯ ಧೂಳು ಇನ್ನೂ ಮಾಯವಾಗಿಲ್ಲ. ಬಹುತೇಕ ಜನಸಾಮಾನ್ಯರು ಮೊದಲ ದಿನ ಎದುರಿಸಿದ ಸಮಸ್ಯೆಯನ್ನೇ ಒಂದು ತಿಂಗಳ ಬಳಿಕವೂ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ರೇಣುಕಾ ಶಹಾಣೆ ತಮ್ಮ ಅಭಿಪ್ರಾಯವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜನರ ಸಮಸ್ಯೆ ಬಗ್ಗೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಇದು ಪ್ರಧಾನಿಯ ಇಮೇಜ್ ಬದಲಾವಣೆ ಮಾಡುವಂಥದ್ದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಲಕ್ಷಾಂತರ ಮಂದಿ ಇದನ್ನು ಬೆಂಬಲಿಸಿದ್ದಾರೆ ಎಂಬ ಕಲ್ಪನೆ ಕೇವಲ ಭ್ರಮೆ. ಕಪ್ಪುಹಣ ಕೂಡಿಹಾಕಿರುವ ಮಂದಿ ಈ ಕಾನೂನಿನಲ್ಲಿನ ಲೋಪಗಳನ್ನು ದುರುಪಯೋಗಪಡಿಸಿಕೊಂಡು, ಬಚಾವಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಕೆಲ ಬಡವರು ಹಾಗೂ ಬ್ಯಾಂಕ್ ಪ್ರಬಂಧಕರು ರಾತ್ರೋರಾತ್ರಿ ಶ್ರೀಮಂತರಾಗಿದ್ದಾರೆ. ಇದು ನಮ್ಮ ಹಣಕಾಸು ಸಚಿವ ಮುಖವನ್ನು ಕೆಂಪಾಗಿಸಿದೆ ಎಂದು ಬರೆದಿದ್ದಾರೆ.
ಈ ಯೋಜನೆ ಪರಿಣಾಮಕಾರಿಯಾಗಲು ಏನು ಮಾಡಬೇಕು ಎಂಬ ಬಗ್ಗೆ ಸಹಾಣೆ ಹತ್ತು ಸಲಹೆಗಳನ್ನು ನೀಡಿದ್ದಾರೆ. ಮೊಟ್ಟಮೊದಲನೆಯದಾಗಿ, ಬಿಜೆಪಿ ಸಂಸದರು, ಶಾಸಕರು ನೋಟು ರದ್ದತಿಗೆ 6 ತಿಂಗಳು ಮೊದಲ ಆದಾಯ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ತಾಂತ್ರಿಕವಾಗಿ ರಾಜಕಾರಣಿಗಳು ಹೊಂದಿರಬೇಕಾದ ಪ್ರಮಾಣಕ್ಕಿಂತ ಹೆಚ್ಚು ನಗದು, ಚಿನ್ನ ಹಾಗೂ ಆಸ್ತಿ ಹೊಂದಿದ್ದರೆ, ಅಂಥವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು; ಟಂಕಶಾಲೆ ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡಬೇಕು. ಈ ಮೂಲಕ ತಮ್ಮ ಕಠಿಣ ಪರಿಶ್ರಮದ ಹಣಕ್ಕಾಗಿ ಜನ ಅಂಗಲಾಚುವ ಪರಿಸ್ಥಿತಿ ತಪ್ಪಬೇಕು ಎಂದು ಸಲಹೆ ನೀಡಿದ್ದಾರೆ.
ಕಪ್ಪು ಹಣ ಹೊಂದಿರುವವರಿಗೆ ಸರ್ಕಾರ ನೀಡಿದ ವಿನಾಯ್ತಿಗಳಿಂದ ಎಷ್ಟು ಹಣ ಬಂದಿದೆ ಹಾಗೂ ಯಾರು ಈ ಯೋಜನೆಯಡಿ ಆದಾಯ ಘೋಷಿಸಿಕೊಂಡಿದ್ದಾರೆ ಎನ್ನುವುದನ್ನು ಸರ್ಕಾರ ಬಹಿರಂಗಗೊಳಿಸಬೇಕು. ಅಮಿತ್ ಷಾ ಹೊರತುಪಡಿಸಿ ಉಳಿದ ಯಾವ ಮುಖಂಡರೂ ನವೆಂಬರ್ 8ಕ್ಕೆ ಮುನ್ನ ಇದ್ದ ಆಸ್ತಿ ವಿವರ ಬಹಿರಂಗಪಡಿಸಿಲ್ಲ. ತಕ್ಷಣ ಈ ಕೆಲಸ ಆಗಬೇಕು. ಲಂಚಕ್ಕಾಗಿ ಕೈಚಾಚುವ ಸರ್ಕಾರಿ ನೌಕರರಿಗೆ ಯಾವ ಪ್ರಮಾಣದ ಶಿಕ್ಷೆ ವಿಧಿಸಲಾಗುತ್ತದ ಎನ್ನುವುದೂ ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.