ಆದಾಯ ತೆರಿಗೆ ಇಲಾಖೆ ದಾಳಿಯಿಂದ ಸಂಗ್ರಹವಾದ ಹಣ ಎಷ್ಟು ಗೊತ್ತೇ?
ಹೊಸದಿಲ್ಲಿ, ಡಿ.16: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ನ.8 ರಂದು ಗರಿಷ್ಠ ಮೊತ್ತದ ನೋಟು ಅಮಾನ್ಯಗೊಳಿಸಿದ ಬಳಿಕ ಆದಾಯ ತೆರಿಗೆ ಇಲಾಖೆ ದೇಶಾದ್ಯಂತ 586 ಕಡೆಗಳಲ್ಲಿ ನಡೆಸಿರುವ ದಾಳಿಯಲ್ಲಿ ಸುಮಾರು 2,900 ಕೋಟಿ ರೂ. ಮೊತ್ತವನ್ನು ವಶಪಡಿಸಿಕೊಂಡಿದೆ.
300 ಕೋ.ರೂ.ಗೆ ಹೆಚ್ಚು ನಗದು, 79 ಕೋಟಿ ರೂ. ಹೊಸ 2000 ರೂ.ಮುಖ ಬೆಲೆಯ ಕರೆನ್ಸಿ ನೋಟುಗಳು ಹಾಗೂ 2,600ರೂ. ಲೆಕ್ಕಕ್ಕೆ ಸಿಗದ ಆದಾಯವನ್ನು ಐಟಿ ಇಲಾಖೆ ವಶಪಡಿಸಿಕೊಂಡಿದೆ.
ತಮಿಳುನಾಡು ರಾಜ್ಯವೊಂದರಲ್ಲೇ ಗರಿಷ್ಠ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದ್ದು, ಚೆನ್ನೈನಲ್ಲಿ ನಡೆಸಲಾಗಿರುವ ಒಂದೇ ದಾಳಿಯಲ್ಲಿ 100 ಕೋ.ರೂ.ಗೂ ಹೆಚ್ಚು ನಗದನ್ನು ಐಟಿ ಇಲಾಖೆ ವಶಕ್ಕೆ ಪಡೆದಿತ್ತು. ತಮಿಳುನಾಡಿನಲ್ಲಿ 52 ಕೋ.ರೂ. ಚಿನ್ನದ ಗಟ್ಟಿಯಲ್ಲದೆ, ಒಟ್ಟು 140 ಕೋ.ರೂ.ಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ.
ದಿಲ್ಲಿಯ ವಕೀಲರ ಮನೆಗೆ ಇತ್ತೀಚೆಗೆ ನಡೆಸಲಾಗಿರುವ ಐಟಿ ದಾಳಿಯಲ್ಲಿ 14 ಕೋ.ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸಿಕ್ಕಿಬಿದ್ದಿರುವ ವಕೀಲ ಅಕ್ಟೋಬರ್ನಲ್ಲಿ 125 ಕೋ.ರೂ. ಲೆಕ್ಕವಿಲ್ಲದೆ ಆದಾಯವನ್ನು ಘೋಷಿಸಿದ್ದ. 2 ವಾರಗಳ ಹಿಂದೆ ತೆರಿಗೆ ಅಧಿಕಾರಿಗಳು ವಕೀಲನ ಖಾತೆಯಿರುವ ಬ್ಯಾಂಕ್ಗೆ ತೆರಳಿ ಸುಮಾರು 19 ಕೋ.ರೂ. ನಗದನ್ನು ಜಪ್ತಿ ಮಾಡಿದ್ದು, ಇದು ಕಾಳಧನವಾಗಿದೆ ಎಂದು ಶಂಕಿಸಲಾಗಿದೆ.
ಐಟಿ ಇಲಾಖೆ ಬುಧವಾರ ಪುಣೆಯ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮೇಲೆ ದಾಳಿ ನಡೆಸಿ ಆಗಸ್ಟ್ನಲ್ಲಿ ಓರ್ವ ವ್ಯಕ್ತಿ ಬ್ಯಾಂಕ್ನ ಪಾರ್ವತಿ ಶಾಖೆಯಲ್ಲಿ 15 ಲಾಕರ್ಗಳನ್ನು ಆಕ್ರಮಿಸಿಕೊಂಡಿರುವುದನ್ನು ಬಹಿರಂಗಪಡಿಸಿತ್ತು. 15 ಲಾಕರ್ಗಳಲ್ಲಿ 9.85 ಕೋ. ರೂ. ನಗದು ಜಪ್ತಿ ಮಾಡಲಾಗಿದ್ದು, ರೂ.8 ಕೋ.ರೂ. 2,000 ಹೊಸ ನೋಟುಗಳು ಹಾಗೂ 1.85 ಕೋ.ರೂ. 100 ರೂ. ನೋಟುಗಳು ಪತ್ತೆಯಾಗಿದೆ. ಐಟಿ ಅಧಿಕಾರಿಗಳು ಪುಣೆ ನಗರದಲ್ಲಿ ನಡೆಸಿರುವ ಕಾರ್ಯಾಚರಣೆಯಲ್ಲಿ ಒಟ್ಟು 10.80 ಕೋ.ರೂ.ಪತ್ತೆ ಹಂಚಿದ್ದಾರೆ. ಈ ಪೈಕಿ 8.8 ಕೋ.ರೂ. ಹೊಸ ಕರೆನ್ಸಿ ನೋಟುಗಳು ಪತ್ತೆಯಾಗಿವೆ.