ಶಬರಿಮಲೆಯಲ್ಲಿ ಕಾಲ್ತುಳಿತ:ಕನಿಷ್ಠ 20 ಭಕ್ತರಿಗೆ ಗಾಯ
ಶಬರಿಮಲೆ,ಡಿ.25: ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಇಂದು ಸಂಜೆ ನೂಕುನುಗ್ಗಲಿನಿಂದುಂಟಾದ ಕಾಲ್ತುಳಿತದಲ್ಲಿ ಕನಿಷ್ಠ 20 ಅಯ್ಯಪ್ಪ ಭಕ್ತರು ಗಾಯಗೊಂಡಿದ್ದಾರೆ. ‘‘ತಂಗ ಅಂಗಿ ’ಮೆರವಣಿಗೆ ಇಂದು ಕ್ಷೇತ್ರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಭಾರೀ ಪ್ರಮಾಣದಲ್ಲಿ ಭಕ್ತರು ಸೇರಿದ್ದರು.
ಗಾಯಾಳುಗಳನ್ನು ಸನ್ನಿಧಾನಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ಆರ್.ಗಿರಿಜಾ ತಿಳಿಸಿದರು.
ಸನ್ನಿಧಾನಂ ಮತ್ತು ಮಲಿಕಾಪುರಂ ನಡುವೆ ಸಣ್ಣ ಪ್ರಮಾಣದಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ಅವರು ತಿಳಿಸಿದರು.
41 ದಿನಗಳ ಮಂಡಲ ಪೂಜೆಯು ಅಂತ್ಯಗೊಳ್ಳುವ ಮುನ್ನಾದಿನವಾದ ಇಂದು ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರು.
ನಾಳೆ ನಡೆಯಲಿರುವ ಮಂಡಲ ಪೂಜೆ ಸಂದರ್ಭ ಅಯ್ಯಪ್ಪ ಸ್ವಾಮಿಗೆ ತೊಡಿಸಲಾಗುವ ಚಿನ್ನಾಭರಣಗಳ ‘ತಂಗ ಅಂಗಿ ’ಮೆರವಣಿಗೆ ಇಂದು ಸಂಜೆ ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ನೂಕುನುಗ್ಗಲು ಸಂಭವಿಸಿತ್ತು.
ಮಂಡಲ ಪೂಜೆಗೆ ನಾಲ್ಕು ದಿನಗಳಿರುವಾಗ ಅರಣ್ಮೂಲ ಪಾರ್ಥಸಾರಥಿ ದೇವಸ್ಥಾನದಿಂದ ಈ ಮೆರವಣಿಗೆ ಆರಂಭಗೊಳ್ಳುತ್ತದೆ.
‘ತಂಗ ಅಂಗಿ’ಯನ್ನು ತಂದ ಸಂದರ್ಭ ಕ್ಷೇತ್ರದಲ್ಲಿ ಯಾತ್ರಿಗಳ ಭಾರಿ ದಟ್ಟಣೆಯಿತ್ತು ಎಂದು ದೇವಸ್ವಂ ಸಚಿವ ಕೆ.ಸುರೇಂದ್ರನ್ ತಿಳಿಸಿದರು.
ಭಾರೀ ದಟ್ಟಣೆಯ ಹಿನ್ನೆಲೆಯಲ್ಲಿ ಪಂಪಾದಿಂದ ಸನ್ನಿಧಾನದವರೆಗೆ ಯಾತ್ರಿಗಳ ಆಗಮನವನ್ನು ಪೊಲೀಸರು ನಿಯಂತ್ರಿಸುತ್ತಿದ್ದಾರೆ.