ಐಸಿಸ್ ವಿರುದ್ಧ ಅಭಿಯಾನ
ಮುಸ್ಲಿಮ್ ಗುಂಪಿನ ಹೊಸ ವರ್ಷದ ನಿರ್ಧಾರ
ಮುಂಬೈ, ಜ.2: ಹೊಸ ವರ್ಷದ ನಿರ್ಣಯವೊಂದರಲ್ಲಿ ನಗರದ ಮುಸ್ಲಿಮರ ಗುಂಪೊಂದು ಶುಕ್ರವಾರ ‘ಐಸಿಸ್ ವಿರುದ್ಧ ಮುಸ್ಲಿಮರು’ ಎಂಬ ಅಭಿಯಾನಕ್ಕೆ ಚಾಲನೆ ನೀಡಿದೆ.
ಜಿಹಾದಿ ಭಯೋತ್ಪಾದಕ ಸಂಘಟನೆಯ ಬರ್ಬರತೆಯನ್ನು ಖಂಡಿಸಿರುವ ಗುಂಪು, ಮುಸ್ಲಿಮ್ ಯುವಕರು ಐಸಿಸ್ಗೆ ಸೇರುವುದನ್ನು ತಡೆಯುವ ಕ್ರಮಗಳ ಸಿದ್ಧತೆಯಲ್ಲಿ ತೊಡಗಿದೆ.
ನಗರದ ಸರಕಾರೇತರ ಸಂಘಟನೆ ಸಾಹಸ್ ಪ್ರತಿಷ್ಠಾನ ಹಾಗೂ ಚಿಂತನ ಚಿಲುಮೆ ಉರ್ದು ಮರ್ಕಝ್ಗಳ ಜಂಟಿ ಕಾರ್ಯಕ್ರಮವಾಗಿರುವ ಈ ಅಭಿಯಾನವು ಸ್ವಯಂ ಸೇವಕರ ಕಾರ್ಯಪಡೆಯೊಂದನ್ನು ರಚಿಸಿದೆ. ಅದು ಆನ್ಲೈನ್ ಪ್ರಚಾರಕ್ಕೆ ಬಲಿಯಾಗಿ ‘ನಕಲಿ ಜಿಹಾದ್’ನಲ್ಲಿ ಸಿಲುಕಿದವರು, ಸಿಲುಕುವ ಸಂಭವವಿರುವವರು, ತೀವ್ರಗಾಮಿಗಳನ್ನಾಗಿ ಮಾಡಲ್ಪಟ್ಟವರು ಹಾಗೂ ಐಸಿಸ್ಗೆ ಸೇರುವ ಸಂಭವವಿರುವವರನ್ನು ಗುರುತಿಸಿ, ಆಪ್ತ ಸಮಾಲೋಚನೆ ನಡೆಸಲಿದೆ.
ಭೆಂಡಿ ಬಝಾರ್ನ ಇಮಾಮ್ವಾಡಾ ಮುನ್ಸಿಪಲ್ ಉರ್ದು ಸ್ಕೂಲ್ ಮೈದಾನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ, ಹೊಸ ವರ್ಷದ ಹೊಸ್ತಿಲಲ್ಲಿ ಐಸಿಸ್ ವಿರುದ್ಧ ಸೈದ್ಧಾಂತಿಕ ಸಮರ ಆರಂಭಿಸುವುದಕ್ಕಿಂತ ಒಳ್ಳೆಯ ಕೆಲಸ ಬೇರಿರಲಾರದು. ಹೊಸ ವರ್ಷದಂದು ಏನು ಮಾಡುವುದೆಂದು ತಾವು ಯೋಚಿಸುತ್ತಿದ್ದಾಗ, ಐಸಿಸ್ ಹಾಗೂ ಇತರ ಭಯೋತ್ಪಾದಕ ಸಂಘಟನೆಗಳೆಂಬ ವೈರಾಣುಗಳಿಂದ ಹೇಗೆ ದೂರ ಉಳಿಯಬಹುದೆಂಬ ಕುರಿತು ಯುವಕರಲ್ಲಿ ಜಾಗೃತಿ ಹುಟ್ಟಿಸುವ ಕೆಲಸವನ್ನು ಯಾಕೆ ಮಾಡಬಾರದೆಂಬ ಸಲಹೆ ಬಂದಿತು. ಈಗ ತಾವು ಯಾವುದೇ ಭಯೋತ್ಪಾದಕ ಸಂಘಟನೆಯ ಪ್ರಚಾರಕ್ಕೆ ಬಲಿ ಬೀಳದಿರಿ ಎಂಬ ಸಂದೇಶದೊಂದಿಗೆ ಗರಿಷ್ಠ ಸಂಖ್ಯೆಯ ಮುಸ್ಲಿಮ್ ಯುವಕರನ್ನು ತಲುಪುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಸಾಹಸ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಈ ಅಭಿಯಾನದ ಹಿಂದಿನ ಚಾಲಕ ಶಕ್ತಿ ಸೈಯದ್ ಫುರ್ಕಾನ್ ಎಂಬವರು ವಿವರಿಸಿದ್ದಾರೆ.
ಡಿ.31ರ ರಾತ್ರಿ ತನ್ನ ಗುಂಪು ನಾರಿಮನ್ ಪಾಯಿಂಟ್ನಲ್ಲಿ ಮಾನವ ಸರಪಳಿ ರಚಿಸಿ, ಮದ್ಯ ಸೇವಿಸಿ ವಾಹನ ಚಾಲನೆಯಿಂದ, ಭಯೋತ್ಪಾದನೆ ಹಾಗೂ ಅಸಹಿಷ್ಣುತೆಗಳ ವರೆಗಿನ ಪಿಡುಗುಗಳ ವಿರುದ್ಧ ಜಾಗೃತಿ ಹುಟ್ಟಿಸಿದೆಯೆಂದು ಅವರು ತಿಳಿಸಿದ್ದಾರೆ.
ಪೋಸ್ಟರ್, ಬ್ಯಾನರ್ ಹಾಗೂ ಕರಪತ್ರಗಳ ಮೂಲಕ ಐಸಿಸ್ ವಿರೋಧಿ ಸಂದೇಶವನ್ನು ಹರಡುವುದು ಮಾತ್ರವಲ್ಲದೆ, ಸಾಮಾಜಿಕ ಜಾಲ ತಾಣಗಳನ್ನು ಉಪಯೋಗಿಸುವಾಗ ಎಚ್ಚರಿಕೆಯಿಂದಿರುವಂತೆಯೂ ಮುಸ್ಲಿಮ್ ಯುವಕರಿಗೆ ಸ್ವಯಂ ಸೇವಕರು ತಿಳಿಸಲಿದ್ದಾರೆ.
ಐಸಿಸ್ ಮುಖ್ಯವಾಗಿ ಆನ್ಲೈನ್ ಪ್ರಚಾರದ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದೆ. ವಿವಿಧ ಕಾರಣಗಳಿಂದ ಭ್ರಮನಿರಸನ ಅಥವಾ ಅಸಮಾಧಾನಗೊಂಡಿರುವ ವಿದ್ಯಾವಂತ ಯುವಕರನ್ನೇ ಅವರು ಗುರಿಯಿರಿಸುತ್ತಾರೆ. ಇಸ್ಲಾಮಿನ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲಲು ಭಯೊತ್ಪಾದಕ ಸಂಘಟನೆಗಳು ನೀಡುವ ಕಾರಣಗಳಿಗೆ ಮರುಳಾಗದಂತೆ ತಾವು ಯುವಕರಿಗೆ ತಿಳಿ ಹೇಳುತ್ತೇವೆ. ವಾಸ್ತವವಾಗಿ ಐಸಿಸ್ನ ಕೃತ್ಯಗಳು ಇಸ್ಲಾಮಿಗೆ ವಿರುದ್ಧ ಹಾಗೂ ಅಮಾನವೀಯವಾದವುಗಳೆಂದು ಉರ್ದು ಮರ್ಕಝ್ನ ಅಧ್ಯಕ್ಷ ಝುಬೇರ್ ಆಝ್ಮಿ ಹೇಳಿದ್ದಾರೆ. ಭಯೋತ್ಪಾದಕ ಸಂಘಟನೆಗಳು ಯುವತಿಯರನ್ನೂ ನೇಮಿಸಿಕೊಂಡು ಅವರ ಮೂಲಕ ಯುವಕರಿಗೆ ಬಲೆ ಬೀಸುತ್ತವೆ. ಅದಕ್ಕಾಗಿ ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ನಡೆಸಲು ಸ್ವಯಂ ಸೇವಕಿಯರನ್ನು ಸೇರಿಸಿಕೊಳ್ಳಲಾಗುವುದು.
ಅಸಂಖ್ಯಾತ ಮುಸ್ಲಿಮ್ ಕಾಲೇಜು ವಿದ್ಯಾರ್ಥಿನಿಯರು ಪದವಿ ಮಟ್ಟಕ್ಕೆ ತಲುಪಿರುವ ಮೊದಲ ಪೀಳಿಗೆಯ ಶಿಕ್ಷಣಾರ್ಥಿಗಳಾಗಿದ್ದಾರೆ. ಅವರು, ಮಹಿಳೆಯರ ನೇಮಕಾತಿಗೆ ಇಚ್ಛಿಸುವ ಭಯೋತ್ಪಾದಕ ಸಂಘಟನೆಗಳ ಸುಲಭ ಗುರಿಗಳಾಗಿದ್ದು, ಸುಲಭವಾಗಿ ಬಲೆಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಹಣದ ಆಮಿಷ, ಮದುವೆಯ ಭರವಸೆ ಹಾಗೂ ಸಾಹಸದ ಬದುಕಿನ ಆಕರ್ಷಣೆಗಳಿಗೆ ಹಲವು ಯುವತಿಯರು ಬಲಿಯಾಗಬಹುದೆಂದು ವಡಾಲದ ಎಸ್ಎನ್ಡಿಟಿ ಕಾಲೇಜಿನ ಉರ್ದು ಪ್ರಾಧ್ಯಾಪಕಿ ಹಾಗೂ ‘ಐಸಿಸ್ ವಿರುದ್ಧ ಮುಸ್ಲಿಮರು’ ಗುಂಪಿನ ಮಹಿಳಾ ಘಟಕದ ಮುಖ್ಯಸ್ಥೆ ಶಬಾನಾ ಖಾನ್ ಅಭಿಪ್ರಾಯಿಸಿದ್ದಾರೆ. ಸ್ವಯಂ ಸೇವಕರು ಹೆತ್ತವರ ನಡುವೆಯೂ ಕೆಲಸ ಮಾಡಲಿದ್ದಾರೆ. ತಮ್ಮ ಮಕ್ಕಳಲ್ಲಿ ಒಮ್ಮಿಂದೊಮ್ಮೆಗೆ ಅತಿ ಧಾರ್ಮಿಕತನ ಅಥವಾ ಜಾಲ ತಾಣಗಳಲ್ಲಿ ಹೆಚ್ಚು ಸಮಯ ಕಳೆಯುವುದು ಇಂತಹ ನಡವಳಿಕೆಯ ಬದಲಾವಣೆಗಳು ಕಂಡು ಬಂದಲ್ಲಿ ಹೆತ್ತವರು ತಮ್ಮನ್ನು ಸಂಪರ್ಕಿಸಬೇಕು. ಅಂತಹ ಮಕ್ಕಳು ತೀವ್ರಗಾಮಿಗಳಾಗದಂತೆ ಖಚಿತಪಡಿಸಿ, ಪ್ರಧಾನ ವಾಹಿನಿಗೆ ತಾವು ಹಿಂದೆ ತರುತ್ತೇವೆಂದು ಫರೀದ್ ಖಾನ್ ತಿಳಿಸಿದ್ದಾರೆ.