ನೋಟುಗಳಲ್ಲಿ ಗಾಂಧಿ ಚಿತ್ರ ಬೇಡ: ಗಾಂಧಿ ಮೊಮ್ಮಗ ತುಷಾರ್ ಗಾಂಧಿ
ಹೊಸದಿಲ್ಲಿ,ಜ.15: ಕರೆನ್ಸಿಗಳಿಂದ ಗಾಂಧಿ ಚಿತ್ರ ತೆಗೆಯಬೇಕು ಎಂದು ಮೊಮ್ಮಗ ತುಷಾರ್ ಗಾಂಧಿ ಹೇಳಿದ್ದಾರೆ. ಭ್ರಷ್ಟಾಚಾರಿಗಳಾದ ರಾಜಕಾರಣಿಗಳು ಈ ಹಣವನ್ನು ಉಪಯೋಗಿಸುತ್ತಾರೆ. ಆದ್ದರಿಂದ ಕರೆನ್ಸಿಯಿಂದ ಗಾಂಧಿ ಫೋಟೊ ತೆಗೆಯಬೇಕು ಎಂದು ಅವರು ಸುದ್ದಿ ಸಂಸ್ಥೆ ಐಎನ್ಐಗೆ ತಿಳಿಸಿದ್ದಾರೆ. ಚರಕದಲ್ಲಿ ನೂತು ಬಟ್ಟೆ ತಯಾರಿಸಿದ ಗಾಂಧಿಗೂ ಹತ್ತು ಲಕ್ಷ ರೂಪಾಯಿ ಸೂಟ್ ಧರಿಸುವವರು ಚರಕದಲ್ಲಿ ಕೂತು ಫೋಟೊ ತೆಗೆಸಿಕೊಳ್ಳುವುದಕ್ಕೂ ಪರಸ್ಪರ ವ್ಯತ್ಯಾಸ ಇದೆ ಎಂದು ಕಳೆದ ದಿನ ತುಷಾರ್ ಗಾಂಧಿ ಹೇಳಿದ್ದರು. ಗಾಂಧೀಜಿಯ ಚಿತ್ರದ ಬದಲಿಗೆ ಮೋದಿ ಫೋಟೊದ ಕ್ಯಾಲಂಡರ್ನ್ನು ಖಾದಿ ಗ್ರಾಮೋದ್ಯೋಗ ಕಮಿಷನ್ ಬಿಡುಗಡೆಗೊಳಿಸಿದ್ದಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಪ್ರಮಾದಗಳನ್ನೇ ರೂಢಿ ಮಾಡಿಕೊಂಡ ಕೇಂದ್ರ ಸರಕಾರ ಗಾಂಧಿ ಬದಲಿಗೆ ಕ್ಯಾಲಂಡರ್ನಲ್ಲಿ ಮೋದಿಯನ್ನು ಯೋಜನಾ ಬದ್ಧವಾಗಿ ಕುಳ್ಳಿರಿಸಿದೆ. ಚರಕವು ಉತ್ಪಾದನೆ, ಬಡವರ ಸಶಕ್ತೀಕರಣದ ಪ್ರತೀಕ ಹಾಗೂ ಸ್ವಾತಂತ್ರ್ಯ ಸಮರದ ಅಸ್ತ್ರ ಆಗಿತ್ತು ಎಂದು ತುಷಾರ್ ಗಾಂಧಿ ಹೇಳಿದರು.
ಗಾಂಧಿಗಿಂತ ಮೋದಿ ದೊಡ್ಡ ಮಾರುಕಟ್ಟೆ ಹೊಂದಿದ್ದಾರೆ ಎಂದು ಹರ್ಯಾಣದ ಸಚಿವ ಅನಿಲ್ ವಿಜ್ ನಿನ್ನೆ ಹೇಳಿದ್ದರು. ಗಾಂಧಿಯ ಚಿತ್ರ ಕರೆನ್ಸಿಯಲ್ಲಿ ಬಂದ ಬಳಿಕ ರೂಪಾಯಿ ಮೌಲ್ಯ ಕುಸಿತವಾಯಿತು. ಆದ್ದರಿಂದ ನೋಟುಗಳಿಂದ ಹೊಸ ಗಾಂಧಿ ಚಿತ್ರ ಹಾಕಬೇಕೆಂದು ವಿಜ್ ನೀಡಿದ್ದ ಹೇಳಿಕೆ ವಿವಾದಗೊಂಡ ಬಳಿಕ ಅವರು ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದರು.