ಸಲ್ಮಾನ್ ಖಾನ್ ನಿರ್ದೋಷಿ ;ಜೋಧ್ ಪುರ ನ್ಯಾಯಾಲಯದ ತೀರ್ಪು
ಕೃಷ್ಣ ಮೃಗ ಬೇಟೆಯಾಡಲು ಅಕ್ರಮ ಶಸ್ತ್ರಾಸ್ತ್ರ ಬಳಕೆ ಮಾಡಿದ ಆರೋಪ
ಜೋಧ್ ಪುರ, ಜ.18: ಹದಿನೆಂಟು ವರ್ಷಗಳ ಹಿಂದೆ ರಾಜಸ್ಥಾನದ ಜೋಧ್ ಪುರದ ಕಂಕಣಿ ಗ್ರಾಮದಲ್ಲಿ ಕೃಷ್ಣ ಮೃಗ ಬೇಟೆಯಾಡಲು ಅಕ್ರಮ ಶಸ್ತ್ರಾಸ್ತ್ರ ಬಳಕೆ ಮಾಡಿದ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಿರ್ದೋಷಿ ಎಂದು ಜೋಧ್ ಪುರದ ಸಿಜೆಎಂ ನ್ಯಾಯಾಲಯವು ಇಂದು ತೀರ್ಪು ನೀಡಿದೆ.
ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ದಲ್ಪತ್ ಸಿಂಗ್ ರಾಜಪುರೋಹಿತ್ ಅವರು ಸಲ್ಮಾನ್ ಖಾನ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಬಳಕೆ ಮಾಡಿದ ಬಗ್ಗೆ ಯಾವುದೇ ಸಾಕ್ಷ್ಯಧಾರಗಳು ಇಲ್ಲ ಎಂಬ ಕಾರಣಕ್ಕಾಗಿ ಅವರನ್ನು ಖುಲಾಸೆಗೊಳಿಸಿ ತೀರ್ಪು ನೀಡಿದರು.
1998ರ ಅ.1 ಮತ್ತು 2ರಂದು ಕೃಷ್ಣ ಮೃಗ ಬೇಟಿಯಾಡಲು ಸಲ್ಮಾನ್ ಖಾನ್ ಲೈಸೆನ್ಸ್ ಮುಗಿದ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಸಲ್ಮಾನ್ ಖಾನ್ ವಿರುದ್ಧ ಅರಣ್ಯ ಇಲಾಖೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು
ಈ ಸಂಬಂಧ ಜನವರಿ 9 ರಂದು ವಿಚಾರಣೆ ನಡೆಸಿರುವ ಜೋಧ್ ಪುರ ನ್ಯಾಯಾಲಯದ ನ್ಯಾಯಾಧೀಶರಾದ ದಲ್ಪತ್ ಸಿಂಗ್ ರಾಜಪುರೋಹಿತ್ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದ್ದರು. ಸಾದಂರ್ಭಿಕ ಸಾಕ್ಷ್ಯಗಳ ಕೊರತೆ ಹಾಗೂ ಸಂಶಯಾತೀತ ಸಾಕ್ಷ್ಯಗಳ ಕೊರತೆ ಹಿನ್ನಲೆಯಲ್ಲಿ ನ್ಯಾಯಾಲಯ ಸಲ್ಮಾನ್ ಖಾನ್ ರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಧೀಶ ದಲ್ಪತ್ ಸಿಂಗ್ ರಾಜಪುರೋಹಿತ್ ತೀರ್ಪು ಓದಿದರು.