ಆರ್ಬಿಐ ಗವರ್ನರ್ ರನ್ನು ಪಾರು ಮಾಡಿದ ಮನಮೋಹನ್ ಸಿಂಗ್!
ನೋಟು ರದ್ದತಿ: ಊರ್ಜಿತ್ ಫಜೀತಿ
ಹೊಸದಿಲ್ಲಿ, ಜ.19: ನೋಟು ರದ್ದತಿ ವಿಚಾರದಲ್ಲಿ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ್ದ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ ಡಾ.ಮನಮೋಹನ ಸಿಂಗ್ ಅವರು ಬುಧವಾರ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ರಕ್ಷಣೆಗೆ ಧಾವಿಸಿದ ಅಪರೂಪದ ಸನ್ನಿವೇಶ ನಡೆಯಿತು.
ನೋಟು ರದ್ದತಿ ವಿಚಾರದಲ್ಲಿ ಊರ್ಜಿತ್ ಪಟೇಲ್ಗೆ ಇಕ್ಕಟ್ಟಿನ ಪ್ರಶ್ನೆ ಎದುರಾದಾಗ ಮಧ್ಯಪ್ರವೇಶಿಸಿದ ಸಿಂಗ್, ಇದಕ್ಕೆ ಊರ್ಜಿತ್ ಉತ್ತರಿಸಬೇಕಿಲ್ಲ ಎಂದು ಬಚಾವ್ ಮಾಡಿದರು. ಬ್ಯಾಂಕಿಂಗ್ ನಿರ್ಬಂಧವನ್ನು ಸಡಿಲಿಸಿಲ್ಲವೇ ಎಂಬ ಪ್ರಶ್ನೆ ಊರ್ಜಿತ್ಗೆ ಎದುರಾಗಿತ್ತು.
ಈ ವಿಚಿತ್ರ ಸನ್ನಿವೇಶ ಎದುರಾದದ್ದು ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ. ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಅವರು, "ನೋಟು ರದ್ದತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಆರ್ಬಿಐ ಗವರ್ನರ್ ಸೂಕ್ತ ಉತ್ತರ ನೀಡುತ್ತಿಲ್ಲ. ಬ್ಯಾಂಕ್ ನಿರ್ಬಂಧ ಸಡಿಲಿಸಿದರೆ, ಅದು ಅರಾಜಕತೆಗೆ ಕಾರಣವಾಗುತ್ತವೆಯೇ" ಎಂದು ಪ್ರಶ್ನಿಸಿದರು.
ಆಗ ಮಧ್ಯಪ್ರವೇಶಿಸಿದ ಮಾಜಿ ಪ್ರಧಾನಿ, ಈ ಪ್ರಶ್ನೆಗೆ ನೀವು ಉತ್ತರಿಸುವ ಅಗತ್ಯವಿಲ್ಲ ಎಂದು ಹೇಳಿ ಮುಜುಗರ ತಪ್ಪಿಸಿದರು. ಈ ವಿಷಯದ ಬಗ್ಗೆ ಆರ್ಬಿಐ ಗವರ್ನರ್ ಉತ್ತರ ನೀಡಬೇಕು ಎಂದು ಒತ್ತಡ ತರಬೇಡಿ ಎಂದು ಮಾಜಿ ಆರ್ಬಿಐ ಗವರ್ನರ್ ಕೂಡಾ ಆಗಿರುವ ಸಿಂಗ್ ಸದಸ್ಯರ ಮನವೊಲಿಸಿದರು.