ಪಂಜಾಬ್, ಗೋವಾ ಅಸೆಂಬ್ಲಿ ಚುನಾವಣೆಯ ಮೇಲೆ ಎಎಪಿ ಕಣ್ಣು
ಕೇಜ್ರಿವಾಲ್ ಫುಲ್ಬಿಝಿ, ದಿಲ್ಲಿಯಲ್ಲಿದ್ದಾರೆ ಓರ್ವ ಸಚಿವ
ಹೊಸದಿಲ್ಲಿ, ಜ.23: ಪಂಜಾಬ್ ಹಾಗೂ ಗೋವಾದ ವಿಧಾನಸಭಾ ಚುನಾವಣೆಗೆ ಇನ್ನು ಎರಡೇ ವಾರ ಬಾಕಿ ಇರುವ ಕಾರಣ ಆಮ್ ಆದ್ಮಿ ಪಕ್ಷ ಯಾವ ಅವಕಾಶವನ್ನು ಕೈಚೆಲ್ಲಲು ಬಯಸುತ್ತಿಲ್ಲ. ಪಕ್ಷದ ಸಂಚಾಲಕ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಸ್ತುತ ಗೋವಾದಲ್ಲಿ ಪ್ರಚಾರದಲ್ಲಿ ತೊಡಗಿದ್ದರೆ, ದಿಲ್ಲಿಯ ಎಲ್ಲ ಶಾಸಕರು ಪಂಜಾಬ್ನಲ್ಲಿ ಪ್ರಚಾರ ನಿರತರಾಗಿದ್ದಾರೆ.
ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಸಾರಿಗೆ ಸಚಿವ ಗೋಪಾಲ್ ರಾಯ್ ಸಿಎಂ ಕೇಜ್ರಿವಾಲ್ ಜೊತೆ ಗೋವಾದಲ್ಲಿದ್ದಾರೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಹಾಗೂ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಪಂಜಾಬ್ನಲ್ಲಿದ್ದಾರೆ. ಪರಿಸರ ಸಚಿವ ಇಮ್ರಾನ್ ಹುಸೈನ್ ಮಾತ್ರ ದಿಲ್ಲಿಯಲ್ಲಿದ್ದಾರೆ.
ಕೇಜ್ರಿವಾಲ್ ಗೋವಾ ಹಾಗೂ ಪಂಜಾಬ್ನಲ್ಲಿ ಸ್ಟಾರ್ ಪ್ರಚಾರಕರಾಗಿರುವ ಕಾರಣ ಚುನಾವಣೆ ನಡೆಯುವ ಫೆ.4ರ ತನಕ ದಿಲ್ಲಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.
‘‘ಇದರಿಂದ ಕೆಲಸ ಕಾರ್ಯಕ್ಕೆ ಧಕ್ಕೆಯಾಗುತ್ತಿಲ್ಲ. ಕ್ಯಾಬಿನೆಟ್ ವಾರಾಂತ್ಯಕ್ಕೆ ಹೊರಗೆ ಹೋಗಿ ಸೋಮವಾರ ವಾಪಸಾಗಲಿದೆ’’ ಎಂದು ಪಕ್ಷದ ಮೂಲಗಳು ತಿಳಿಸಿವೆ.