ಜನತೆ ತೆರಿಗೆ ಹಣ ಮನಸೋ ಇಚ್ಛೆ ಮಠಗಳಿಗೆ ನೀಡಲು ಆಗದು: ಸಮಾಜ ಕಲ್ಯಾಣ ಸಚಿವ ಆಂಜನೇಯ
ಕಲಬುರಗಿ, ಜ. 23: ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಶ್ರೀಮಂತ ಮಠಗಳಿಗೆ ಹಣಕಾಸಿನ ನೆರವು ನೀಡುವುದಿಲ್ಲ. ಶ್ರೀಮಂತ ಮಠಗಳಿಗೆ ಸಾಕಷ್ಟು ಭಕ್ತರಿದ್ದು, ಅವರು ಕಾಣಿಕೆ ನೀಡುತ್ತಾರೆ. ಬಡ ಮತ್ತು ಸಾಮಾಜಿಕ ಕಳಕಳಿಯುಳ್ಳ ಮಠಗಳಿಗೆ ಮಾತ್ರ ಸರಕಾರ ಅನುದಾನ ನೀಡಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭಕ್ಕೆ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಮಠ-ಮಾನ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದ ಆರೋಪ ಸರಿಯಲ್ಲ ಎಂದು ಆಕ್ಷೇಪಿಸಿದರು.
ರಾಜ್ಯ ಸರಕಾರದ ಹಣವೇನು ಬಿಟ್ಟಿಯಲ್ಲ. ಅದು ಜನ ಸಾಮಾನ್ಯರ ತೆರಿಗೆ ಹಣ. ಅದನ್ನು ಮನಸೋ ಇಚ್ಛೆ ವೆಚ್ಚ ಮಾಡಲು ಆಗುವುದಿಲ್ಲ. ಈ ಸಂಬಂಧ ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಏನಾದರೂ ಹೇಳಿಕೆ ನೀಡಿದರೂ ತಾವೂ ಆ ಬಗ್ಗೆ ಲಕ್ಷ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರ ಪಕ್ಷದ ಹೈಕಮಾಂಡ್ಗೆ ಬಿಟ್ಟದ್ದು. ಚುನಾವಣೆಯನ್ನು ಸಾಮೂಹಿಕ ನಾಯಕತ್ವ ಮತ್ತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲೆ ಎದುರಿಸುತ್ತೇವೆ ಎಂದ ಅವರು, ದಲಿತ ಮುಖ್ಯಮಂತ್ರಿ ಆಯ್ಕೆ ಚುನಾವಣೆ ಬಳಿಕ ಚರ್ಚೆ ಮಾಡೋಣ ಎಂದು ಹೇಳಿದರು.