ಮುಂಬೈ ಪೌರ ಚುನಾವಣೆಯಲ್ಲಿ ಬಿಜೆಪಿ-ಸೇನೆ ಮೈತ್ರಿ ಸಾಧ್ಯತೆ ತಳ್ಳಿಹಾಕಿದ ಉದ್ಧವ್ ಠಾಕ್ರೆ
ಹೊಸದಿಲ್ಲಿ,ಜ.26: ತನ್ನ ಪಕ್ಷವು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗಾಗಿ ಬಿಜೆಪಿಯೊಡನೆ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಗುರುವಾರ ಹೇಳಿದ್ದಾರೆ.
ಶಿವಸೇನೆಯಿಂದ ಸೌಹಾರ್ದಯುತ ಸ್ಥಾನ ಹಂಚಿಕೆ ಸೂತ್ರಕ್ಕೆ ನಾಂದಿ ಹಾಡಬಹು ದಾದ ಧನಾತ್ಮಕ ಪ್ರಸ್ತಾವನೆಗಾಗಿ ತನ್ನ ಪಕ್ಷವು ಕಾಯುತ್ತಿದೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರಾವ್ಸಾಹೇಬ್ ಧನ್ವೆ ಅವರು ಸೋಮವಾರ ಹೇಳಿದ್ದರು.
ಸಾಧ್ಯವಿರುವೆಡೆಗಳಲ್ಲಿ ನಾವು ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತೇವೆ. ಮೈತ್ರಿ ಸಾಧ್ಯವಾಗದ ಕಡೆಗಳಲ್ಲಿ ನಮ್ಮ ಸ್ವಂತ ಬಲದಲ್ಲಿ ಸ್ಪರ್ಧಿಸುತ್ತೇವೆ ಎಂದು ಅವರು ತಿಳಿಸಿದ್ದರು.
ಆದರೆ ಮಂಗಳವಾರ ಬಿಜೆಪಿಯೊಂದಿಗೆ ತನ್ನ ಪಕ್ಷದ ವಿಫಲ ಮಾತುಕತೆಯನ್ನು ಪ್ರಸ್ತಾಪಿಸದ ಉದ್ಧವ್,ಶಾಂತಿಯಿಂದಿರೋಣ ಮತ್ತು ಆಟವನ್ನು ನೊಡೋಣ ಎಂದಷ್ಟೇ ಹೇಳಿದ್ದರು. ರಾಜಕೀಯ ವಿಷಯಗಳ ಬಗ್ಗೆ ತಾನು ಜ.26ರಂದು ಮಾತನಾಡುತ್ತೇನೆ ಎಂದಿದ್ದ ಅವರು, ಮೈತ್ರಿ ಸಾಧ್ಯವಿಲ್ಲ ಎಂದು ಇಂದು ಹೇಳುವ ಮೂಲಕ ಮಾತು ಉಳಿಸಿಕೊಂಡಿದ್ದಾರೆ.
ಬಿಎಂಸಿಗೆ ಚುನಾವಣೆ ಫೆ.21ರಂದು ನಡೆಯಲಿದ್ದು, ಫೆ.23ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ.