ರೂ. 2.50 ಲಕ್ಷಕ್ಕಿಂತ ಹೆಚ್ಚು ಠೇವಣಿ ಇಟ್ಟವರ ವಿಚಾರಣೆ
ಹೊಸದಿಲ್ಲಿ, ಫೆ.7: ಐನೂರು ಹಾಗೂ ಸಾವಿರ ರೂ. ನೋಟು ನಿಷೇಧ ನಿರ್ಧಾರದ ಬಳಿಕ ಬ್ಯಾಂಕ್ ಗಳಲ್ಲಿ ರೂ. 2.50 ಲಕ್ಷಕ್ಕಿಂತ ಹೆಚ್ಚು ಠೇವಣಿ ಇಟ್ಟವರ ವಿಚಾರಣೆ ನಡೆಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ರೂ. 2.50 ಲಕ್ಷಕ್ಕಿಂತ ಕಡಿಮೆ ಹಣ ಜಮಾ ಮಾಡಿದವರಿಗೆ ಸಮಸ್ಯೆ ಇಲ್ಲ. ಆದಾಯ ತೆರಿಗೆ ಇಲಾಖೆಯು ಬ್ಯಾಂಕ್ ಗೆ ಠೇವಣಿ ಜಮೆ ಮಾಡಿದವರ ವಿವರವನ್ನು ಈಗಾಗಲೇ ಸಂಗ್ರಹಿಸಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುಶೀಲ್ ಚಂದ್ರ ತಿಳಿಸಿದ್ದಾರೆ.
ಬ್ಯಾಂಕ್ ಗಳಲ್ಲಿ ರೂ. 2.50 ಲಕ್ಷಕ್ಕಿಂತ ಹೆಚ್ಚು ಠೇವಣಿ ಇಟ್ಟ ಠೇವಣಿದಾರರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಲಿದೆ.
ಸರಿಯಾಗಿ ತೆರಿಗೆ ಪಾವತಿಸುವ ವಾರ್ಷಿಕ 10 ಲಕ್ಷ ರೂ. ಆದಾಯ ಹೊಂದಿರುವ ವ್ಯಕ್ತಿಗಳು ನೋಟು ನಿಷೇಧದ ಬಳಿಕ ಬ್ಯಾಂಕ್ ಗೆ ರೂ. 3 ಲಕ್ಷ ಜಮೆ ಮಾಡಿದ್ದರೆ ಅವರನ್ನು ಇಲಾಖೆ ಪ್ರಶ್ನಿಸಲಾರದು. ಆದರೆ ಕಳೆದ ಮೂರು ವರ್ಷಗಳಿಂದ ತೆರಿಗೆ ಪಾವತಿಸದ ವ್ಯಕ್ಷಿಗಳು 5 ಲಕ್ಷ ರೂ. ಠೇವಣಿ ಇಟ್ಟರೆ ಅವರನ್ನು ಇಲಾಖೆ ವಿಚಾರಣೆಗೊಳಪಡಿಸಲಿದೆ ಸಿಬಿಡಿಟಿ ಮಾಹಿತಿ ನೀಡಿದೆ.
2.50 ಲಕ್ಷ ರೂ. ಆದಾಯದ ಬಗ್ಗೆ ತೆರಿಗೆ ಇಲಾಖೆಗೆ ಲೆಕ್ಕ ತೋರಿಸಿ, ಬೇರೆ ಬೇರೆ ಬ್ಯಾಂಕ್ ಗಳಲ್ಲಿ 10ಲಕ್ಷ ರೂ. ಠೇವಣಿ ಇಟ್ಟಿದ್ದರೆ ಅವರ ವಿಚಾರಣೆ ಖಚಿತ. ಕಂಪೆನಿಗಳು ಬ್ಯಾಲೆನ್ಸ್ ಶೀಟ್ ನಲ್ಲಿ ತಮ್ಮ ಕೈಯಲ್ಲಿ 10 ಲಕ್ಷ ರೂ. ನಗದು ಇರುವುದಾಗಿ ವಿವರ ನೀಡಿ ಈ ಪೈಕಿ 5 ಲಕ್ಷ ರೂ . ಜಮಾ ಮಾಡಿದ್ದರೆ ಅಂತಹ ಸಂಸ್ಥೆಗಳಿಗೆ ಸಮಸ್ಯೆ ಇಲ್ಲ.