ಸೈಬರ್ ಪಾರ್ಕ್ನಲ್ಲಿ ಕೆಲಸಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ. ವಂಚಿಸಿದ ಯುವಕನ ಬಂಧನ
ಕಲ್ಲಿಕೋಟೆ,ಫೆ.11: ಸೈಬರ್ ಪಾರ್ಕ್ನಲ್ಲಿ ಕೆಲಸ ತೆಗೆಸಿಕೊಡುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ವಂಚಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೈಕೋರ್ಟಿನಿಂದ ನಿರೀಕ್ಷಣಾ ಜಾಮೀನು ಪಡೆದು ತಪ್ಪಿಸಿಕೊಂಡಿದ್ದ ಕಣ್ಣೂರಿನ ನಿಯಾರ್ ಎನ್ನುವಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಬಶೀರ್ ರಸ್ತೆಯ ಸಾಪ್ ಎನ್ನುವ ಕಂಪ್ಯೂಟರ್ ಸಂಸ್ಥೆ ನಡೆಸುತ್ತಿದ್ದ ಈತ ಇಲ್ಲಿ ಕಲಿಯಲು ಬಂದರೆ 10,000 ರೂಪಾಯಿ ಸ್ಟೈಪೆಂಡ್ ಸಹಿತ ಕಲಿಕೆ ಮುಗಿದರೆ ಸೈಬರ್ ಪಾರ್ಕಿನಲ್ಲಿ ಖಾಯಂ ಉದ್ಯೋಗ ದೊರಕಿಸಿಕೊಡುವುದಾಗಿ ಹೇಳಿಕೊಂಡಿದ್ದ. ಒಬ್ಬ ವಿದ್ಯಾರ್ಥಿಯಿಂದತಲಾ 80,000ರೂಪಾಯಿಯಂತೆ ನೂರಾರು ವಿದ್ಯಾರ್ಥಿಗಳಿಂದ ಈತ ಹಣ ವಸೂಲು ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಕೋರ್ಸ್ ಆರಂಭಿಸಿ ಒಂದು ತಿಂಗಳಾಗುವಷ್ಟರಲ್ಲಿ ಈತ ಹಣದೊಂದಿಗೆ ಪರಾರಿಯಾಗಿದ್ದ. ವಂಚನೆ ಅರಿವಾಗಿ ವಿದ್ಯಾರ್ಥಿಗಳ ಪೋಷಕರು ಈತನನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಪ್ರಶ್ನಿಸಿದ್ದರು. ನಂತರ ಈತನ ವಂಚನೆ ಬೆಳಕಿಗೆ ಬಂದಿತ್ತು. ಟೌನ್ ಪೊಲೀಸ್ ಠಾಣೆ ಮತ್ತು ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಯಿತು.
ಕೇಸು ದಾಖಲಾಗಿದ್ದು ಗೊತ್ತಾಗಿ ಈತ ಬೆಂಗಳೂರಿನಲ್ಲಿ ಅಡಗಿ ಕೂತಿದ್ದ. ನಂತರ ಹೈಕೋರ್ಟಿನಿಂದ ಮೂರು ಲಕ್ಷರೂಪಾಯಿ ಆಧಾರದಲ್ಲಿ ನಿರೀಕ್ಷಣಾ ಜಾಮೀನು ಪಡೆದು ಪುನಃ ಭೂಗತನಾಗಿದ್ದ. ನಿರೀಕ್ಷಣಾ ಜಾಮೀನು ಸಿಕ್ಕಿದರೂ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕೆಂದು ಕೋರ್ಟು ಹೇಳಿತ್ತು.
ಆತ ಇದನ್ನು ಪಾಲಿಸಿರಲಿಲ್ಲ. ಆದ್ದರಿಂದ ಕೋರ್ಟು ಆತನನ್ನು ತಲೆತಪ್ಪಿಸಿಕೊಂಡ ಆರೋಪಿ ಎಂದು ಘೋಷಿಸಿತ್ತು. ಈ ನಡುವೆ ನಗರ ಢಾಣೆಯ ಸಿಪಿಒಗಳಾದ ಜಯಚಂದ್ರನ್, ಸಜಿಲ್ ಕುಮಾರ್ ಕಣ್ಣೂರಿನ ಚಕ್ಕರಕಲ್ಲಿನಲ್ಲಿ ಸಹೋದರಿ ಮನೆಯಲ್ಲಿ ಅಡಗಿ ಕೂತಿದ್ದ ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.