ಅಜ್ಮೀರ್ ಸ್ಫೋಟ ಪ್ರಕರಣದ ತೀರ್ಪು ಮಾ.8ಕ್ಕೆ ಮುಂದೂಡಿಕೆ
ಜೈಪುರ,ಫೆ.25: ಇಲ್ಲಿಯ ವಿಶೇಷ ನ್ಯಾಯಾಲಯವು ಶನಿವಾರ 2007ರ ಅಜ್ಮೀರ್ ದರ್ಗಾ ಬಾಂಬ್ ಸ್ಫೋಟ ಪ್ರಕರಣದ ತೀರ್ಪನ್ನು ಮಾ.8ಕ್ಕೆ ಮುಂದೂಡಿದೆ. ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿ ಪರ ವಕೀಲರು ಸಲ್ಲಿಸಿರುವ ಎಲ್ಲ ದಾಖಲೆಗಳ ಪರಿಶೀಲನೆಗೆ ಇನ್ನಷ್ಟು ಸಮಯಾವಕಾಶ ಅಗತ್ಯವಿದೆ ಎಂದು ಅದು ತಿಳಿಸಿದೆ. 2007,ಅ.11ರಂದು ಸಂಜೆ ಅಜ್ಮೀರ್ದ ಪ್ರಸಿದ್ಧ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯವರ ದರ್ಗಾದಲ್ಲಿ ರಮಝಾನ್ ಉಪವಾಸವನ್ನು ಬಿಡುವ ಸಂದರ್ಭದಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಮೂವರು ಯಾತ್ರಿಗಳು ಕೊಲ್ಲಲ್ಪಟ್ಟಿದ್ದರು ಮತ್ತು 15 ಜನರು ಗಾಯಗೊಂಡಿ ದ್ದರು.
ಪ್ರಕರಣದಲ್ಲಿ 149 ಸಾಕ್ಷಿಗಳಿದ್ದು, 451 ದಾಖಲೆಗಳನ್ನು ನ್ಯಾಯಾಲಯವು ಪರಿಶೀಲಿ ಸಿತ್ತು. ಎನ್ಐಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸಿತ್ತು.
ಆರೋಪಿಗಳ ಪೈಕಿ ಸ್ವಾಮಿ ಅಸೀಮಾನಂದ, ಭವೇಶ ಪಟೇಲ್, ಹರ್ಷದ್ ಸೋಳಂಕಿ, ಲೋಕೇಶ ಶರ್ಮಾ, ದೇವೇಂದ್ರ ಕುಮಾರ್, ಮೆಹುಲ್ ಕುಮಾರ್, ಮುಕೇಶ್ ವಾಸಾನಿ ಮತ್ತು ಭರತ ಭಾಯಿ ಎನ್ನುವವರು ನ್ಯಾಯಾಂಗ ಬಂಧನದಲ್ಲಿದ್ದರೆ, ಚಂದ್ರಶೇಖರ ಎಂಬಾತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾನೆ.
ಎಲ್ಲ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಸಂದೀಪ್ ಡಾಂಗೆ, ರಾಮಚಂದ್ರ ಮತ್ತು ಸುರೇಶ್ ನಾಯರ್ ಎನ್ನುವವರು ತಲೆ ಮರೆಸಿಕೊಂಡಿದ್ದರೆ, ಇನ್ನೋರ್ವ ಆರೋಪಿ ಸುನಿಲ ಜೋಶಿ 2007,ಡಿಸೆಂಬರ್ನಲ್ಲಿ ಹತ್ಯೆಯಾಗಿದ್ದಾನೆ.