ಬಿಜೆಪಿಯ ‘ಏಜೆಂಟ್ ’ಆಗಿರುವ ದಿಲ್ಲಿ ಪೊಲೀಸ್:ಕೇಜ್ರಿವಾಲ್
ಹೊಸದಿಲ್ಲಿ,ಫೆ.25: ದಿಲ್ಲಿ ವಿವಿಯ ರಮಜಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವಿನ ಘರ್ಷಣೆಗಳನ್ನು ದಿಲ್ಲಿ ಪೊಲೀಸರು ನಿಭಾಯಿಸಿದ ರೀತಿಯನ್ನು ಶನಿವಾರ ಇಲ್ಲಿ ಟೀಕಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ದಿಲ್ಲಿ ಪೊಲೀಸ್ ಇಲಾಖೆ ಬಿಜೆಪಿ ಏಜೆಂಟ್ ಆಗಿಬಿಟ್ಟಿದೆ ಎಂದು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ದಿಲ್ಲಿ ಪೊಲೀಸರು ಎಬಿವಿಪಿ ಮತ್ತು ಬಿಜೆಪಿ ಏಜೆಂಟ್ರಾಗಿರುವುದನ್ನು ತಾನು ಬಲವಾಗಿ ಖಂಡಿಸುತ್ತೇನೆ. ದಿಲ್ಲಿಯ ಜನರನ್ನು ರಕ್ಷಿಸುವುದು ಮತ್ತು ಎಬಿವಿಪಿ ಹಾಗೂ ಬಿಜೆಪಿ ಗೂಂಡಾಗಿರಿಗೆ ಅವಕಾಶ ನೀಡದಿರು ವುದು ಪೊಲೀಸರ ಕರ್ತವ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಓರ್ವ ಬಿಜೆಪಿಯ ಕಾರ್ಯಕರ್ತನಂತೆ ವರ್ತಿಸದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸು ತ್ತಾರೆಂದು ತಾನು ಆಶಿಸಿದ್ದೇನೆ. ದಿಲ್ಲಿ ಪೊಲೀಸರು ಪ್ರಧಾನಿಯ ನಿಯಂತ್ರಣದಲ್ಲಿದ್ದಾರೆ. ಫೆ.22ರ ಹಿಂಸಾಚಾರಕ್ಕೆ ಅವರು ಪೊಲೀಸರನ್ನು ಉತ್ತರದಾಯಿಯನ್ನಾಗಿಸಬೇಕು ಎಂದರು.
ಘರ್ಷಣೆಗಳ ಸಂದರ್ಭ ತನ್ನ ಕೆಲವು ಪೊಲೀಸರು ಅನುಚಿತವಾಗಿ ವರ್ತಿಸಿದ್ದರು ಎನ್ನುವದನ್ನು ಒಪ್ಪಿಕೊಂಡಿರುವ ದಿಲ್ಲಿ ಪೊಲೀಸ್ ಇಲಾಖೆಯು ಮೂವರು ಪೊಲೀಸರನ್ನು ಈಗಾಗಲೇ ಅಮಾನತುಗೊಳಿಸಿದೆ.