ದೋಸೆ ಬೆಲೆ ಇಳಿಯದಿರಲು ಕಾವಲಿ ಕಾರಣ: ರಘುರಾಮ್ ರಾಜನ್
ಕೊಚ್ಚಿ,ಫೆ.14: ಹಣದುಬ್ಬರದ ಮೇಲೆ ವಿಜಯ ಸಾಧಿಸಿರುವುದಾಗಿ ಆರ್ಬಿಐ ಹೇಳಿಕೊಳ್ಳುತ್ತಿದೆ. ಆದರೆ ಎಲ್ಲರ ಇಷ್ಟದ ತಿಂಡಿ ದಕ್ಷಿಣ ಭಾರತದ ಪಾಪದ ದೋಸೆಯ ಬೆಲೆಯೇರಿ ಇಳಿಯುತ್ತಲೇ ಇಲ್ಲ? ಇಂತಹುದೊಂದು ಪ್ರಶ್ನೆ ಎದುರಾಗಿದ್ದು ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರಿಗೆ. ರಾಜನ್ ಉತ್ತರದಂತೆ ದೋಸೆ ಇನ್ನೂ ಸಾಂಪ್ರದಾಯಿಕ ಕಾವಲಿಯ ಮೇಲೆಯೇ ತಯಾರಾಗುತ್ತಿದೆಯೇ ಹೊರತು ತಯಾರಿಕೆಯ ತಂತ್ರಜ್ಞಾನವನ್ನು ಉತ್ತಮಗೊಳಿಸಿಕೊಳ್ಳುವ ಗೋಜಿಗೇ ಹೋಗಿಲ್ಲ, ಜೊತೆಗೆ ದೋಸೆ ತಯಾರಿಸುವವನಿಗೆ ಹೆಚ್ಚಿನ ಸಂಬಳ ನೀಡಬೇಕಾಗುತ್ತದೆ ಮತ್ತು ಅದು ಆಗಾಗ್ಗೆ ಹೆಚ್ಚುತ್ತಲೇ ಇರುತ್ತದೆ. ಹೀಗಾಗಿ ದೋಸೆಯ ಬೆಲೆ ಇಳಿಯುತ್ತಿಲ್ಲ.
ದೋಸೆ ತಯಾರಿಕೆಯ ತಂತ್ರಜ್ಞಾನ ಒಂದಿನಿತೂ ಬದಲಾಗಿಲ್ಲ. ಇಂದಿಗೂ ಅದೇ ಕಾವಲಿಯ ಮೆಲೆ ಹಿಟ್ಟನ್ನು ಹಾಕಿ ಹರಡಲಾಗುತ್ತದೆ ಮತ್ತು ಬೆಂದಾದ ಮೇಲೆ ತೆಗೆಯಲಾಗುತ್ತದೆ. ಆದರೆ ದೋಸೆಯನ್ನು ತಯಾರಿಸುವ ವ್ಯಕ್ತಿಯ ಸಂಬಳ ಮಾತ್ರ ಹೆಚ್ಚುತ್ತಲೇ ಇರುತ್ತದೆ ಎಂದು ರಾಜನ್ ವಿವರಿಸಿದರು.
ಶನಿವಾರ ರಾತ್ರಿ ಇಲ್ಲಿ ಫೆಡರಲ್ ಬ್ಯಾಂಕ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೋಸೆ ಪ್ರಿಯ ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳು, ಹಣದುಬ್ಬರ ಹೆಚ್ಚಿದಾಗೆಲ್ಲ ದೋಸೆ ಬೆಲೆ ಹೆಚ್ಚುತ್ತದೆ. ಆದರೆ ಹಣದುಬ್ಬರ ಇಳಿದಾಗ ದೋಸೆ ಬೆಲೆ ಇಳಿಯುವುದಿಲ್ಲ. ನಮ್ಮ ಪ್ರೀತಿಯ ದೋಸೆಗೆ ಏನಾಗುತ್ತಿದೆ ಸರ್..ಎಂದು ಪ್ರಶ್ನಿಸಿದ್ದಳು.
ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಹಲವಾರು ಉತ್ಪಾದನಾ ಕ್ಷೇತ್ರಗಳು ತಾಂತ್ರಿಕವಾಗಿ ಸುಧಾರಣೆಗೊಳ್ಳುತ್ತಿದ್ದರೆ ಇತರ ಕ್ಷೇತ್ರಗಳು ಸುಧಾರಣೆಗೂ ತಮಗೂ ಸಂಬಂಧವೇ ಇಲ್ಲದಂತಿರುತ್ತವೆ. ಉದಾಹರಣೆಗೆ ದೋಸೆ ತಯಾರಿಕೆ. ಇಂತಹ ಕ್ಷೇತ್ರಗಳು ಉತ್ಪಾದಿಸುವ ವಸ್ತುಗಳ ಬೆಲೆಗಳು ಏರುತ್ತಲೇ ಇರುತ್ತವೆ ಎಂದು ರಾಜನ್ ಹೇಳಿದರು.