ಮಹಾರಾಷ್ಟ್ರ: ಒಂದೇ ಕುಟುಂಬದ 7 ಮಕ್ಕಳು ಸಹಿತ 14 ಮಂದಿಯ ಹತ್ಯೆ, ಆರೋಪಿ ಆತ್ಮಹತ್ಯೆ!
ಠಾಣೆ, ಫೆ.28: ಮಹಾರಾಷ್ಟ್ರದ ಠಾಣೆ ನಗರಕ್ಕೆ ಸಮೀಪ ಕುಟುಂಬವೊಂದರ ಹದಿನಾಲ್ಕು ಮಂದಿಯನ್ನು ಕೊಲೆಗೈಯ್ಯಲಾದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಹತ್ಯೆಗೈದ ಮೇಲೆ ಆರೋಪಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದೇ ದಿನದಲ್ಲಿ ಹದಿನೈದು ಮಂದಿಯ ಸಾವಿನ ಸುದ್ದಿ ಕೇಳಿ ಇಡೀ ಠಾಣೆ ನಗರವೇ ಕಂಪಿಸಿದೆ.
ಘಟನೆಯು ಠಾಣೆಯ ಕಾಸರವಾಡವಾಲಿ ಎಂಬಲ್ಲಿ ನಡೆದಿದ್ದು, ಹತ್ಯೆಗೊಳಗಾದವರಲ್ಲಿ ಏಳು ಮಕ್ಕಳು ಸೇರಿದ್ದಾರೆ. ಉಳಿದವರೆಲ್ಲರೂ ಹಿರಿಯರು.
ಮೊದಲು ಹದಿನಾಲ್ಕು ಮಂದಿಯ ಪ್ರಜ್ಞೆ ತಪ್ಪಿಸಿ ಆ ನಂತರ ಚಾಕುವಿನಿಂದು ಇರಿದು ಕೊಲ್ಲಲಾಗಿದೆಯೆಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಆದರೆ ಈ ಹತ್ಯೆಗಳಿಗೆ ಕಾರಣವೇನೆಂದು ತಿಳಿದುಬಂದಿಲ್ಲ. ಇವರಲ್ಲಿ ಓರ್ವ ಮಹಿಳೆ ಬದುಕುಳಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಕುಟುಂಬದ ಕಾರ್ಯಕ್ರಮಕ್ಕೆ ಸಂಬಂಧಿಕರನ್ನು ಕರೆಸಲಾಗಿದ್ದು, ಆನಂತರ ಆಹಾರದಲ್ಲಿ ಅಮಲು ಭರಿಸುವ ಔಷಧ ಹಾಕಿ ಆರೋಪಿ ಈ ಕೃತ್ಯವೆಸಗಿದ್ದಾನೆಂದು ಸದ್ಯ ಅಂದಾಜಿಸಲಾಗಿದೆ.
ಆರೋಪಿಯು ಕೈಯಲ್ಲಿ ಚಾಕು ಹಿಡಿದುಕೊಂಡಿರುವ ಸ್ಥಿತಿಯಲ್ಲಿ ಮೃತನಾಗಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಒಬ್ಬರೇ ಬದುಕುಳಿದಿದ್ದಾರೆ. ಅವರು ಆಘಾತಕ್ಕೊಳಗಾಗಿರುವುದರಿಂದ ಅವರಿಂದ ನಾವು ಹೇಳಿಕೆಯನ್ನು ಪಡೆಯಲು ಪ್ರಯತ್ನಿಸಿಲ್ಲ ಎಂದು ಠಾಣೆಯ ಪೊಲೀಸ್ ಅಧಿಕಾರಿ ಅಶುತೋಷ್ ಡುಮರೆ ತಿಳಿಸಿದ್ದಾರೆ.