ಕಾಂಗ್ರೆಸ್ಗೆ ಮರುಜೀವ: ಶಿವಸೇನೆ ಪಠಾಣ್ಕೋಟ್ ಭಯೋತ್ಪಾದಕ ದಾಳಿ
ಕಾಂಗ್ರೆಸ್ಗೆ ಮರುಜೀವ: ಶಿವಸೇನೆ
ಪಠಾಣ್ಕೋಟ್ ಭಯೋತ್ಪಾದಕ ದಾಳಿ
ಮುಂಬೈ, ಜ.6: ಪಂಜಾಬ್ನ ಪಠಾಣ್ಕೋಟ್ನಲ್ಲಿ ಭಯೋತ್ಪಾದಕರ ದಾಳಿಯನ್ನು ನರೇಂದ್ರ ಮೋದಿ ಸರಕಾರವು ನಿಭಾಯಿಸಿದ ರೀತಿಯು, ವಿರೋಧ ಪಕ್ಷ ಕಾಂಗ್ರೆಸ್ಗೆ ಹೊಸ ಜೀವದಾನ ನೀಡಿದಂತಿದೆಯೆಂದು ಮಿತ್ರ ಪಕ್ಷ ಶಿವಸೇನೆ, ಬಿಜೆಪಿಯ ವಿರುದ್ಧ ಹೊಸದಾಗಿ ವಾಗ್ದಾಳಿ ನಡೆಸಿದೆ.
ತಾವು ಯಾರನ್ನು ಹುಗಿದಿದ್ದೆವೋ ಅವರು ಪಠಾಣ್ಕೋಟ್ ದಾಳಿಯ ಬಳಿಕ ಮರು ಜೀವ ಪಡೆದಿದ್ದಾರೆ. ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ. ಆದರೆ, ದಾಳಿಯ ಬಳಿಕ ಪರಿಸ್ಥಿತಿಯು ವಿನಾಶಕಾರಿಯಾಗಿದ್ದು, ಅದು ಕಾಂಗ್ರೆಸ್ಗೆ ಮರುಜೀವ ನೀಡಿದೆ. ಇದು ಒಳ್ಳೆಯದಲ್ಲ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಇಂದಿನ ಸಂಚಿಕೆಯ ಸಂಪಾದಕೀಯ ಹೇಳಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ, ಅಧಿಕಾರದಲ್ಲಿದಾಗ ಮಾಡಿದಂತಹ ಅದೇ ತಪ್ಪನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ನ ಪುನರುಜ್ಜೀವನಕ್ಕೆ ಬಿಜೆಪಿಯೇ ಕಾರಣವೆಂದು ಅದು ಆರೋಪಿಸಿದೆ.
ಆಘಾತಕ್ಕೊಳಗಾಗಿರುವ ಹಾಗೂ ಸತ್ತಿದ್ದ ಕಾಂಗ್ರೆಸ್ ಮತ್ತೆ ಮತ್ತೆ ಮರುಜೀವ ಪಡೆಯುವುದಕ್ಕೆ ದುರದೃಷ್ಟವಶಾತ್ ಅದನ್ನು ಬೇಟೆಯಾಡಿದವರೇ ಕಾರಣರಾಗುತ್ತಿದ್ದಾರೆ. ಭರವಸೆಯ ಹೂಗಳನ್ನು ಜನರಿಗೆ ಅರ್ಪಿಸಲಾಗಿತ್ತು ಹಾಗೂ ಅವರಿಗೆ ಅರಿವಿಗೆ ಬರುವ ಮೊದಲೇ ಅವರನ್ನು ದಮನಿಸಲಾಗಿದೆಯೆಂದು ಸಂಪಾದಕೀಯ ಟೀಕಿಸಿದೆ.