ಕೇಂದ್ರ ಸರಕಾರಕ್ಕೆ ಮುಖಭಂಗ
ಕೇಂದ್ರದಲ್ಲಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಆನಂತರ ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ನಡೆದಿದೆ. ಸ್ವಾಯತ್ತ ಸಂಸ್ಥೆಗಳಲ್ಲಿ ನಿತ್ಯವೂ ಹಸ್ತಕ್ಷೇಪ ಮಾಡುತ್ತ, ತಮ್ಮ ರಾಜಕೀಯ ದುರುದ್ದೇಶಗಳಿಗಾಗಿ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಿಬಿಐ ಮುಖ್ಯಸ್ಥ ಅಲೋಕ್ಕುಮಾರ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳಿಸಿದ ಪ್ರಕರಣ ಇದಕ್ಕೆ ಜ್ವಲಂತ ಉದಾಹರಣೆ. ತಮ್ಮನ್ನು ಕಡ್ಡಾಯ ರಜೆ ಮೇಲೆ ಕಳಿಸಿದ್ದನ್ನು ಪ್ರಶ್ನಿಸಿ ವರ್ಮಾ ಸುಪ್ರೀಂ ಕೋರ್ಟ್ಗೆ ಹೋಗಿದ್ದರು. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ಕೇಂದ್ರ ಸರಕಾರಕ್ಕೆ ಉಗಿದು ಬುದ್ಧಿ ಹೇಳಿದೆ. ಕಡ್ಡಾಯ ರಜೆ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಸಿಬಿಐ ಮುಖ್ಯಸ್ಥ ಹುದ್ದೆಯನ್ನು ಮತ್ತೆ ವಹಿಸಿಕೊಳ್ಳಲು ಅವಕಾಶ ನೀಡಿದೆ. ಆದರೆ ಸಿವಿಸಿ ತನಿಖೆ ಮುಗಿಯುವವರೆಗೆ ಯಾವುದೇ ನೀತಿ ನಿರ್ಧಾರ ಕೈಗೊಳ್ಳದಂತೆ ನಿರ್ಬಂಧ ವಿಧಿಸಿದೆ.
ಕೇಂದ್ರ ಸರಕಾರ ಹಿಂದೆಂದೂ ಇಂಥ ಮುಖಭಂಗ ಅನುಭವಿಸಿರಲಿಲ್ಲ. ಅಲೋಕ್ಕುಮಾರ್ ವರ್ಮಾ ಸೇವಾವಧಿ ಜನವರಿ 31ಕ್ಕೆ ಮುಗಿಯುತ್ತಿತ್ತು. ಆದರೆ ಅವರ ನಿವೃತ್ತಿಗೆ ಮೂರು ತಿಂಗಳಿರುವಾಗಲೇ ಅಕ್ಟೋಬರ್ 31ಕ್ಕೆ ಬಲವಂತವಾಗಿ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಲಾಗಿತ್ತು. ಇದು ಸ್ವಾಯತ್ತ ಸಂಸ್ಥೆಯಾಗಿರುವ ಸಿಬಿಐನಲ್ಲಿ ಕೇಂದ್ರ ಸರಕಾರ ಮಾಡಿರುವ ಹಸ್ತಕ್ಷೇಪವಲ್ಲದೆ ಬೇರೇನೂ ಅಲ್ಲ. ಇಂಥ ಹಸ್ತಕ್ಷೇಪದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಿಬಿಐ ಮೊದಲಿನಿಂದಲೂ ಹೆಸರಿಗೆ ಮಾತ್ರ ಸ್ವಾಯತ್ತ ಸಂಸ್ಥೆ ಎಂಬ ಟೀಕೆಗಳು ಸಾಮಾನ್ಯವಾಗಿವೆ. ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಇದನ್ನು ಬಳಸಿಕೊಳ್ಳುತ್ತ ಬಂದ ಬಗ್ಗೆ ಆರೋಪಗಳಿವೆ.ಆದರೆ ಈಗಿನ ಕೇಂದ್ರ ಸರಕಾರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿದ್ದು ಸ್ವಾಯತ್ತ ಸಂಸ್ಥೆಯ ಮೇಲೆ ನಡೆಸಿದ ನೇರ ಆಕ್ರಮಣವಾಗಿತ್ತು. ಕೇಂದ್ರೀಯ ವಿಚಕ್ಷಣಾ ಆಯುಕ್ತರು ನೀಡಿದ ವರದಿ ಆಧರಿಸಿ ಕ್ರಮ ಕೈಕೊಳ್ಳಲಾಯಿತೆಂಬ ಕೇಂದ್ರದ ಕುಂಟುನೆಪವನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಳ್ಳದೆ ವರ್ಮಾ ಅವರನ್ನು ಸಿಬಿಐ ಮುಖ್ಯಸ್ಥರನ್ನಾಗಿ ಮರು ನೇಮಕ ಮಾಡಿದೆ.
ಸಿಬಿಐ ಮುಖ್ಯಸ್ಥ ಅಲೋಕ್ಕುಮಾರ್ ವರ್ಮಾ ಅವರ ಮುಂದಿನ ಭವಿಷ್ಯದ ಬಗ್ಗೆ ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಸಭೆ ಸೇರಿ ತೀರ್ಮಾನಿಸಲಿದೆ. ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದ ತೀರ್ಪು ವರ್ಮಾ ಅವರ ನಿವೃತ್ತಿ ನಂತರವೂ ಸಿಬಿಐ ಕಾರ್ಯವಿಧಾನದ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಮುಂದೆ ಕಾನೂನು ಬದ್ಧವಾಗಿ ಎರಡು ವರ್ಷಗಳ ಅವಧಿಗೆ ನೇಮಕಗೊಳ್ಳುವ ಸಿಬಿಐ ಮುಖ್ಯಸ್ಥರ ತಂಟೆಗೆ ಹೋಗುವ ಮುನ್ನ ಕೇಂದ್ರ ಸರಕಾರ ದುಡುಕಿನ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ಇದಕ್ಕೆ ಪೂರಕವಾಗಿ ವರ್ಮಾ ಪರವಾಗಿ ವಕಾಲತ್ತು ಹಾಕಿದ್ದ ಫಾಲಿ ಎಸ್. ನಾರಿಮನ್ ವಾದ ಗಮನಾರ್ಹವಾಗಿದೆ. ಸಾಂವಿಧಾನಿಕ ವಾಗಿ ಸಿಬಿಐ ಮುಖ್ಯಸ್ಥರಿಗೆ ಎರಡು ವರ್ಷಗಳ ನಿಶ್ಚಿತ ಅವಧಿ ಇರುತ್ತದೆ, ಈ ಅವಧಿಯಲ್ಲಿ ವರ್ಗಾವಣೆ ಮಾಡುವುದು ಕೂಡ ಸರಿಯಲ್ಲ ಎಂದಿದ್ದಾರೆ. ಇಷ್ಟೆಲ್ಲ ಕಠಿಣ ನಿಯಮಾವಳಿ ಇರುವಾಗ ಕೇಂದ್ರ ಸರಕಾರ ಕೈಗೊಂಡ ಕ್ರಮ ಹಸ್ತಕ್ಷೇಪವಲ್ಲದೆ ಬೇರೇನೂ ಅಲ್ಲ,
ಅಲೋಕ್ಕುಮಾರ್ ವರ್ಮಾ ಅವರನ್ನು 2017ರಲ್ಲಿ ಕೇಂದ್ರ ಸರಕಾರವೇ ಸಿಬಿಐ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು. ಆನಂತರ ಒಮ್ಮೆಲೆ ರಾತ್ರೋರಾತ್ರಿ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿದ್ದೇಕೆ? ಪ್ರತಿಪಕ್ಷಗಳು ಆರೋಪಿಸಿರುವಂತೆ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕರಡುಗಳನ್ನು ಅವರು ತೆರೆಯಬಹುದು ಎಂಬುದೇ ಅವರ ವರ್ಗಾವಣೆಯ ಹಿಂದಿನ ನಿಜವಾದ ಉದ್ದೇಶವಾಗಿತ್ತೇ? ವರ್ಮಾ ನೇಮಕದ ಆನಂತರ 2017ರ ಅಕ್ಟೋಬರ್ನಲ್ಲಿ ಮೋದಿ ಆಪ್ತ ರಾಕೇಶ್ ಅಸ್ತಾನಾರನ್ನು ಸಿಬಿಐನ ವಿಶೇಷ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದೇಕೆ?
ಈ ಅಸ್ತಾನಾ ನೇಮಕದ ಬಳಿಕ ಸಿಬಿಐ ಆಂತರಿಕ ಕಲಹದ ತಾಣವಾಯಿತು. ಕೇಂದ್ರ ಸರಕಾರವೇ ಇದಕ್ಕೆ ಕಾರಣ. ಸಿಬಿಐ ನಿರ್ದೇಶಕರಲ್ಲೇ ಕಾದಾಟ ಹಚ್ಚಿ ಈ ಉನ್ನತ ತನಿಖಾ ಸಂಸ್ಥೆಯ ವಿಶ್ವಾಸಾರ್ಹತೆ ಕುಸಿಯುವಂತೆ ಮೋದಿ ಸರಕಾರ ಮಾಡಿತು. ವರ್ಮಾ ವಿದೇಶಕ್ಕೆ ಹೋಗಿದ್ದಾಗ ನೌಕರರ ಭಡ್ತಿ ಸಂಬಂಧ ಸಿವಿಸಿ ಕರೆದಿದ್ದ ಸಭೆಗೆ ರಾಕೇಶ್ ಅಸ್ತಾನಾ ಹೋಗಿದ್ದರು. ತಮ್ಮ ಬದಲಾಗಿ ರಾಕೇಶ್ಅಸ್ತಾನಾ ಸಭೆಗೆ ಹೋಗಿದ್ದಕ್ಕೆ ಕೆರಳಿ ಕೆಂಡವಾದ ವರ್ಮಾ ತಾವು ಯಾರನ್ನೂ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿಲ್ಲ ಎಂದು ಹೇಳಿಬಿಟ್ಟರು. ಇದರಿಂದ ವರ್ಮಾ ಮತ್ತು ಅಸ್ತಾನಾರ ಕಾದಾಟ ಬೀದಿಗೆ ಬಂತು. ಒಬ್ಬರ ಮೇಲೊಬ್ಬರು ಭ್ರಷ್ಟಾಚಾರದ ಆರೋಪ ಮಾಡಿ ದೂರುದಾಖಲಿಸಿದರು. ಆಗ ಕೇಂದ್ರಕ್ಕೆ ದಿಢೀರ್ ಜ್ಞಾನೋದಯವಾಗಿ ಇಬ್ಬರನ್ನೂ ರಜೆಯ ಮೇಲೆ ಕಳಿಸಿ ನಾಗೇಶ್ವರರಾವ್ ಎಂಬವರನ್ನು ಕೇಂದ್ರದ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು. ಇಂಥ ನೇಮಕ ಮಾಡುವ ಸಂದರ್ಭದಲ್ಲಿ ಉನ್ನತಾಧಿಕಾರ ಸಮಿತಿಯನ್ನು ಕೇಂದ್ರ ಸರಕಾರ ಕೇಳಲಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಮೋದಿ ಸುತ್ತ ಸುತ್ತಿಕೊಂಡಿರುವ ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತಿತರರು ಸಿಬಿಐಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಅಲೋಕ್ಕುಮಾರ್ ವರ್ಮಾ ಕೆಲ ದಾಖಲೆಗಳನ್ನು ಸಂಗ್ರಹಿಸಿದ್ದರು. ಇದರಿಂದ ಕೆರಳಿದ ಮೋದಿ ಸರಕಾರ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳಿಸಿತು ಎಂಬ ಆರೋಪದಲ್ಲಿ ಹುರುಳಿಲ್ಲದಿಲ್ಲ. ಕೇಂದ್ರ ಸರಕಾರ ಪ್ರಧಾನಿಯನ್ನು ರಕ್ಷಿಸಲು ಈ ದುಡುಕಿನ ಕ್ರಮ ಕೈಗೊಂಡು ಸುಪ್ರೀಂ ಕೋರ್ಟ್ನಲ್ಲಿ ಮುಖಭಂಗಕ್ಕೆ ಒಳಗಾಯಿತು. ಇದು ಮುಂದೆ ಬರಲಿರುವ ಸರಕಾರಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.