ತಮ್ಮದೇ ನೆಲದಲ್ಲಿ ಅನ್ಯರಾದ ಬಡ ಕೂಲಿ ಕಾರ್ಮಿಕರು
ಸಮಾಜದಲ್ಲಿ ಸಂಶಯ, ಅನುಮಾನ, ಅನ್ಯ ಮನಸ್ಥಿತಿಗಳನ್ನು ಬಿತ್ತಿ ವ್ಯವಸ್ಥೆ ಹೇಗೆ ತನ್ನ ದುರುದ್ದೇಶಗಳನ್ನು ಸಾಧಿಸಿಕೊಳ್ಳುತ್ತದೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ, ಬೆಂಗಳೂರಿನ ಕರಿಯಮ್ಮನ ಅಗ್ರಹಾರದ ಪ್ರಕರಣ. ಇತ್ತೀಚೆಗಷ್ಟೇ ‘ರಾಜಧಾನಿಯಲ್ಲಿರುವ ಬಾಂಗ್ಲಾ ದೇಶಿಗರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಬಿಬಿಎಂಪಿ ಡಂಗುರ ಸಾರಿತ್ತು. ಇದಾದ ಕೆಲವೇ ದಿನಗಳಲ್ಲಿ ಕರಿಯಮ್ಮನ ಅಗ್ರಹಾರದಲ್ಲಿ ಜೋಪಡಿ ಕಟ್ಟಿ ಬದುಕುತ್ತಿರುವ ಕಾರ್ಮಿಕರ ಮನೆಗಳನ್ನು ‘ಬಾಂಗ್ಲಾ ದ ನುಸುಳುಕೋರರ ಮನೆ’ ಎಂದು ಘೋಷಿಸಿ ನೆಲಸಮ ಮಾಡಿತು. ಆದರೆ ಇವರಲ್ಲಿ ಬಾಂಗ್ಲಾದೇಶದಿಂದ ಬಂದವರು ಯಾರೂ ಇದ್ದಿರಲಿಲ್ಲ. ಹೆಚ್ಚಿನವರು ಉತ್ತರ ಕರ್ನಾಟಕದಿಂದ ಕೂಲಿ ಅರಸಿ ಬಂದವರು. ಅವರಲ್ಲಿ ಸೂಕ್ತ ದಾಖಲೆಗಳೂ ಇದ್ದವು. ಆದರೆ ಅದನ್ನು ನೋಡುವ ವ್ಯವಧಾನ ಯಾರಿಗೂ ಇದ್ದಿರಲಿಲ್ಲ. ದಾಖಲೆ ತೋರಿಸಿದವರಿಗೆ ‘‘ನೀವು ಬಾಂಗ್ಲಾ ದೇಶದವರು. ಅಲ್ಲಿಗೇ ಹೋಗಿ’’ ಎಂದು ಅಧಿಕಾರಿಗಳು ಬೇಜವಾಬ್ದಾರಿ ಉತ್ತರಗಳನ್ನು ನೀಡಿದ್ದಾರೆ. ‘ಕರ್ನಾಟಕದಲ್ಲೇ ಇರುವ ಕೊಪ್ಪಳ ಬಾಂಗ್ಲಾ ದೇಶ ಹೇಗಾಗುತ್ತದೆ?’ ಎನ್ನುವುದು ತಿಳಿಯದೇ ಕಾರ್ಮಿಕರು ನಡು ಬೀದಿಯಲ್ಲಿ ಬಿದ್ದಿದ್ದಾರೆ. ಕಾರ್ಮಿಕರಲ್ಲಿ ಬಹುತೇಕ ಉತ್ತರ ಕರ್ನಾಟಕಕ್ಕೆ ಸೇರಿದವರು. ಆದರೆ ರಾಜಧಾನಿಯ ಅಧಿಕಾರಿಗಳಿಗೆ ಅವರೆಲ್ಲರೂ ಬಾಂಗ್ಲಾದೇಶಿಯರಂತೆ ಕಂಡಿದ್ದಾರೆ. ಆದರೆ ಘಟನೆ ಅಷ್ಟು ಸರಳವಿಲ್ಲ. ಅವರ ಗುಡಿಸಲುಗಳನ್ನು ನೆಲಸಮಗೊಳಿಸುವುದರ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿಗಳ ಒತ್ತಡವೂ ಇದೆ ಎಂದು ಆರೋಪಿಸಲಾಗಿದೆ ಎಂದು ಕೇಳಿ ಬರುತ್ತಿದೆ. ಎನ್ಆರ್ಸಿ, ಎನ್ಪಿಆರ್ ಮೊದಲಾದ ಹೆಸರಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳ ಹಿಂದೆ ಬೇರೆ ಬೇರೆ ಹಿತಾಸಕ್ತಿಗಳು ಹೇಗೆ ಕೆಲಸ ಮಾಡುತ್ತಿವೆ ಎನ್ನುವುದಕ್ಕೆ ಈ ಪ್ರಕರಣವೇ ಉದಾಹರಣೆ.
ಇಂದಿಗೂ ನಾವು ನಮ್ಮದೇ ನೆಲದ ಜನರನ್ನು ನಮ್ಮವರೆಂದು ಗುರುತಿಸಿಲ್ಲ. ಉತ್ತರ ಕರ್ನಾಟಕದಿಂದ ನಗರಕ್ಕೆ ಕಟ್ಟಡ ಕಾರ್ಮಿಕರಾಗಿ ಆಗಮಿಸಿದವರನ್ನೇ ನಾವು ‘ಅನ್ಯ’ರಾಗಿ ನೋಡುತ್ತಿದ್ದೇವೆ. ಅವರ ಜೊತೆಗೆ ಬೇರೆ ಬೇರೆ ರೀತಿಯ ಅಸ್ಪಶ್ಯತೆಯನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ‘ಭಾರತೀಯತೆಯ ಬಗ್ಗೆ’ ಮಾತನಾಡುತ್ತೇವಾದರೂ, ಈ ಕಾರ್ಮಿಕರನ್ನು ಯಾವುದೋ ಪಾಕಿಸ್ತಾನದಿಂದ ಬಂದ ಜನರಂತೆ ಉಪಚರಿಸುತ್ತೇವೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಬೆಳೆದು ನಿಂತಿರುವ ನಗರಗಳ ಒಂದೊಂದು ಇಟ್ಟಿಗೆಯ ಮೇಲೂ ಈ ಜನರ ಬೆವರ ಹನಿಗಳಿವೆ. ಅವರ ದುಡಿಮೆಯ ಫಲವನ್ನು ಅನುಭವಿಸುತ್ತಲೇ, ನಮಗೆ ಬೇಡವಾದಾಗ ಬಾಂಗ್ಲಾ ದೇಶಿಗರೆಂದೋ, ಬಿಹಾರಿಗಳೆಂದೋ, ಅಸ್ಸಾಮಿಗರೆಂದೋ ವಲಸಿಗರೆಂದೋ ಕರೆದು ಕಸದ ಬುಟ್ಟಿಗೆ ಎಸೆದು ಬಿಡುತ್ತೇವೆ. ಇಂತಹದೊಂದು ಅನುಮಾನಿಸುವ ಪ್ರವೃತ್ತಿಗೆ ಕೊಡಗು ಕೂಡ ಬಲಿಯಾಗಿದೆ. ಕೊಡಗಿನಲ್ಲಿ ನುಸುಳುಕೋರರಿದ್ದಾರೆ ಎಂದು ಅಲ್ಲಿನ ಕಾರ್ಮಿಕರನ್ನು ಸಂಶಯಿಸುವ, ಆ ಮೂಲಕ ಶೋಷಿಸುವ ಕೆಲಸ ನಡೆಯುತ್ತಿದೆ. ಕೊಡಗು, ಚಿಕ್ಕಮಗಳೂರು ಮೊದಲಾದ ಪ್ರದೇಶಗಳ ಕಾಫಿ ತೋಟಗಳಲ್ಲಿ ಅಸ್ಸಾಮಿನ ನೂರಾರು ಕೂಲಿ ಕಾರ್ಮಿಕರು ಬಂದು ದುಡಿಯುತ್ತಿದ್ದಾರೆ. ಈ ಬಡ ಕಾರ್ಮಿಕರ ಮೇಲೆ ಕರುಣೆಯುಕ್ಕಿ ಕೊಡಗಿನ ಜನರು ಅವರಿಗೆ ಆಶ್ರಯ ನೀಡಿರುವುದಲ್ಲ. ಸ್ಥಳೀಯರಿಗಾದರೆ ದುಬಾರಿ ವೇತನ ನೀಡಬೇಕು. ಅಸ್ಸಾಮಿನ ಈ ವಲಸೆ ಕಾರ್ಮಿಕರಿಗೆ 200-300 ರೂಪಾಯಿ ವೇತನ ನೀಡಿ ದುಡಿಸುವುದಕ್ಕಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಅವರನ್ನು ತಮ್ಮಲ್ಲಿ ಇಟ್ಟುಕೊಂಡಿದ್ದಾರೆ. ಇದೀಗ ಅದೇ ಕೊಡಗಿನ ಭೂಮಾಲಕರು ‘ನುಸುಳುಕೋರರಿದ್ದಾರೆ, ಬಾಂಗ್ಲಾ ದೇಶಿಯರಿದ್ದಾರೆ’ ಎಂದು ವದಂತಿ ಹಬ್ಬಿಸಿ, ಕಾರ್ಮಿಕರು ತಮ್ಮ ವಿಶ್ವಾಸಾರ್ಹತೆಯನ್ನು ಜಿಲ್ಲಾಡಳಿತದ ಮುಂದೆ ಸಾಬೀತು ಮಾಡುವಂತಹ ಸ್ಥಿತಿ ನಿರ್ಮಾಣ ಮಾಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಯ ನೇತೃತ್ವದಲ್ಲಿ ಈ ಕಾರ್ಮಿಕರ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಜಿಲ್ಲೆಯ ಭದ್ರತೆಯ ದೃಷ್ಟಿಯಿಂದ ಇದು ಸರಿ ಎಂದೇ ಒಪ್ಪಿಕೊಳ್ಳೋಣ. ಇದೇ ಸಂದರ್ಭದಲ್ಲಿ ಈ ಕಾರ್ಮಿಕರ ಬದುಕಿನ ಭದ್ರತೆಯ ಬಗ್ಗೆಯೂ ಜಿಲ್ಲಾಡಳಿತ ಕಾಳಜಿವಹಿಸಬೇಕಲ್ಲವೇ? ಈ ದಾಖಲೆಯನ್ನು ಪಡೆಯುವ ಸಂದರ್ಭದಲ್ಲಿ ನೀವು ಪಡೆಯುತ್ತಿರುವ ವೇತನ ಎಷ್ಟು, ನಿಮ್ಮ ಮಕ್ಕಳ ಶಿಕ್ಷಣ, ಆರೋಗ್ಯದ ಸ್ಥಿತಿಯೇನು? ಎನ್ನುವುದನ್ನು ಜಿಲ್ಲಾಡಳಿತ ವಿಚಾರಿಸಿದೆಯೇ? ಎಂಬ ಪ್ರಶ್ನೆಗೆ ಈವರೆಗೆ ಯಾವ ಉತ್ತರವೂ ಸಿಕ್ಕಿಲ್ಲ. ಕೊಡಗಿನ ಕಾಫಿ ತೋಟಗಳು ಕಾರ್ಮಿಕರ ಪಾಲಿಗೆ ನರಕವೆಂದೇ ಕುಖ್ಯಾತಿಯನ್ನು ಪಡೆದಿದೆ. ಇಂದಿಗೂ ಇಲ್ಲಿನ ಕುಗ್ರಾಮಗಳಲ್ಲಿ ಕಾರ್ಮಿಕರು ಪರೋಕ್ಷವಾಗಿ ಜೀತದಾಳುಗಳಾಗಿ ದುಡಿಯುತ್ತಾರೆ. ಇಂದು ಈ ಕಾರ್ಮಿಕರ ಕುರಿತಂತೆ ಸಂಶಯ, ಆತಂಕಗಳನ್ನು ಬಿತ್ತಿ ಅವರನ್ನು ಇನ್ನಷ್ಟು ಬಿಗಿಯಾಗಿ ಶೋಷಿಸುವ ಭಾಗವಾಗಿ ‘ಬಾಂಗ್ಲಾ ವಲಸಿಗರು, ನುಸುಳುಕೋರರು’ ಪದಗಳನ್ನು ಬಳಸಲಾಗುತ್ತಿದೆ. ಇಂದು ಕೊಡಗಿನಲ್ಲಿ ಹೊಸ ತಲೆಮಾರು ನಗರಗಳ ಬದುಕನ್ನು ಇಷ್ಟ ಪಡುತ್ತಿದೆ. ಕಾಫಿ ತೋಟಗಳು ಉಳಿದುಕೊಂಡಿದ್ದರೆ ಇಂತಹ ಕಾರ್ಮಿಕರ ದುಡಿಮೆಯ ಫಲದಿಂದಾಗಿದೆ. ಅವರ ದಾಖಲೆಗಳನ್ನು ಸಂಗ್ರಹಿಸಿದ ಜಿಲ್ಲಾಡಳಿತ, ಕೊಡಗಿನಲ್ಲಿರುವ ಎಲ್ಲ ಉತ್ತರ ಭಾರತ ಮತ್ತು ಅಸ್ಸಾಮಿನ ಕಾರ್ಮಿಕರನ್ನು ಗುರುತಿಸಿ ಅವರಿಗೆ ಅಲ್ಲಿನ ಭೂಮಾಲಕರು ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಬೇಕಾಗಿದೆ.
ಕೃಷಿ ಬೆಲೆಗಳಿಗೆ ಕನಿಷ್ಠ ಬೆಂಬಲ ಬೆಲೆ ಇರುವಾಗ, ಒಬ್ಬ ಕಾರ್ಮಿಕನಿಗೆ ಅರ್ಹವಾಗಿರುವ ವೇತನವನ್ನು ನೀಡುವುದು ಈ ಭೂಮಾಲಕರ ಕರ್ತವ್ಯವಲ್ಲವೇ? ಈ ಕಾರ್ಮಿಕರ ಮಕ್ಕಳ ಆರೋಗ್ಯ, ಶಿಕ್ಷಣದ ಕುರಿತಂತೆಯೂ ಕಾಳಜಿವಹಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ. ಮೇಲಿನ ಉದಾಹರಣೆಗಳಿಂದಲೇ, ಎನ್ಆರ್ಸಿಯ ಮೂಲಕ ಅಸ್ಸಾಮಿನಲ್ಲಿ ಏನು ನಡೆದಿರಬಹುದು ಎನ್ನುವುದನ್ನು ಊಹಿಸಬಹುದು. ಅಲ್ಲಿನ ಆದಿವಾಸಿಗಳು, ಬುಡಕಟ್ಟು ಸಮುದಾಯದವರನ್ನು ಒಕ್ಕಲೆಬ್ಬಿಸುವುದಕ್ಕೆ ಎನ್ಆರ್ಸಿಯನ್ನು ಭೂಮಾಲಕರು ಮತ್ತು ಉದ್ಯಮಿಗಳು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಅರಣ್ಯ ಪ್ರದೇಶದಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದು ಸಮಸ್ಯೆಯಾಗಿ ಪರಿಣಮಿಸಿದಾಗ, ಬಾಂಗ್ಲಾ ಅಕ್ರಮ ನುಸುಳುಕೋರರ ಗುಮ್ಮನನ್ನು ಬಿಟ್ಟು ಎನ್ಆರ್ಸಿ ಮಾಡಲಾಯಿತು. ಲಕ್ಷಾಂತರ ಜನ ಆದಿವಾಸಿಗಳು ತಮ್ಮ ದಾಖಲೆಗಳನ್ನು ಸರಕಾರದ ಮುಂದಿಡಲಾಗದೆ ಇದೀಗ ಮನೆ, ಜಮೀನನ್ನು ಬಿಟ್ಟು ಬಂಧನ ಕೇಂದ್ರದಲ್ಲಿದ್ದಾರೆ. ತಾವೂ ಈ ನೆಲಕ್ಕೆ ಸೇರಿದವರು ಎನ್ನುವುದನ್ನು ಸಾಬೀತು ಮಾಡಿ, ಕಳೆದುಕೊಂಡ ಪೌರತ್ವವನ್ನು ಮರಳಿ ಗಳಿಸುವ ಹೊತ್ತಿಗೆ ಅವರ ಜಮೀನು, ಮನೆ ಯಾರದೋ ವಶದಲ್ಲಿರುತ್ತವೆ.
ಅರಣ್ಯ ಭೂಮಿಯಲ್ಲಿ ಬದುಕುತ್ತಿರುವವರಂತೂ ಮತ್ತೆ ಅಲ್ಲಿಗೆ ಕಾಲಿಡುವಂತೆಯೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ದೇಶಾದ್ಯಂತ ಎನ್ಆರ್ಸಿ ಜಾರಿಯಾಗುವುದರ ಹಿಂದೆ ಕಾಣದ ಹಲವು ಕೈಗಳಿವೆ. ಅವರ ಉದ್ದೇಶ ಬಾಂಗ್ಲಾದ ನುಸುಳುಕೋರರನ್ನು ಹೊರಗಿಡುವುದು ಖಂಡಿತ ಅಲ್ಲ. ಆ ಹೆಸರಲ್ಲಿ ಬಡವರ, ದಲಿತರ, ಆದಿವಾಸಿಗಳ ಜಮೀನು, ಭೂಮಿ, ಕಾಡು ಪ್ರದೇಶಗಳನ್ನು ತನ್ನದಾಗಿಸಿಕೊಳ್ಳುವುದು. ಅವರನ್ನು ಭಾರತೀಯರೇ ಅಲ್ಲ ಎಂದು ಬಿಂಬಿಸಿ ರಾಜಕೀಯ ಉದ್ದೇಶಗಳನ್ನು ಸಾಧಿಸಿಕೊಳ್ಳುವುದು. ಆದುದರಿಂದಲೇ, ಎನ್ಆರ್ಸಿ, ಸಿಎಎ ವಿರುದ್ಧದ ಚಳವಳಿ ತಳಸ್ತರದ ಜನರ ಚಳವಳಿಯಾಗಿ ರೂಪು ಪಡೆಯಬೇಕಾಗಿದೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ಕಾರ್ಮಿಕರು ಕೈ ಜೋಡಿಸಿ ತಮ್ಮ ಬದುಕುವ ಹಕ್ಕನ್ನು ಉಳಿಸಿಕೊಳ್ಳುವ ಸಂದರ್ಭ ಬಂದಿದೆ. ಅದಕ್ಕಾಗಿಯೇ ಈ ಹೋರಾಟ ಭಾರತದ ಪಾಲಿಗೆ ಎರಡನೆ ಸ್ವಾತಂತ್ರ ಹೋರಾಟವಾಗಿ ಪರಿಗಣಿಸಲ್ಪಡುತ್ತದೆ.