ರಾಜ್ಯ ಕಾಂಗ್ರೆಸ್ನೊಳಗಿನ ತಳಮಳ
ಕಳೆದ ಉಪಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ಗೆ ತುಸು ಆತ್ಮವಿಶ್ವಾಸ ಹೆಚ್ಚಿದಂತಿದೆ. ಪರಿಣಾಮವಾಗಿ ಒಳಗೊಳಗೆ ನಾಯಕತ್ವಕ್ಕಾಗಿ ಮುಸುಕಿನ ಗುದ್ದಾಟ ಆರಂಭವಾಗಿದೆ. ಎಸ್. ಎಂ. ಕೃಷ್ಣ, ಶ್ರೀನಿವಾಸ ಪ್ರಸಾದ್, ಜಾಫರ್ ಶರೀಫ್ರಂತಹ ಹಿರಿಯ ನಾಯಕರ ಅಪಸ್ವರಗಳಿಂದ ಒಂದಿಷ್ಟು ಮಂಕಾಗಿದ್ದ ಕಾಂಗ್ರೆಸ್ ಪಕ್ಷವು, ಚುನಾವಣಾ ಫಲಿತಾಂಶದಿಂದ ಒಮ್ಮೆಲೇ ಎದ್ದು ನಿಂತಿದೆ. ಪಕ್ಷದ ವಿರುದ್ಧ ಕೆಲವು ಹಿರಿಯರ ಗೊಣಗಾಟಕ್ಕೆ ತಡೆ ಬಿದ್ದಿದೆ. ಇನ್ನೇನು ಕಾಂಗ್ರೆಸ್ ಬಿಟ್ಟೇ ಬಿಡುತ್ತಾರೆ ಎನ್ನುವಂತಹ ಸ್ಥಿತಿಯಲ್ಲಿ ನಿಂತಿದ್ದ ಎಚ್. ವಿಶ್ವನಾಥ್ ‘‘ನನಗೆ ಕಾಂಗ್ರೆಸ್ ಬಿಡಲು ಮನಸ್ಸಿಲ್ಲ. ಆದರೆ ಯಾರೂ ನನ್ನನ್ನು ತೊರೆಯದಂತೆ ತಡೆಯುತ್ತಿಲ್ಲ’’ ಎಂದು ಅಳಹತ್ತಿದ್ದಾರೆ ಮತ್ತು ಇದೇ ಸಂದರ್ಭವನ್ನು ಬಳಸಿಕೊಂಡು ಸಿದ್ದರಾಮಯ್ಯ ಅವರನ್ನು ಸಮಾಧಾನ ಪಡಿಸುವ ನಾಟಕವನ್ನೂ ಮಾಡಿದ್ದಾರೆ. ಸಿದ್ದರಾಮಯ್ಯ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ‘‘ನನ್ನ ನೇತೃತ್ವದಲ್ಲೇ ಮುಂದಿನ ಚುನಾವಣೆ’’ ಎಂದು ಘೋಷಿಸಿಕೊಂಡಿದ್ದಾರೆ. ಆ ಮೂಲಕ ಸೋಲುಗೆಲುವಿನ ಹೊಣೆಯನ್ನು ಏಕಾಂಗಿಯಾಗಿ ಹೊರಲು ಸಿದ್ಧನಿದ್ದೇನೆ ಎಂಬರ್ಥದ ಹೇಳಿಕೆಯನ್ನು ವರಿಷ್ಠರಿಗೆ ನೀಡಿದ್ದಾರೆ. ಅಂದರೆ ಆ ಮೂಲಕ ‘ಮುಂದಿನ ಮುಖ್ಯಮಂತ್ರಿ ನಾನೇ’ ಎನ್ನುವ ಪರೋಕ್ಷ ಘೋಷಣೆಯೂ ಇದಾಗಿದೆ. ಇದೇ ಸಂದರ್ಭದಲ್ಲಿ ಪರಮೇಶ್ವರ್ ಒಮ್ಮೆ ‘ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ’ ಎಂಬ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೀಡಿದ್ದರು. ಇದಾದ ಎರಡು ದಿನಗಳಲ್ಲೇ ‘ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದೆ’’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ‘ಚುನಾವಣೆಗೆ ನಾಯಕತ್ವ ನನ್ನದು, ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ತೀರ್ಮಾನ ಹೈಕಮಾಂಡ್ಗೆ ಬಿಟ್ಟದ್ದು’ ಎಂಬ ಸಿದ್ದರಾಮಯ್ಯ ಹೇಳಿಕೆ ಹೊರ ಬಿದ್ದ ಬಳಿಕ ತಮ್ಮ ಹೇಳಿಕೆಯನ್ನು ಬದಲಸಿದ್ದಾರೆ ಪರಮೇಶ್ವರ್. ಇದೇ ಸಂದರ್ಭದಲ್ಲಿ ಪರಮೇಶ್ವರ್ ಕೆಳಗಿಳಿದರೆ ಕೆಪಿಸಿಸಿ ಚುಕ್ಕಾಣಿ ಯಾರ ಕೈ ಸೇರಲಿದೆ ಎನ್ನುವ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯ ಕಾಂಗ್ರೆಸ್ಗೆ ಕಾಲಿಡುವ ಸಾಧ್ಯತೆಗಳನ್ನು ಈ ಸಂದರ್ಭದಲ್ಲಿ ಅಲ್ಲಗಳೆಯುವಂತಿಲ್ಲ. ಪರಮೇಶ್ವರ್ ಮುಂದಿನ ಮುಖ್ಯಮಂತ್ರಿಯಾಗುವುದಕ್ಕೆ ಸಾಧ್ಯವಿಲ್ಲದೆ ಇದ್ದರೆ, ಖರ್ಗೆಯನ್ನು ಮುಂದಿಟ್ಟು ಸಿದ್ದರಾಮಯ್ಯರನ್ನು ಎದುರಿಸುವ ಉದ್ದೇಶವನ್ನೂ ಕಾಂಗ್ರೆಸ್ನೊಳಗೆ ಕೆಲವು ನಾಯಕರು ಹೊಂದಿದ್ದಾರೆ. ಆದುದರಿಂದ, ರಾಜ್ಯ ರಾಜಕೀಯಕ್ಕೆ ಮರಳಲು ಖರ್ಗೆಗೆ ಭಾರೀ ಒತ್ತಡ ಬೀಳುತ್ತಿದೆ.
ಕಾಂಗ್ರೆಸ್ನೊಳಗೆ ಯಾವ ಭಿನ್ನಮತವೂ ಇಲ್ಲ ಎಂಬಂತೆ ಕಂಡರೂ, ಒಳಗೊಳಗೆ ಮುಸುಕಿನ ಗುದ್ದಾಟವೊಂದು ನಡೆಯುತ್ತಿದೆ. ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಅವರ ಆಗಮನದ ಬಳಿಕ ಇದು ಇನ್ನಷ್ಟು ತೀವ್ರವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇನಾದರೂ ಗೆದ್ದರೆ ದಲಿತರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಕಾಂಗ್ರೆಸ್ನ ಒಂದು ಗುಂಪು ಅತ್ಯುತ್ಸಾಹದಲ್ಲಿದೆ. ಆದರೆ ಪಕ್ಷದ ಸಂಘಟನೆಯಲ್ಲಿ ಈ ಗುಂಪಿನ ಪಾತ್ರ ಬಹು ಕಡಿಮೆ. ಕಳೆದ ಉಪಚುನಾವಣೆಯ ಸಂದರ್ಭದಲ್ಲಿ ಈ ಗುಂಪು ಸಾಧ್ಯವಾದಷ್ಟು ಮಟ್ಟಿಗೆ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದವು. ಕಾಂಗ್ರೆಸ್ ವಿರುದ್ಧ ಎಂದರೆ ಅವರ ನಿಜವಾದ ಗುರಿ ಸಿದ್ದರಾಮಯ್ಯ. ಈ ಹಿಂದೊಮ್ಮೆ, ದಲಿತ ಮುಖ್ಯಮಂತ್ರಿಯ ಅಗತ್ಯವನ್ನು ಎತ್ತಿ ಹಿಡಿದದ್ದೂ ಇದೇ ಗುಂಪು. ಹಾಗೆಂದು ಇವರಿಗೆ ದಲಿತರ ಮೇಲೆ ವಿಶೇಷ ಪ್ರೀತಿ, ಅಕ್ಕರೆ ಇದೆಯೆಂದು ಅರ್ಥವಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ಇವರು ಅತೀ ಕಾಳಜಿಯನ್ನು ಹೊಂದಿದ್ದಾರೆ ಎಂದೂ ಅರ್ಥವಲ್ಲ. ಸಿದ್ದರಾಮಯ್ಯ ಪಕ್ಷದಲ್ಲಿ ಪಾರಮ್ಯವನ್ನು ಸ್ಥಾಪಿಸುವುದು, ರಾಜ್ಯ ಕಾಂಗ್ರೆಸ್ ಸಂಪೂರ್ಣ ಸಿದ್ದರಾಮಯ್ಯ ಅವರ ಹಿಡಿತಕ್ಕೆ ಹೋಗುವುದು ಇವರಿಗೆ ಅರಗಿಸಿಕೊಳ್ಳಲು ಸಾಧ್ಯವಿಲ್ಲದ ಸಂಗತಿಯಾಗಿದೆ. ಅಂದ ಹಾಗೆ, ಈ ಭಿನ್ನಮತದ ಬೇರು ದಿಲ್ಲಿಯನ್ನು ಹಬ್ಬಿದೆ. ರಾಜ್ಯಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಬೆಳೆಯುತ್ತಿರುವುದು ದಿಲ್ಲಿಯಲ್ಲಿರುವ ಕಾಂಗ್ರೆಸ್ ವರಿಷ್ಠರಲ್ಲಿ ಕೆಲವರಿಗೆ ಇಷ್ಟವಿದ್ದಂತಿಲ್ಲ. ‘ದಲಿತ ಮುಖ್ಯಮಂತ್ರಿ’ ಪ್ರಸ್ತಾಪದ ಹಿಂದೆ ಈ ದಿಲ್ಲಿಯ ನಾಯಕರ ಷಡ್ಯಂತ್ರಗಳೂ ಕೆಲಸ ಮಾಡುತ್ತಿವೆ. ಈ ಹಿಂದೊಮ್ಮೆ, ತಾನು ಭವಿಷ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹತಾಶೆಯಿಂದ ಸಿದ್ದರಾಮಯ್ಯ ಘೋಷಿಸಿದ್ದರು. ಇದೀಗ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸಿರುವುದು ಮಾತ್ರವಲ್ಲ, ಮುಂದಿನ ಮುಖ್ಯಮಂತ್ರಿ ನಾನೇ ಎನ್ನುವ ಸೂಚನೆಯನ್ನೂ ನೀಡುತ್ತಿದ್ದಾರೆ. ಅದಕ್ಕೆ ಪ್ರತಿತಂತ್ರವನ್ನೂ ಸಿದ್ದರಾಮಯ್ಯ ವಿರೋಧಿಗಳು ಹೂಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಪರಮೇಶ್ವರ್ ವರ್ಚಸ್ಸು ಸಾಕಾಗುವುದಿಲ್ಲ ಎನ್ನುವುದು ಈಗಾಗಲೇ ಮನವರಿಕೆಯಾಗಿರುವುದರಿಂದ, ಖರ್ಗೆಯವರನ್ನು ಮತ್ತೆ ರಾಜ್ಯಕ್ಕೆ ವರ್ಗಾಯಿಸುವ ತಂತ್ರವೊಂದು ತೆರೆಮರೆಯಲ್ಲಿ ನಡೆಯುತ್ತಿದೆ. ಖರ್ಗೆಯೇನಾದರೂ ರಾಜ್ಯ ಕಾಂಗ್ರೆಸ್ಗೆ ಕಾಲಿಟ್ಟರೆ, ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಚರ್ಚೆ ಕಾಂಗ್ರೆಸ್ನ್ನು ಮತ್ತೆ ಸಂಕಟಕ್ಕೀಡು ಮಾಡುವ ಸಾಧ್ಯತೆಗಳಿವೆ.
ದಲಿತ ಮುಖ್ಯಮಂತ್ರಿಯ ಅಗತ್ಯವಂತೂ ರಾಜ್ಯಕ್ಕಿದೆ. ಆದರೆ ಯಾವುದೇ ದಲಿತ ಮುಖ್ಯಮಂತಿಗಿಂತ ಹೆಚ್ಚು ನೆರವನ್ನು ದಲಿತರಿಗೆ ನೀಡಲು ಸಿದ್ದರಾಮಯ್ಯ ಅವರು ಸಮರ್ಥರಿದ್ದಾರೆ. ಪರಮೇಶ್ವರ್ರಂತಹವರು ದಲಿತರ ಹೆಸರಲ್ಲಿ ಮುಖ್ಯಮಂತ್ರಿಯಾಗುವುದಕ್ಕಿಂತ, ಸಿದ್ದರಾಮಯ್ಯ ಅವರೇ ಎಷ್ಟೋ ವಾಸಿ. ರಾಜ್ಯ ಕಾಂಗ್ರೆಸ್ಗೆ ಪುನರುಜ್ಜೀವ ನೀಡಿದವರು ಸಿದ್ದರಾಮಯ್ಯ. ಅವರ ಜನಪರ ಆಡಳಿತವನ್ನು ಶ್ರೀಸಾಮಾನ್ಯರು ಇಷ್ಟಪಟ್ಟಿದ್ದಾರೆ ಎನ್ನುವುದರಲ್ಲೂ ಎರಡು ಮಾತಿಲ್ಲ. ಇಂತಹ ಹೊತ್ತಿನಲ್ಲಿ ಖರ್ಗೆ ಮರಳಿ ರಾಜ್ಯಕ್ಕೆ ಕಾಲಿಟ್ಟರೆ ಅದು ಕಾಂಗ್ರೆಸ್ನೊಳಗೆ ಗೊಂದಲಗಳನ್ನು ಸೃಷ್ಟಿಸುವುದರಲ್ಲಿ ಎರಡು ಮಾತಿಲ್ಲ. ಖರ್ಗೆಯನ್ನು ದಾಳವಾಗಿಸಿಕೊಂಡು ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲು ಯತ್ನಿಸಿದರೆ, ಅದರ ದುಷ್ಪರಿಣಾಮವನ್ನು ಕಾಂಗ್ರೆಸ್ ಭವಿಷ್ಯದಲ್ಲಿ ಅನುಭವಿಸಲಿದೆ. ಸದ್ಯದ ಮಟ್ಟಿಗೆ ಸಿದ್ದರಾಮಯ್ಯ ಕಾಂಗ್ರೆಸ್ ಅನ್ನು ಯಶಸ್ವಿಯಾಗಿ ರಾಜ್ಯದಲ್ಲಿ ಮುನ್ನಡೆಸುತ್ತಿದ್ದಾರೆ. ಹೀಗಿರುವಾಗ ವರಿಷ್ಠರು ಉದ್ದೇಶಪೂರ್ವಕವಾಗಿ ಅವರ ಮುಂದೆ ಪ್ರತಿಸ್ಪರ್ಧಿಯನ್ನಿಟ್ಟು ಅವರಲ್ಲಿ ರಾಜಕೀಯ ಅಭದ್ರತೆಯನ್ನು ಸೃಷ್ಟಿಸುವುದರಿಂದ ಪಕ್ಷ ಸಂಘಟನೆಗೆ ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ಬಿಜೆಪಿಯ ಸದ್ಯದ ಸ್ಥಿತಿಯನ್ನು ನೋಡಿ ಪಾಠ ಕಲಿಯಬೇಕಾಗಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುವುದಾಗಿದ್ದರೆ, ಅವರನ್ನೇ ಮುಖ್ಯಮಂತ್ರಿಯಾಗಿಸುವುದು ವರಿಷ್ಠರಿಗೆ ಅನಿವಾರ್ಯ. ಕೆಲವೇ ಕೆಲವು ನಾಯಕರ ಪ್ರತಿಷ್ಠೆಗಾಗಿ ರಾಜ್ಯ ಕಾಂಗ್ರೆಸ್ನ್ನು ಮತ್ತೆ ಬಲಿಕೊಟ್ಟರೆ, ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಲು ಪರೋಕ್ಷವಾಗಿ ಹೈಕಮಾಂಡ್ ಕೈಜೋಡಿಸಿದಂತಾದೀತು. ಹಾಗೆಯೇ ಉಪಚುನಾವಣೆಯ ಗೆಲುವು ಖಂಡಿತವಾಗಿಯೂ ಮುಂದಿನ ಸಾರ್ವತ್ರಿಕ ಚುನಾವಣೆಯ ಗೆಲುವಿಗೆ ದಿಕ್ಸೂಚಿಯಾಗಲಾರದು. ಆದುದರಿಂದ, ಇತರ ಜಾತ್ಯತೀತ ಪಕ್ಷಗಳ ಜೊತೆಗೆ ಮೈತ್ರಿ ಸಾಧಿಸಿ, ಮತಗಳು ಒಡೆಯದ ಹಾಗೆ ಕಾರ್ಯತಂತ್ರ ರೂಪಿಸುವುದು ಸಿದ್ದರಾಮಯ್ಯ ಅವರ ಹೊಣೆಗಾರಿಕೆಯಾಗಿದೆ. ಅತೀ ಆತ್ಮವಿಶ್ವಾಸ ಕೆಲವೊಮ್ಮೆ ಕಾಂಗ್ರೆಸ್ನ್ನು ಮಾತ್ರವಲ್ಲ, ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯವನ್ನೂ ಮುಗಿಸಿ ಬಿಡಬಹುದು.