ರಾಶಿ ರಾಶಿ ಸಾಕ್ಷ್ಯಗಳಿದ್ದರೂ ಎನ್.ಐ.ಎ. ಎಂಬ 'ನೋ ಇನ್ವೆಸ್ಟಿಗೇಷನ್ ಏಜೆನ್ಸಿ'ಗೆ ಸಾಕ್ಷ್ಯ ಸಾಲದೇ ಹೋದದ್ದು ಹೇಗೆ ?
ಅಸೀಮಾನಂದನ ಸ್ವಯಂಪ್ರೇರಿತ ತಪ್ಪೊಪ್ಪಿಗೆ ಪ್ರಕಟಿಸಿದ ಕಾರವಾನ್ ಮ್ಯಾಗಝಿನ್ ಸಂಪಾದಕ ವಿನೋದ್ ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?
2007ರ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಹಾಗೂ ಇತರ ನಾಲ್ವರನ್ನು ಸ್ಥಳೀಯ ವಿಶೇಷ ಭಯೋತ್ಪಾದನೆ ನಿಗ್ರಹ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ. ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ . ವಿಶೇಷವೆಂದರೆ, ಖುಲಾಸೆ ತೀರ್ಪು ನೀಡಿದ ಬೆನ್ನಿಗೇ ನ್ಯಾಯಾಧೀಶ ರವೀಂದ್ರ ರೆಡ್ಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಸ್ವಾಮಿ ಅಸೀಮಾನಂದ ಖುಲಾಸೆಯಾಗಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇದೇ ಸ್ವಾಮಿ ಅಸೀಮಾನಂದ ಅಂಬಾಲಾ ಕೇಂದ್ರ ಕಾರಾಗೃಹದಲ್ಲಿದ್ದಾಗ ಸ್ವಯಂಪ್ರೇರಿತರಾಗಿ ಹೇಗೆ ವಿವಿಧ ಸ್ಫೋಟಗಳಿಗೆ ಸಂಚು ಹೂಡಲಾಗಿತ್ತು ಎಂದು ವಿವರಿಸಿದ್ದರು. ಇದನ್ನು ಕಾರವಾನ್ ಮ್ಯಾಗಝಿನ್ ಪ್ರಕಟಿಸಿತ್ತು. ಈಗ ಅಸೀಮಾನಂದ ಖುಲಾಸೆಯಾಗಿದ್ದಾರೆ. ಇದಕ್ಕೆ ಆಘಾತ ವ್ಯಕ್ತಪಡಿಸಿರುವ ಕಾರವಾನ್ ಸಂಪಾದಕ ವಿನೋದ್ ಜೋಸ್ ಬರೆದ ಫೇಸ್ ಬುಕ್ ಪೋಸ್ಟ್ ನ ಅನುವಾದ ಇಲ್ಲಿದೆ:
ಸಾಕ್ಷ್ಯವಿಲ್ಲ, ಸಾಕ್ಷ್ಯವಿಲ್ಲ, ಸಾಕ್ಷ್ಯವಿಲ್ಲ. ಭಾರತದಾದ್ಯಂತ ಆರೆಸ್ಸೆಸ್ ಮಂದಿ ಶಾಮೀಲಾಗಿರುವ ಉಗ್ರ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಏಜೆನ್ಸಿಗಳು ಹಾಗೂ ನ್ಯಾಯಾಲಯಗಳು ನ್ಯಾಯ ವ್ಯವಸ್ಥೆಯ ಅಣಕವಾಡುತ್ತಿವೆ. 2014ರಲ್ಲಿ 'ದಿ ಕ್ಯಾರವಾನ್ ಮ್ಯಾಗಝಿನ್' ಅಂಬಾಲ ಕಾರಾಗೃಹದಲ್ಲಿದ್ದ ಅಸೀಮಾನಂದರಿಂದ ಅವರ ಸ್ವಇಚ್ಛೆಯಿಂದ 9 ಗಂಟೆಗಳ ತಪ್ಪೊಪ್ಪಿಗೆ ಹೇಳಿಕೆ ಪಡೆಯಲು ಸಫಲವಾಗಿತ್ತು. ಈ ಬಗೆಗಿನ ಧ್ವನಿಮುದ್ರಿಕೆಗಳನ್ನು ಪಡೆಯಲು ತಾನು ಬರುತ್ತಿರುವುದಾಗಿ ಎನ್ಐಎ ಹೇಳಿತ್ತು. ಆದರೆ ಅದು ಬರಲೇ ಇಲ್ಲ. ಹಿಂದೂಗಳು ಶಾಮೀಲಾಗಿರುವ ಉಗ್ರ ಪ್ರಕರಣಗಳನ್ನು ಎನ್ಐಎ ಕೈಗೆತ್ತಿಕೊಂಡಾಗ ಸಿಬಿಐ ಹಲವಾರು ಸಾಕ್ಷ್ಯಗಳನ್ನು ಹಸ್ತಾಂತರಿಸಿತ್ತು. ಆಗ ಹೇಮಂತ್ ಕರ್ಕರೆ ಅವರ ನೇತೃತ್ವದಲ್ಲಿದ್ದ ಮಹಾರಾಷ್ಟ್ರ ಎಟಿಎಸ್ ಕೂಡ ತಾನು ಕಷ್ಟಪಟ್ಟು ಸಂಗ್ರಹಿಸಿದ್ದ ಹಲವಾರು ಸಾಕ್ಷ್ಯಗಳನ್ನು ಒದಗಿಸಿತ್ತು. ಈ ಅವಧಿಯಲ್ಲಿ ಮೋಸದಿಂದ ತಮ್ಮ ಕರ್ತವ್ಯ ನಿರ್ವಹಿಸಿದ ಕೆಲ ಅಧಿಕಾರಿಗಳು ನಂತರ ಲೋಕಸಭೆಗೆ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿ, ಎಲ್ಲರು ಸಂಸದರಾದರೆ ಕೆಲವರು ಸಚಿವರೂ ಆದರು. ಒಂದರ ಹಿಂದೆ ಇನ್ನೊಂದು ಹೀಗೆ ಎಲ್ಲಾ ಪ್ರಕರಣಗಳ ತನಿಖೆಯನ್ನೂ ಎನ್ಐಎ ವಿಫಲಗೊಳಿಸುತ್ತಾ ಬಂದಿತ್ತು. ಉತ್ತಮ ಹೆಸರು ಪಡೆದಿದ್ದ ಈ ತನಿಖಾ ಏಜನ್ಸಿ ಒಮ್ಮೆಗೇ ಸಿಬಿಐಗಿಂತಲೂ ಕೆಟ್ಟದ್ದಾಗಿ ಪರಿಣಮಿಸಿತ್ತು. (ಎನ್ಐಎ ಇಂದು ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿಯಲ್ಲ, ಬದಲಾಗಿ ನೋ ಇನ್ವೆಸ್ಟಿಗೇಶನ್ ಏಜೆನ್ಸಿ.).
ಭಾರತದಲ್ಲಿ ನ್ಯಾಯದಾನ ವ್ಯವಸ್ಥೆ ವಿಫಲವಾಗಿದೆಯೋ ಅಥವಾ ಇಲ್ಲವೋ, ಭಾರತದಲ್ಲಿ 2005ರಿಂದ 2014ರ ತನಕ ಹಿಂದೂ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಏನಾಗಿದೆ ಎಂದು ತಿಳಿಯಬಯಸುವವರು ಅಸೀಮಾನಂದ್ ಅವರ ಬಗ್ಗೆ ಲೀನಾ ರೆಘುನಾಥ್ ಅವರ ಅತ್ಯುತ್ತಮ ಬರಹವನ್ನು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಓದಬೇಕೆಂಬುದು ನನ್ನ ಸಲಹೆ. ಅದರ ಲಿಂಕ್ ಇಲ್ಲಿದೆ :
ಅಂಬಾಲ ಕೇಂದ್ರ ಕಾರಾಗೃಹದೊಳಗಿನಿಂದ ಅಸೀಮಾನಂದ ನೀಡಿದ ತಪ್ಪೊಪ್ಪಿಗೆಯ ಆಧಾರದಲ್ಲಿ ಇದನ್ನು ಬರೆಯಲಾಗಿತ್ತು. ಗಾಂಧಿ ಹಂತಕ ಗೋಡ್ಸೆಯನ್ನು ಇರಿಸಲಾಗಿದ್ದ ಸೆಲ್ ನಲ್ಲಿಯೇ ತಾನಿದ್ದೇನೆ ಎಂಬ ಬಗ್ಗೆ ಆ ವ್ಯಕ್ತಿಗೆ ಹೆಮ್ಮೆಯಿತ್ತು.
ನಿಮಗೆ ಅದನ್ನು ಓದಲು ಸಾಕಷ್ಟು ಸಮಯವಿಲ್ಲವೆಂದಾದರೆ ಇಲ್ಲಿ ನೀಡಲಾದ ಸ್ಕ್ರೀನ್ ಶಾಟ್ ನಲ್ಲಿ ನೀಡಲಾಗಿದ್ದನ್ನು ಓದಿದರೆ ಸಾಕು. ಈ ಪ್ರಕರಣದಲ್ಲಿ ನ್ಯಾಯವೊದಗಿಸಲು ನಮ್ಮ ನ್ಯಾಯ ವವಸ್ಥೆಗೆ ಧೈರ್ಯವಿದೆಯೇ ಹಾಗೂ ಈ ಭಾರೀ ಸಂಚು ಭಾರತೀಯ ಪ್ರಜಾತಂತ್ರಕ್ಕೊಂದು ಅಗ್ನಿ ಪರೀಕ್ಷೆಯೇಕೆ ಆಗಿತ್ತು ಎಂದು ಅದು ತಿಳಿಸುತ್ತದೆ. ಕಾಂಗ್ರೆಸ್ ವಿಫಲವಾದರೆ ಆ ವ್ಯಕ್ತಿಗಳಿಗೆ ಹಾಗೂ ಅವರ ಸಿದ್ಧಾಂತಗಳಿಗೆ ಯಾವುದೇ ಹಾನಿಯಾಗದಂತೆ ಬಿಜೆಪಿ ಸರಕಾರ ನೋಡಿಕೊಂಡಿತು. ಆ ಮೂರ್ನಾಲ್ಕು ಸ್ಫೋಟಗಳಲ್ಲಿ ಸಾವಿಗೀಡಾದ 117 ಜನರ ಕುಟುಂಬಗಳನ್ನು ಹೊರತುಪಡಿಸಿ ಅಂತಿಮವಾಗಿ ಎಲ್ಲರೂ ಸಂತಸದಿಂದಿದ್ದಾರೆ.
ಸೋಮವಾರ ಬೆಳಗ್ಗೆ ಪ್ರಕರಣದ ತೀರ್ಪು ನೀಡಿದ ಕೂಡಲೇ ಎನ್ಐಎ ನ್ಯಾಯಾಧೀಶರು ರಾಜೀನಾಮೆ ನೀಡಿದ್ದಾರೆ. ಏಕೆ? ಇದಕ್ಕೆ ನಮಗೆ ಯಾವತ್ತಾದರೂ ಕಾರಣ ತಿಳಿಯುವುದೇನು ? ಅವರು ರಾಜೀನಾಮೆ ನೀಡಿದ ಕೂಡಲೇ ಅವರೇಕೆ ಹುದ್ದೆ ತ್ಯಜಿಸಿದರು ಎಂದು ಜನರು ಪ್ರಶ್ನಿಸಿದಾಗ ವಕೀಲರ ಒಂದು ಗುಂಪು ತಪ್ಪು ಮಾಹಿತಿ ನೀಡುವ ಅಭಿಯಾನ ಆರಂಭಿಸಿ ನ್ಯಾಯಾಧೀಶರ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಹೈಕೋರ್ಟ್ ಮುಂದಿದೆ ಎಂದು ಹೇಳಿತಾದರೂ ಹೈಕೋರ್ಟ್ ಅದನ್ನು ನಿರಾಕರಿಸಿದೆ. ನ್ಯಾಯಾಧೀಶ ಲೋಯಾ ಕತೆಯಲ್ಲಿ ನಾವು ಕೇಳಿದ್ದೇವೆ: ಅನುಕೂಲಕರ ತೀರ್ಪಿಗಾಗಿ ರೂ.100 ಕೋಟಿ ಆಫರ್ ಬಂದಿತ್ತು. ಆದರೆ ನಿರಾಕರಿಸಿದಾಗ ಶಂಕಾಸ್ಪದ ಸಾವು. ಭಾರತೀಯ ನ್ಯಾಯಾಂಗ ಕೋಮಾವಸ್ಥೆಯಲ್ಲಿದೆ. ಪ್ರಜಾಪ್ರಭುತ್ವ ದೇಶವೊಂದು ಯಾವುದೇ ಭಯವಿಲ್ಲದೆ ತನಿಖೆ ನಡೆಸಲು ಹಾಗೂ ಸ್ವತಂತ್ರ ವಾತಾವರಣದಲ್ಲಿ ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದಾರೆ ಅಲ್ಲಿನ ಸಮಾಜ ಯಾವ ಮಟ್ಟಕ್ಕೆ ಇಳಿದಿದೆ?