ಮದುವೆ ಆಮಂತ್ರಣವಲ್ಲ..! ಮತದಾನ ಜಾಗೃತಿ ಪತ್ರ...
ಎಪ್ರಿಲ್ 18 ರ ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಅಭ್ಯರ್ಥಿಗಳ, ರಾಜಕೀಯ ಮುಖಂಡರ, ವಿವಿಧ ಪಕ್ಷಗಳ ಕಾರ್ಯಕರ್ತರ ಚುನಾವಣಾ ಪ್ರಚಾರ, ಮತಯಾಚನೆ ಜೋರಾಗಿಯೇ ನಡೆಯುತ್ತಿದೆ. ಚುನಾವಣಾ ಆಯೋಗ ಕೂಡಾ ತಮ್ಮದೇ ಶೈಲಿಯಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದೆ.
ಏತನ್ಮಧ್ಯೆ ಮದುವೆ ಆಮಂತ್ರಣ ಮಾದರಿಯನ್ನು ಹೋಲುವ ಮತದಾನಕ್ಕೆ ಪ್ರೇರೇಪಿಸುವ ವೈಶಿಷ್ಟ್ಯಪೂರ್ಣ ಪತ್ರವೊಂದು ಶುಕ್ರವಾರ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಬರಹಗಾರ, ಸಾಮಾಜಿಕ ಕಾರ್ಯಕರ್ತ ರಶೀದ್ ವಿಟ್ಲ ಅವರು ರೂಪಿಸಿರುವ ಈ 'ಆಮಂತ್ರಣ ಪತ್ರ'ದ ಪ್ರಾರಂಭದಲ್ಲಿ ||ಶ್ರೀ ಭಾರತ ಸಂವಿಧಾನ|| ಎಂದು ಉಲ್ಲೇಖಿಸಲಾಗಿದೆ.
'ಪ್ರಜಾಪ್ರಭುತ್ವದ ಹಬ್ಬ' ಲೋಕಸಭಾ ಚುನಾವಣೆ-2019 ಎಂಬುವುದು ಇದರ ತಲೆ ಬರಹ. ಶುಭ ಮುಹೂರ್ತ ದಿನ, ಸಮಯ, ಸ್ಥಳ, ಭೋಜನ ಎಲ್ಲದರ ವಿವರವನ್ನು ಮತದಾನಕ್ಕೆ ಹೋಲಿಸಿ ವ್ಯಾಖ್ಯಾನಿಸಲಾಗಿದೆ.
ದಯವಿಟ್ಟು ಉಡುಗೊರೆ ಕೊಡಬೇಡಿ ಮತ್ತು ಪಡೆಯಬೇಡಿ. ಜಾತಿ, ಧರ್ಮ, ಹಣದ ಆಮಿಷಕ್ಕೆ ಬಲಿಯಾಗಿ ತಮ್ಮ ಸಿದ್ಧಾಂತವನ್ನು ಮಾರಬೇಡಿ ಎಂದು ಸೂಚಿಸಲಾಗಿದೆ.
'ಅಸಮರ್ಥ ಅಭ್ಯರ್ಥಿ ಆಯ್ಕೆಯಾದರೆ ಉತ್ತಮ ಜನರು ಮತದಾನ ಮಾಡಿಲ್ಲ ಎಂದರ್ಥ' ಎಂದು ಕೊನೆಯಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ರಶೀದ್ ವಿಟ್ಲ ಅವರ ಈವೊಂದು ಚುನಾವಣಾ ಜಾಗೃತಿ ಪತ್ರ ಹೊಸತನದಿಂದ ಕೂಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಆಗುತ್ತಿವೆ.