ದಿಲ್ಲಿ ಹಿಂಸಾಚಾರ, ದೇಶದ್ರೋಹಿ ಪಟ್ಟ: ಭಾರತೀಯ ನಾಗರಿಕರಿಗೆ ಸಂಜೀವ್ ಭಟ್ ಕೇಳಿದ 10 ಪ್ರಶ್ನೆಗಳು...
ಹೊಸದಿಲ್ಲಿ: 1990ರ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಜೈಲಿನಲ್ಲೇ ಡೈರಿಯೊಂದನ್ನು ಬರೆಯುತ್ತಿದ್ದಾರೆ. ದಿಲ್ಲಿ ಹಿಂಸಾಚಾರ, ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲ ಘಟನೆಗಳ ಬಗ್ಗೆ ಸಂಜೀವ್ ಭಟ್ ಡೈರಿಯಲ್ಲಿ ಬರೆದಿರುವ ಕೆಲ ಸಾಲುಗಳನ್ನು ಅವರ ಪತ್ನಿ ಶ್ವೇತಾ ಭಟ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ಶ್ವೇತಾ ಸಂಜೀವ್ ಭಟ್,
ಸಂಜೀವ್ ಭಟ್ ಡೈರಿ ಆಯ್ದ ಭಾಗಗಳು ಸಂಖ್ಯೆ : 16
1. ಇತ್ತೀಚಿಗಿನ ದಿಲ್ಲಿ ಹಿಂಸಾಚಾರದಲ್ಲಿ ಕೆಲವೊಂದು ಪ್ರಕರಣಗಳನ್ನು ಹೊರತುಪಡಿಸಿ ಮೃತಪಟ್ಟ ಅಥವಾ ಗಂಭೀರವಾಗಿ ಗಾಯಗೊಂಡ ಸರಿಸುಮಾರು ಎಲ್ಲಾ ಜನರೂ ಮುಸ್ಲಿಮರೆಂಬುದು ನಿಜವೇ ?
2. ಇತ್ತೀಚಿಗಿನ ದಿಲ್ಲಿ ಹಿಂಸಾಚಾರದ ವೇಳೆ ಮುಸ್ಲಿಮರಿಗೆ ಸೇರಿದ ಆಸ್ತಿಪಾಸ್ತಿಗಳನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಲಾಗಿತ್ತು ಎಂಬುದು ನಿಜವೇ?
3. ಹಲವಾರು ಪ್ರಕರಣಗಳಲ್ಲಿ ದಿಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದೇ ಅಲ್ಲದೆ ಹಿಂದುತ್ವ ಗೂಂಡಾಗಳ ಗುಂಪುಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದರೆಂಬುದು ನಿಜವೇ ?
4. ಉನ್ನತ ನ್ಯಾಯಾಂಗದ ನ್ಯಾಯಾಧೀಶರುಗಳು ಕೂಡ ಪಕ್ಷಪಾತದ ಧ್ವನಿಗಳಿಂದ ಮಾತನಾಡಲು ಆರಂಭಿಸಿದ್ದಾರೆಂಬುದು ನಿಜವೇ ?
5. ಪ್ರಧಾನಿ ನರೇಂದ್ರ ಮೋದಿಯನ್ನು ಬಹಿರಂಗವಾಗಿ ಹೊಗಳಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರನ್ನು ಸುಪ್ರೀಂ ಕೋರ್ಟ್ ವಕೀಲರ ಸಂಘ ಸಾರ್ವಜನಿಕವಾಗಿ ಖಂಡಿಸಬೇಕಾಯಿತೆಂಬುದು ನಿಜವೇ ?
6. ನ್ಯಾಯ ಒದಗಿಸಬೇಕಾದ ಸಂಸ್ಥೆಗಳು ಸುಮ್ಮನೆ ನೋಡುತ್ತಿರುವಾಗ ಅಸಮ್ಮತಿ ಸೂಚಕರನ್ನು ಹಾಗೂ ವಿರೋಧಿಗಳನ್ನು ಗುರುತಿಸಿ ಅವರನ್ನು ಈಡಿ, ಐಟಿ ಹಾಗೂ ಡಿಆರ್ಐ ಮೂಲಕ ಬೆಂಬತ್ತುವ ಕೆಲಸ ನಡೆಯುತ್ತಿದೆ ಎಂಬುದು ನಿಜವೇ ?
8. ಕೇವಲ ಏಳು ತ್ರೈಮಾಸಿಕಗಳಲ್ಲಿ ನಮ್ಮ ಆರ್ಥಿಕತೆಯ ಪ್ರಗತಿ ಶೇ 8ರಿಂದ ಶೇ 4.7ಕ್ಕೆ ಕುಸಿದು ದೇಶ ಆರ್ಥಿಕ ವಿನಾಶದತ್ತ ಮುನ್ನುಗ್ಗುತ್ತಿದ್ದರೂ ಇದರ ಸುಳಿವೇ ಇಲ್ಲದಂತೆ ಮೋದಿ ಸರಕಾರ ದಬ್ಬಾಳಿಕೆಯ ಮುಷ್ಟಿಯನ್ನು ಇನ್ನಷ್ಟು ಬಿಗಿಗೊಳಿಸುತ್ತಿದೆ ಎಂಬುದು ನಿಜವೇ ?
9. ಮೋದಿ ಸರಕಾರಕ್ಕೆ ಸತ್ಯದ ಬಗ್ಗೆ ಅದೆಷ್ಟು ಅಂಜಿಕೆಯಿದೆಯೆಂದರೆ ಸಣ್ಣ ಟೀಕೆಯನ್ನೂ ದಾಳಿಯೆಂದು, ಅಸಮ್ಮತಿಯನ್ನು ದೇಶದ್ರೋಹವೆಂದು ಹಾಗೂ ಸರಕಾರವನ್ನು ಬಹಿರಂಗವಾಗಿ ಖಂಡಿಸುವವರನ್ನು ದೇಶ ವಿರೋಧಿಗಳು ಹಾಗೂ ದೇಶದ್ರೋಹಿಗಳೆಂಬ ಹಣೆಪಟ್ಟಿ ಕಟ್ಟಲಾಗುತ್ತಿದೆಯೆಂಬುದು ನಿಜವೇ ?
10. ನಮ್ಮ ಸುತ್ತಲಿನ ಜಗತ್ತು ಮುಂದಡಿಯಿಡುತ್ತಿರುವಾಗ ಮೋದಿ ಆಡಳಿತದಡಿಯಲ್ಲಿ ಭಾರತವು ಮಧ್ಯಯುಗದಲ್ಲಿದ್ದಂತಹ ಅನಾಗರಿಕತೆಯತ್ತ ಹಿಂದಕ್ಕೆ ಚಲಿಸುತ್ತಿದೆಯೆಂಬುದು ನಿಜವೇ ?
ಈ ಮೇಲಿನ ಪ್ರಶ್ನೆಗಳಿಗೆ ಉತ್ತರಗಳು ನಿಮ್ಮನ್ನು ಖಿನ್ನಗೊಳಿಸುತ್ತಿವೆಯೆಂದಾದರೆ, ಈ ಸರಕಾರವು ಭಾರತದ ಪ್ರಜಾಪ್ರಭುತ್ವಕ್ಕೆ ಒಡ್ಡಿರುವ ದೊಡ್ಡ ಬೆದರಿಕೆಯನ್ನು ನೀವು ಅರ್ಥೈಸಲಾರಂಭಿಸಿದ್ದೀರಿ. ತೀರಾ ತಡವಾಗುವ ಮೊದಲು ನೀವು ಈ ಗೋಜಲಿನಿಂದ ಹೊರಬರುವ ಹಾಗೂ ನಮ್ಮನ್ನು ನಾವು ಪಾರು ಮಾಡುವ ವಿಧಾನದ ಕುರಿತು ಯೋಚಿಸಬೇಕಿದೆ.