ಶೇ.65 ಕಾರ್ಮಿಕರಿಂದ ಉದ್ಯೋಗ ತೊರೆಯಲು ಚಿಂತನೆ!
ಕೆಲಸದ ಅವಧಿ ಹೆಚ್ಚಳ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೆಲಸದ ಅವಧಿಯನ್ನು ಹೆಚ್ಚಿ ಸಿರುವುದರಿಂದ ಅನೇಕ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಶೇ.65 ರಷ್ಟು ಕಾರ್ಮಿಕರು ಉದ್ಯೋಗ ತ್ಯಜಿಸಲು ಮುಂದಾಗುತ್ತಿದ್ದಾರೆ!
ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು ವಾರಕ್ಕೆ 48 ಗಂಟೆಯಿಂದ 60 ಗಂಟೆಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಬೇಸತ್ತಿರುವ ಕಾರ್ಮಿಕರು ಕೆಲಸ ಬಿಡಲು ಮುಂದಾಗುತ್ತಿದ್ದಾರೆ ಎಂಬುದನ್ನು ಗಾಮೆರ್ಂಟ್ಸ್ ಮಹಿಳಾ ಕಾರ್ಮಿಕರ ಮುನ್ನಡೆ ಮತ್ತು ಆಲ್ಟರ್ನೇಟಿವ್ ಲಾ ಫೋರಂ ಸಂಘಟನೆಗಳು ನಡೆಸಿರುವ ಸಮೀಕ್ಷೆಯಲ್ಲಿ ಕಾರ್ಮಿಕರು ಈ ರೀತಿಯ ಅಭಿಪ್ರಾಯ ಹೇಳಿಕೊಂಡಿದ್ದಾರೆ.
ಬೆಂಗಳೂರು, ರಾಮನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಯ 82 ಕಾರ್ಖಾನೆಗಳ ಕಾರ್ಮಿಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಕಾರ್ಮಿಕರು ಅನುಭವಿಸಿದ ಭಾವನಾತ್ಮಕ ಮತ್ತು ವಾಸ್ತವ ಒತ್ತಡಗಳು, ಕಾರ್ಖಾನೆ ಮಾಲಕರು ಮತ್ತು ಸರಕಾರ ನೀಡಿದ ಸ್ಪಂದನೆ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಸಮೀಕ್ಷೆಯಲ್ಲಿ ಶೇ.66ರಷ್ಟು ಕಾರ್ಮಿಕರು ಹೆಚ್ಚುವರಿ ಅವಧಿಯಲ್ಲಿ ಕೆಲಸ ಮಾಡುವುದಿಲ್ಲವೆಂದು ಹೇಳಿದ್ದರೆ, ಅವಧಿ ಹೆಚ್ಚಳ ಮಾಡಿದರೆ ಕೆಲಸಕ್ಕೇ ಹೋಗುವುದಿಲ್ಲ ಎಂದು ಶೇ.65ಷ್ಟು ಕಾರ್ಮಿಕರು ಹೇಳಿದ್ದಾರೆ.
ಬಹಳಷ್ಟು ಕಾರ್ಮಿಕರಿಗೆ ಎಪ್ರಿಲ್ ತಿಂಗಳ ವೇತನ ದೊರೆತಿಲ್ಲ. ಶೇ. 17ರಷ್ಟು ಕಾರ್ಮಿಕರಿಗೆ ಶೇ. 50ರಷ್ಟು ವೇತನ ಸಿಕ್ಕಿದೆ. ಮೇ ತಿಂಗಳಲ್ಲಿ ಕಾರ್ಖಾನೆ ಆರಂಭವಾದಾಗ ಕೆಲಸಕ್ಕೆ ಹಾಜರಾದ ಕೆಲವರಿಗೆ ಪೂರ್ತಿ, ಮತ್ತೆ ಕೆಲವರಿಗೆ ಅರ್ಧ ಸಂಬಳ ಸಿಕ್ಕಿದೆ.
ಲಾಕ್ಡೌನ್ ಸಂದಭರ್ದಲ್ಲಿ ಊಟ, ದಿನಸಿ, ಮುಂಗಡ ಹಣ ಅಥವಾ ಸಾಲವನ್ನು ಯಾವ ಕಾರ್ಖಾನೆ ಮಾಲಕರು ನೀಡಿಲ್ಲ ಎಂಬುದನ್ನು ಶೇ.96ರಷ್ಟು ಕಾರ್ಮಿಕರು ಹೇಳಿದ್ದಾರೆ. ಸರಕಾರ ಕೂಡ ನೆರವಿಗೆ ಬರಲಿಲ್ಲ ಎಂದು ಶೇ. 60ರಷ್ಟು ಕಾರ್ಮಿಕರು ತಿಳಿಸಿದ್ದಾರೆ. ಶೇ. 45ರಷ್ಟು ಕಾರ್ಮಿಕರು ನೆರೆಹೊರೆಯವರು ಮತ್ತು ಸಂಬಂಧಿಕರಿಂದ ಸಾಲ ಪಡೆದು ಜೀವನ ನಡೆಸಿದ್ದಾರೆ. ಮನೆ ಬಾಡಿಗೆಯನ್ನೇ ಪಾವತಿಸಿಲ್ಲ ಎಂದು ಶೇ. 68ರಷ್ಟು ಕಾರ್ಮಿಕರು ತಿಳಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಶಿಫಾರಸುಗಳು
► ವೇತನ ಸಮಸ್ಯೆ ಮತ್ತು ಕೆಲಸದ ಅವಧಿ ಬಗ್ಗೆ ಅಹವಾಲು ಸಲ್ಲಿಸಲು ಸರಕಾರ ತಕ್ಷಣವೇ ಸಹಾಯವಾಣಿ ತೆರೆಯಬೇಕು.
► ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲಿದ್ದ ಕಾರ್ಮಿಕರಿಗೆ ಸಂಪೂರ್ಣ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು.
► ಕೆಲಸ ನಷ್ಟವಾಗಿದ್ದರೆ ಅಂತವರಿಗೆ ಆರೋಗ್ಯ ವಿಮೆ, ಆಹಾರ ವಿತರಣೆಯಂತಹ ಸಾಮಾಜಿಕ ಭದ್ರತೆ ಒದಗಿಸಬೇಕು.
► ರವಿವಾರ ಸೇರಿ ರಜಾ ದಿನಗಳಲ್ಲಿ ಕೆಲಸ ಮಾಡಲು ಮಾಲಕರು ಒತ್ತಡ ಹೇರದಂತೆ ನೋಡಿಕೊಳ್ಳಬೇಕು.
► ಹೆಚ್ಚುವರಿ ಕೆಲಸದ ಅವಧಿಯ ವೇತನ ಪಾವತಿಸಬೇಕೆಂದು ಮಾಲಕರಿಗೆ ಸರಕಾರ ನಿರ್ದೇಶನ ನೀಡಬೇಕು.
► ಕಾರ್ಖಾನೆ ಕಾಯ್ದೆಯ ಕೆಲ ಸೆಕ್ಷನ್ಗಳಿಗೆ ನೀಡಿರುವ ವಿನಾಯಿತಿ ಆದೇಶ ಹಿಂದಕ್ಕೆ ಪಡೆಯಬೇಕು.
►ಕಾರ್ಮಿಕರ ಮಕ್ಕಳ ಶಾಲಾ ಶುಲ್ಕ ಮನ್ನಾ ಮಾಡಬೇಕು.
► ಕಾರ್ಮಿಕರು ಮತ್ತುವರ ಕುಟುಂಬದವರಿಗಾಗಿ ಆರೋಗ್ಯ ಶಿಬಿರ ಆಯೋಜಿಸಬೇಕು.