ಭಾರತದಲ್ಲಿ ಸಂಕಷ್ಟದ ಸಮಯದಲ್ಲಿ ನಾಪತ್ತೆಯಾದ ನಾಯಕತ್ವ!
►ಕೋವಿಡ್19, ಚೀನಾ, ಆರ್ಥಿಕತೆ, ಸಮಾಜ ಎಲ್ಲೆಡೆ ಕೇವಲ ಭ್ರಮೆಯ ರಾಜಕೀಯ
ಭಾರತೀಯ ಗಣತಂತ್ರವಿಂದು ನಾಯಕತ್ವ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಿಲಿಯಾಂತರ ಭಾರತೀಯರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು ಗಂಭೀರ ಸ್ವರೂಪದ್ದಾಗಿವೆ. ಬಡತನವನ್ನು ತಗ್ಗಿಸುವ ಗುರಿಸಾಧನೆಯಲ್ಲಿನ ಶ್ರಮದ ಗಳಿಕೆಯು ಇಂದು ಅಪಾಯದಲ್ಲಿದೆ.
ಕೋವಿಡ್-19 ಸಾಂಕ್ರಾಮಿಕವು ಇನ್ನೂ ಉತ್ತುಂಗಕ್ಕೇರಿಲ್ಲ. ಕಳೆದ ಕೆಲವು ವಾರಗಳಲ್ಲಿನ ನಿದರ್ಶನಗಳನ್ನು ಪರಿಗಣಿಸಿದರೆ ನಾವು ಸಾಧಿಸಬಹುದಾಗಿದ್ದ ಸನ್ನದ್ಧತೆ ಸ್ಥಿತಿಯಿಂದ ನಾವಿನ್ನೂ ದೂರವೇ ಇದ್ದೇವೆ. ನಮ್ಮ ಆರೋಗ್ಯ ರಕ್ಷಣೆ ವ್ಯವಸ್ಥೆಯ ಸಾಮರ್ಥ್ಯಗಳು ಈಗ ಸತ್ವಪರೀಕ್ಷೆಗೊಳಗಾಗುತ್ತಿವೆ. ತತ್ಕಾಲದ ಮಿಲಿಟರಿ ವಾತಾವರಣವು ಪ್ರತಿಕೂಲಗೊಳ್ಳುತ್ತಿದೆ. ಭಾರತಕ್ಕೆ ತನ್ನ ಸ್ಥಾನವನ್ನು ತೋರಿಸುವ ಚೀನಾದ ತರ್ಕ ಎಲ್ಲಿ ಅಂತ್ಯಗೊಳ್ಳುತ್ತದೆ ಎನ್ನುವುದು ಯಾರಿಗೂ ಖಚಿತವಿಲ್ಲ. ಅವರು ಸ್ಪಷ್ಟವಾಗಿ ಭಾರತದ ಸಂಕಲ್ಪವನ್ನು ಪರೀಕ್ಷಿಸುತ್ತಿದ್ದಾರೆ ಮತ್ತು ಈ ಘಳಿಗೆಯಲ್ಲಿ ಆಂತರಿಕ ಸಾರ್ವಜನಿಕ ಮುಜುಗರವನ್ನು ತಪ್ಪಿಸುವುದು ನಮ್ಮ ಒಟ್ಟಾರೆ ಗುರಿಯಾಗಿದೆ. ನೇಪಾಳವು ಭಾರತಕ್ಕೆ ಸವಾಲನ್ನೊಡ್ಡಲು ಸಮರ್ಥವಾಗಿರುವುದು ನಮ್ಮ ಕುಂದುತ್ತಿರುವ ಶಕ್ತಿ ಮತ್ತು ರಾಜತಾಂತ್ರಿಕ ಬಲದ ಸಂಕೇತವಾಗಿದೆ. ಚೀನಾ ಅಂತರರಾಷ್ಟ್ರೀಯ ವಿಶ್ವಸನೀಯತೆಯನ್ನು ತ್ವರಿತವಾಗಿ ಕಳೆದುಕೊಳ್ಳುತ್ತಿರಬಹುದು. ಆದರೆ ಭಾರತವೂ ತನ್ನದೇ ರೀತಿಯಲ್ಲಿ ಕಡಿಮೆ ಆಕರ್ಷಕ ಶಕ್ತಿಯಾಗುತ್ತಿದೆ,ಏಕೆಂದರೆ ಅದರ ಪ್ರಗತಿಯ ಸಾಧನೆ ಸ್ಥಗಿತಗೊಳ್ಳುತ್ತಿದೆ ಮತ್ತು ಅದರ ಪ್ರಜಾಪ್ರಭುತ್ವವು ಕಡಿಮೆ ಅನುಕರಣೀಯವಾಗುತ್ತಿದೆ.
ಈ ಬಿಕ್ಕಟ್ಟುಗಳು ಸವಾಲನ್ನೊಡ್ಡುತ್ತಿವೆ. ಆದರೆ ಭಾರತದಲ್ಲಿ ಉನ್ನತಮಟ್ಟದಲ್ಲಿ ನಾಯಕತ್ವದ ಕೊರತೆಯಿದೆ ಎಂಬ ಸತ್ಯವು ಈ ಸವಾಲುಗಳನ್ನು ಇನ್ನಷ್ಟು ಕಠಿಣಗೊಳಿಸುತ್ತಿದೆ. ಬಿಕ್ಕಟ್ಟಿನ ಆಳವನ್ನೂ ಒಪ್ಪಿಕೊಳ್ಳಲಾಗುತ್ತಿಲ್ಲ ಎನ್ನುವುದು ಭಾರತದ ರಾಜಕೀಯ ದುರಂತವಾಗಿದೆ. ಬಿಕ್ಕಟ್ಟಿನ ಯಾವುದೇ ಅಂಶವನ್ನು ಒಪ್ಪಿಕೊಳ್ಳುವುದೂ ಭಾರತವು ಶಕ್ತಿಶಾಲಿ ನಾಯಕತ್ವದ ಕೈಗಳಲ್ಲಿದೆ ಎಂಬ ಸುಳ್ಳನ್ನೇ ಸತ್ಯವೆಂದು ಹರಿಬಿಡುವ ತನ್ನ ಹುನ್ನಾರವನ್ನು ವಿಫಲಗೊಳಿಸುತ್ತದೆ ಎನ್ನುವುದು ಸರಕಾರಕ್ಕೆ ಚೆನ್ನಾಗಿ ಗೊತ್ತಿದೆ. ಕಟುಸತ್ಯವೇನೆಂದರೆ ಭಾರತದ ಇತ್ತೀಚಿನ ಇತಿಹಾಸದಲ್ಲಿ ನಾಯಕತ್ವದ ಇಷ್ಟೊಂದು ಕೊರತೆಯ ಸಮಯವು ಎಂದೂ ಬಂದಿರಲಿಲ್ಲ.
ಸರಕಾರದ ಸಂಪೂರ್ಣ ಶಕ್ತಿಯು ಪ್ರಚಾರ, ವಿಭಜನೆ ಮತ್ತು ದಮನದ ಮೂಲಕ ನಾಯಕನ ಮಿಥ್ಯೆಯನ್ನೇ ಸತ್ಯವನ್ನಾಗಿಸುವ ಹುನ್ನಾರವನ್ನು ಸಂರಕ್ಷಿಸುವಲ್ಲಿ ತೊಡಗಿಕೊಂಡಿದೆ ಎಂಬ ಅಂಶವು ಇದರ ಮಹತ್ವಪೂರ್ಣ ಸಂಕೇತವಾಗಿದೆ. ನಾಯಕರಿಗೆ ಪರಿಕಲ್ಪನೆಗಳು ಮತ್ತು ಸಾಧನೆಗಳ ಪ್ರಚಾರ ಅಗತ್ಯವಾಗಿದೆ. ಆದರೆ ಆಡಳಿತವೊಂದನ್ನು ಉಳಿಸಿಕೊಳ್ಳಲು ಅಗತ್ಯವಾಗಿರುವ ಪ್ರಚಾರವು ನಾಯಕರ ಸಾಮರ್ಥ್ಯಗಳಿಗೆ ಹೋಲಿಸಿದರೆ ವಿಪರೀತ ಪ್ರಮಾಣದಲ್ಲಿರುತ್ತದೆ ಎನ್ನುವುದು ಬಹುಶಃ ಯಾವುದೇ ಪ್ರಜಾಪ್ರಭುತ್ವದಲ್ಲಿಯ ಬುದ್ಧಿವಂತ ಉಕ್ತಿಯಾಗಿದೆ. ಈ ಸರಕಾರವು ಜವಾಹರಲಾಲ ನೆಹರು ಅವರನ್ನು ಗಣ್ಯ ವ್ಯಕ್ತಿಗಳೇ ಆಳಬೇಕು ಎನ್ನುವುದರ ಪ್ರತಿಪಾದಕ ಎಂದು ತಳ್ಳಿಹಾಕಿದೆ.
ಆದರೆ ನೆಹರು ಪ್ರಜಾಪ್ರಭುತ್ವವಾದಿಯಾಗಿದ್ದರು ಮತ್ತು ಇದು ಮುಖ್ಯವಾದ ವಿಷಯವಾಗಿದೆ. ಅವರು ಜನತೆಯ ಬುದ್ಧಿವಂತಿಕೆ ಮತ್ತು ತನ್ನನ್ನು ಮತ್ತು ಸರಿಯೋ ತಪ್ಪೋ,ತನ್ನ ಕ್ರಮಗಳ ತರ್ಕಗಳನ್ನು ಜನತೆಗೆ ವಿವರಿಸುವ ಅಗತ್ಯದ ಬಗ್ಗೆ ಶಂಕೆ ಹೊಂದಿರಲಿಲ್ಲ. ಜನಸಾಮಾನ್ಯರ ವ್ಯಕ್ತಿಯಾಗಿರುವ ಮೋದಿ ಜನತೆಯನ್ನುದ್ದೇಶಿಸಿ ಮಾತನಾಡುತ್ತಾರೆ, ಅವರೊಂದಿಗೆ ಮಾತನಾಡುವುದಿಲ್ಲ ಮತ್ತು ಅವರ ಮಾತುಗಳು ಅವರನ್ನು ಪ್ರಶ್ನಿಸಲಾಗದಂತಹ ರೂಪದಲ್ಲಿರುತ್ತವೆ. ಅಂದರೆ ಅವರು ಪ್ರಜಾಸತ್ತಾತ್ಮಕ ಸಂವಾದ ಮತ್ತು ಸಾರ್ವಜನಿಕರಿಗಿಂತ ಮೇಲೆಯೇ ಇರುತ್ತಾರೆ, ಅದರ ಭಾಗವಾಗಿರುವುದಿಲ್ಲ.
ಈ ಆಡಳಿತ ಮತ್ತು ನಮ್ಮಲ್ಲಿ ಹೆಚ್ಚಿನವರು ಮನಮೋಹನ ಸಿಂಗ್ ಅವರನ್ನು,ವಿಶೇಷವಾಗಿ ಯುಪಿಎಯನ್ನು ಒಳಗಿಂದೊಳಗೇ ದುರ್ಬಲಗೊಳಿಸಿದ್ದ ಉದಯೋನ್ಮುಖ ಪ್ಲುಟೊಕ್ರಸಿ ಅಥವಾ ಧನಿಕ ವರ್ಗದ ಪ್ರಭುತ್ವದ ಹಿನ್ನೆಲೆಯಲ್ಲಿ,ಅವರ ಜಾಣ ಮೌನಕ್ಕಾಗಿ ಟೀಕಿಸಿದ್ದೇವೆ. ಆದರೆ ಭಾರತವು ಮೂರು ದಶಕಗಳಲ್ಲಿಯೇ ತನ್ನ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ಕೆಲವು ಅಡಕಪದಗಳು ಮತ್ತು ಅರ್ಥಹೀನ ನುಡಿಗಟ್ಟುಗಳನ್ನು ಹೊರತುಪಡಿಸಿ ಈ ಪ್ರಧಾನ ಮಂತ್ರಿಗಳು ಇತ್ತೀಚಿನ ಸಮಯಗಳಲ್ಲಿ ರಾಷ್ಟ್ರಕ್ಕೆ ಚೈತನ್ಯವನ್ನು ತುಂಬಿದ,ಅದನ್ನು ಒಂದಾಗಿಸಿದ ಮತ್ತು ಅತ್ಯಂತ ಮುಖ್ಯವಾಗಿ ದೂರದೃಷ್ಟಿಯ ಭಾವನೆಯನ್ನು ತೋರಿಸಿದ ಯಾವುದೇ ತರ್ಕ ಅಥವಾ ವಿಷಯವನ್ನು ಮುಂದಿರಿಸಿದ್ದ ಒಂದಾದರೂ ಭಾಷಣ ಮಾಡಿದ್ದಾರೆಯೇ?, ಬಹಳಷ್ಟು ಮಾತನಾಡುವುದು ಮತ್ತು ಬಹಳಷ್ಟು ಹೇಳುವುದು ಒಂದೇ ಅಲ್ಲ. ಈ ಪ್ರಧಾನಿಯ ಉದ್ದೇಶಪೂರ್ವಕ ಮತ್ತು ನುಣುಚಿಕೊಳ್ಳುವ ಮೌನಗಳು ಇತರ ಯಾವುದೇ ಪ್ರಧಾನಿಯ ಮೌನವನ್ನು ತುಂಬ ಹಿಂದಿಕ್ಕಿದೆ.
ಐತಿಹಾಸಿಕ ಜನಾದೇಶದೊಂದಿಗೆ,ವಸ್ತುಶಃ ವಿರೋಧವೇ ಇಲ್ಲದ,ಆರು ವರ್ಷಗಳ ಅನುಭವಿ ಪ್ರಧಾನ ಮಂತ್ರಿ ತಾನೋರ್ವ ಬಲಿಪಶು ಎಂಬಂತೆ ನಿರಂತರವಾಗಿ ವರ್ತಿಸುತ್ತಿರುವುದು ನಾಯಕತ್ವಕ್ಕೆ ಅನುಗುಣವಲ್ಲದ ಗಾಢ ಅಭದ್ರತೆಯ ಭಾವನೆಯ ಅಥವಾ ತನ್ನನ್ನು ಕಠಿಣ ಪ್ರಶ್ನೆಗಳನ್ನು ಕೇಳದಂತೆ ವಾತಾವರಣ ಸೃಷ್ಟಿಸುವುದರ ಸಂಕೇತವಾಗಿದೆ. ಆರ್ಥಿಕತೆಯ ನಿರ್ವಹಣೆ, ಭಾರತದ ಗಡಿಗಳನ್ನು ಹೆಚ್ಚು ಅಭದ್ರವಾಗಿಸಿರುವ ವ್ಯೂಹಾತ್ಮಕತೆ ಇತ್ಯಾದಿಗಳ ಬಗ್ಗೆ ಈ ಪ್ರಧಾನಿಯನ್ನು ಪ್ರಶ್ನಿಸಲೇಬೇಡಿ.
ಆದರೆ ಎಲ್ಲಕ್ಕಿಂತ ಹೆಚ್ಚು ಮಹತ್ವಪೂರ್ಣವಾದುದೆಂದರೆ ಬಿಕ್ಕಟ್ಟಿನ ಅಗಾಧತೆಯನ್ನು ಪರಿಗಣಿಸಿದರೆ ದೇಶವನ್ನು ಒಂದಾಗಿಸುವುದು ಯಾವುದೇ ನಿಜವಾದ ನಾಯಕತ್ವದ ಮೊದಲ ಕೆಲಸವಾಗಿರುತ್ತದೆ. ಆದರೆ ಪ್ರತಿಯೊಂದೂ ವಿಷಯದಲ್ಲಿ ಕೋಮು ವಿಭಜನೆಯ ಮತ್ತು ಸರ್ವಾಧಿಕಾರದ ಸಾಂಕ್ರಾಮಿಕ ಪಿಡುಗಿನ ಮೊದಲಿನ ರಾಜಕೀಯವೇ ಮುಂದುವರಿಯುತ್ತಿದೆ. ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಬೇಟೆಯಾಡುತ್ತಿರುವ ರೀತಿಯಲ್ಲಿ ಇವೆರಡೂ ಢಾಳಾಗಿ ಎದ್ದುಕಾಣುತ್ತಿವೆ. ಕೋವಿಡ್-19 ಬಿಕ್ಕಟ್ಟಿನ ನಡುವೆ ತಾರತಮ್ಯದ ವಿರುದ್ಧ ಹೋರಾಡುತ್ತಿರುವ ಆದರ್ಶವಾದಿ ಯುವ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಎಂದು ಬಿಂಬಿಸುವುದು ಈ ಸರಕಾರದ ಆದ್ಯತೆಯಾಗಿದೆ ಮತ್ತು ದ್ವೇಷವನ್ನು ಹರಡುವವರು ಸಂಪೂರ್ಣವಾಗಿ ಮುಕ್ತರಾಗಿದ್ದಾರೆ. ಅಬ್ರಹಾಂ ಲಿಂಕನ್ ಹೇಳಿರುವಂತೆ ಒಡೆದ ಮನೆಯು ನಿಲ್ಲುವುದಿಲ್ಲ ಎನ್ನುವುದು ಓರ್ವ ನಾಯಕನಾದವನಿಗೆ ಗೊತ್ತಿರುತ್ತದೆ. ಆದರೆ ಇಲ್ಲಿ ನಮ್ಮ ನಾಯಕ ಸ್ವತಃ ಒಡೆದ ಮನೆಯಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
ಕೋವಿಡ್-19 ಕುರಿತು ಸಹ ನಮ್ಮ ಪ್ರಧಾನಿಯು ದೇಶವನ್ನು ಒಂದಾಗಿಸಿಲ್ಲ. ದೃಢಸಂಕಲ್ಪ ಮತ್ತು ಅದನ್ನು ಕಾರ್ಯಗತಗೊಳಿಸಲು ಸಂಪನ್ಮೂಲಗಳೊಂದಿಗೆ ಈ ಸವಾಲನ್ನು ದೇಶವು ಎದುರಿಸುವಂತೆ ಮಾಡುವ ಬದಲು ನಾವು ವಿಭಜನಕಾರಿ ನೀತಿಯನ್ನು ಅನುಸರಿಸುತ್ತಿದ್ದೇವೆ. ಈ ಸಾಂಕ್ರಾಮಿಕವು ಕಠಿಣ ಸವಾಲು ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಸವಾಲನ್ನು ಎದುರಿಸುವ ಪ್ರಯತ್ನವನ್ನು ಬೆಂಬಲಿಸಲು ಯಾವುದೇ ಸಹಕಾರ ನೀಡಲೂ ಪ್ರಜೆಗಳು ಸಿದ್ಧರಿದ್ದಾರೆ. ಆದರೆ ನಮ್ಮ ಆಡಳಿತವು ಸಾಂಕ್ರಾಮಿಕ ತನ್ನ ಅಬ್ಬರವನ್ನು ಮೆರೆಸಲು ಮುಕ್ತ ಅವಕಾಶವನ್ನು ನೀಡಿದೆ.
ಗುಜರಾತ್, ದಿಲ್ಲಿಯಿಂದ ಹಿಡಿದು ಪ.ಬಂಗಾಳದವರೆಗೆ ರಾಜ್ಯಗಳು ವಾಸ್ತವವನ್ನು ಎದುರಿಸುವ ಬದಲು ಸಾಂಕ್ರಾಮಿಕವನ್ನು ನಿಯಂತ್ರಿಸುವ ಕೇಂದ್ರದ ಪ್ರಯತ್ನಗಳನ್ನು ಅಣಕವಾಡಿವೆ, ಕೊರೋನ ವೈರಸ್ ತಮ್ಮ ರಾಜ್ಯಗಳಲ್ಲಿ ನಿಯಂತ್ರಣದಲಿದೆ ಎಂದು ಬಿಂಬಿಸಲು ಅಂಕಿಅಂಶಗಳನ್ನೇ ತಿರುಚಿವೆ. ಕೊರೋನ ವೈರಸ್ ಸ್ಥಿತಿ ಹದಗೆಟ್ಟ್ಟಿರುವುದಕ್ಕೆ ಪ್ರಧಾನಿಯಷ್ಟೇ ವಿಜಯ್ ರೂಪಾನಿ,ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್ ಅವರಂತಹ ಹೆಚ್ಚಿನ ರಾಜ್ಯನಾಯಕರನ್ನೂ ದೂರಬೇಕಿದೆ.
ನಮ್ಮ ಪ್ರಧಾನಿಯವರು ನಾಯಕತ್ವವನ್ನು ಯಾವ ಮಟ್ಟಕ್ಕೆ ತಗ್ಗಿಸಿದ್ದಾರೆಂದರೆ ವಾಸ್ತವನ್ನು ಎದುರಿಸುವ ಬದಲು ಅದನ್ನು ನಿರಾಕರಿಸಿ,ಟೀಕೆಯನ್ನು ಉತ್ತೇಜಿಸುವ ಬದಲು ಅದನ್ನು ದಮನಿಸಿ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಬದಲು ಅವುಗಳನ್ನು ಹೆಚ್ಚಿಸಿ, ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಬದಲು ಹೆಗ್ಗಳಿಕೆಯನ್ನು ಸ್ವೀಕರಿಸಿ ದೂರನ್ನು ಇನ್ನೊಬ್ಬರಿಗೆ ಹೊರಿಸಿ, ಸವಾಲುಗಳನ್ನು ಎದುರಿಸಲು ದೇಶವನ್ನು ಸಜ್ಜಾಗಿಸುವ ಬದಲು ಅದನ್ನು ಸದಾ ದಾರಿ ತಪ್ಪಿಸುತ್ತಿರಿ ಎನ್ನುವಂತಾಗಿದೆ. ಪ್ರಧಾನಿ ತನ್ನ ಬೆಂಬಲಿಗರಿಂದ ಬಹುವಾದ ಪ್ರಶಂಸೆಯನ್ನು ಪಡೆಯುತ್ತಿರುತ್ತಾರೆ,ಆದರೆ ಈ ಪ್ರಶಂಸೆ ಅವರ ನಾಯಕತ್ವಕ್ಕಾಗಿ ಅಲ್ಲ ಎನ್ನುವುದು ಈವರೆಗೆ ಸ್ಪಷ್ಟವಾಗಿರಬೇಕು. ಅವರ ನಾಯಕತ್ವವು ಸಂಪೂರ್ಣವಾಗಿ ನಾಪತ್ತೆಯಾಗಿದೆ. ಅದರ ಸ್ಥಾನದಲ್ಲಿ ಭ್ರಮಾ ರಾಜಕೀಯವಿದೆ ಮತ್ತು ನಾವೆಲ್ಲ ಅದರಲ್ಲಿ ಸುಲಭವಾಗಿ ಸಿಕ್ಕಿಬಿದ್ದಿದ್ದೇವೆ. ಭಾರತವು ನಾಯಕತ್ವದ ಯಾವುದೇ ಚುಕ್ಕಾಣಿಯಿಲ್ಲದೆ ಅಪರಿಚಿತ ದಿಕ್ಕಿನತ್ತ ಸಾಗುತ್ತಿದೆ.