ಅಯೋಧ್ಯೆಯಲ್ಲಿ 5 ಎಕರೆ ಜಾಗದಲ್ಲಿ ‘ಬಾಬರಿ ಆಸ್ಪತ್ರೆ’ ನಿರ್ಮಾಣವಾಗಲಿದೆಯೇ?
ಇಲ್ಲಿದೆ ವೈರಲ್ ಸಂದೇಶದ ಹಿಂದಿನ ವಾಸ್ತವ
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದು ವೈರಲ್ ಆಗುತ್ತಿದೆ. ಸುನ್ನಿ ವಕ್ಫ್ ಬೋರ್ಡ್ ಗೆ ನೀಡಲಾದ ಜಮೀನಿನಲ್ಲಿ ‘ಬಾಬರಿ ಆಸ್ಪತ್ರೆ’ ನಿರ್ಮಾಣವಾಗಲಿದೆ ಎನ್ನುವುದು ಆ ಸಂದೇಶದಲ್ಲಿದೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್, ಟ್ವಿಟರ್ , ವಾಟ್ಸ್ಯಾಪ್ ನಲ್ಲಿ ವೈರಲ್ ಆದ ಈ ಸಂದೇಶದಲ್ಲಿ ವೈದ್ಯ, ಹೋರಾಟಗಾರ ಡಾ. ಕಫೀಲ್ ಖಾನ್ ಈ ಆಸ್ಪತ್ರೆಯ ನಿರ್ದೇಶಕರಾಗಲಿದ್ದಾರೆ ಎಂದೂ ಬರೆಯಲಾಗಿದೆ. ಈ ಪೋಸ್ಟ್ ಜೊತೆಗೆ ಆಸ್ಪತ್ರೆಯೊಂದರ ನಕಾಶೆ ಇದ್ದು ಅದರಲ್ಲಿ ‘ಬಾಬರಿ ಆಸ್ಪತ್ರೆ’ ಎಂದು ಬರೆಯಲಾಗಿದೆ.
ವಾಸ್ತವವೇನು?
ಫೋಟೊದ ಜೊತೆಗೆ ಹರಡುತ್ತಿರುವ ಈ ಸಂದೇಶ ಸುಳ್ಳು. ಸಂದೇಶದ ಜೊತೆಗಿರುವ ಫೋಟೊ ‘ಬಾಬರಿ ಆಸ್ಪತ್ರೆ’ಯ ನಕಾಶೆಯದ್ದಲ್ಲ. ಬದಲಾಗಿ ಈ ಫೋಟೊವನ್ನು ಸ್ಮಿತ್ ಗ್ರೂಪ್ ಎಂಬ ವೆಬ್ ಸೈಟ್ ನಿಂದ ತೆಗೆಯಲಾಗಿದೆ. ಎಡಿಟ್ ಮಾಡಿ ‘ಬಾಬರಿ ಮಸೀದಿ’ ಎಂದು ಬರೆಯಲಾಗಿದೆ.
ಸುನ್ನಿ ವಕ್ಫ್ ಬೋರ್ಡ್ ಗೆ ನೀಡಲಾದ 5 ಎಕರೆ ಭೂಮಿಯನ್ನು ಮಸೀದಿ ನಿರ್ಮಾಣಕ್ಕೆ ಬಳಸಲಾಗುವುದು ಎನ್ನುವುದೂ ಕೂಡ ಸುಳ್ಳಾಗಿದೆ. ಆಗಸ್ಟ್ 7ರಂದು ನೀಡಿರುವ ಹೇಳಿಕೆಯಲ್ಲಿ ಬೋರ್ಡ್, “5 ಎಕರೆ ಜಾಗವನ್ನು ಇಂಡೋ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರ ನಿರ್ಮಾಣಕ್ಕೆ ಬಳಸಲಾಗುವುದು. ಅದರಲ್ಲಿ ಗ್ರಂಥಾಲಯ, ಮಸೀದಿ, ಕಮ್ಯುನಿಟಿ ಕಿಚನ್ ಮತ್ತು ಆಸ್ಪತ್ರೆ ಇರಲಿದೆ” ಎಂದಿದೆ.
ಕಫೀಲ್ ಖಾನ್ ರನ್ನು ನಿರ್ದೇಶಕರನ್ನಾಗಿಸಿ ‘ಬಾಬರಿ ಆಸ್ಪತ್ರೆ’ ನಿರ್ಮಾಣಕ್ಕೆ ನಾವು ಮುಂದಾಗಿಲ್ಲ ಎಂದು ಬೋರ್ಡ್ ಸ್ಪಷ್ಟಪಡಿಸಿದೆ.
ಕೃಪೆ: theprint.in