ಬಂಡೀಪುರದ ರಾಯಭಾರಿ ಮಾನವ ಸ್ನೇಹಿ ವ್ಯಾಘ್ರ 'ಪ್ರಿನ್ಸ್' ಇನ್ನಿಲ್ಲ
ಗುಂಡ್ಲುಪೇಟೆ, ಎ.4: ಬಂಡೀಪುರ ಅಭಯಾರಣ್ಯದ ಬ್ರಾಂಡ್ ಅಂಬಾಸಡರ್ (ರಾಯಾಭಾರಿ) ಪ್ರಿನ್ಸ್ ಹುಲಿ ಸಾವನ್ನಪ್ಪಿದೆ.
ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಬೀಟ್ ಬಳಿ ರವಿವಾರ 12 ವರ್ಷ ವಯಸ್ಸಿನ ಗಂಡುಹುಲಿಯ ಕಳೇಬರ ಸಿಕ್ಕಿದ್ದು ಪ್ರಿನ್ಸ್ ಹುಲಿಯದ್ದು ಎಂದು ಇದೀಗ ತಡವಾಗಿ ತಿಳಿದು ಬಂದಿದೆ.
ದಕ್ಷಿಣ ಭಾರತದಲ್ಲಿಯೇ ಅರಣ್ಯವೊಂದರಲ್ಲಿ ಪ್ರವಾಸಿಗರಿಗೆ ಅತೀ ಹೆಚ್ಚು ಬಾರಿ ಕಾಣಿಸಿಕೊಂಡು ಎಂತಹ ಸಂಧರ್ಭದಲ್ಲೂ ಯಾರಿಗೂ ಕೇಡು ಮಾಡದೆ ಬಂಡೀಪುರ ಅಭಯಾರಣ್ಯದ ಅನಭಿಶಕ್ತ ದೊರೆಯಾಗಿ ಮೆರೆದ ಭಾರೀ ಗ್ರಾತ್ರದ ಗಂಡು ಹುಲಿ ಪ್ರಿನ್ಸ್. ಈತ 10 ವರ್ಷಗಳ ಕಾಲ ಬಂಡೀಪುರ ಅಭಯಾರಣ್ಯವನ್ನು ಆಳಿ ಅರಣ್ಯ ಇಲಾಖೆಗೆ ಸಫಾರಿಯಲ್ಲಿ ಸುಮಾರು 50 ಕೋಟಿ ರೂ. ಆದಾಯ ತಂದು ಕೊಟ್ಟ ಕೀರ್ತಿಗೆ ಪಾತ್ರನಾಗಿದ್ದಾನೆ.
ಮಾನವ ಸ್ನೇಹಿ ವ್ಯಾಘ್ರ!
ಹುಲಿ ಕಂಡರೆ ಎದೆ ಗಡಗಡ ಎನ್ನತ್ತದೆ. ಆದರೆ ಬಂಡೀಫುರ ಸಫಾರಿಯಲ್ಲಿ ಪ್ರಿನ್ಸ್ ಹುಲಿ ಕಾಣಸಿಗಲಿಲ್ಲೆಂದರೆ ಪ್ರವಾಸಿಗರು ನಿರಾಸೆಯಾಗುತ್ತಾರೆ. ಅಂತಹ ಬಾಂಧವ್ಯವನ್ನು ಈ ಹುಲಿ ಹೊಂದಿತ್ತು. ಸಫಾರಿಗೆ ತೆರಳುತ್ತಿದ್ದ ಪ್ರವಾಸಿಗರನ್ನು ನೋಡಿ ಅವರ ಫೋಟೋಗಳಿಗೆ ವಿವಿಧ ಬಂಗಿಗಳನ್ನು ನೀಡಿ ಚಿತ್ರ ತೆಗೆಯಲು ಅನುಕೂಲ ಮಾಡಿಕೊಡುತ್ತಿದ್ದ. ಶಬ್ದಕ್ಕೆ ಹೆದರುತ್ತಿರಲಿಲ್ಲ. ಒಂದು ಬಾರಿ ಪ್ರವಾಸಿಗರ ಮುಂದೆ ಕಂಡರೆ ಆತ ಕಾಡಿನೊಳಗೆ ಹೋಗದೆ ಜನರಿಗೆ ಅಪಾರವಾದ ಪ್ರೀತಿ ನೀಡುತ್ತಿದ್ದ ಅಂತಹ ವಿಭಿನ್ನವ್ಯಕ್ತಿತ್ವದ ಹುಲಿ ಇದೀಗ ಪ್ರಾಣಿಪ್ರಿಯರಿಂದ ಕಣ್ಮರೆಯಾಗಿದ್ದಾನೆ.
7-8 ಉದ್ದದ ಭಾರೀ ಗಾತ್ರದ ಈ ಹುಲಿ ಬಂಡೀಪುರ ಕಾಡಿನ ಬಹುಪಾಲು ಅರಣ್ಯ ಪ್ರದೇಶವನ್ನು ಆಕ್ರಮಸಿಕೊಂಡು ತನ್ನ ಅಧಿಪತ್ಯ ಸ್ಥಾಪಿಸಿದ್ದ. ತನ್ನ ವಾಸ ಸ್ಥಾನದಲ್ಲಿ ಬೇರೆ ಹುಲಿಗಳಿಗೆ ಜಾಗ ನೀಡದೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದ. ಆತ ವಾಸಿಸುವ ಸುತ್ತಮುತ್ತಾ ಅದೆಷ್ಟೇ ಬಲಿಷ್ಠ ಬೇರೆ ಹುಲಿಗಳು ಕಾಲಿಟ್ಟರೂ ಕ್ಷಣ ಮಾತ್ರದಲ್ಲಿ ಕಾದಾಡಿ ಸಾಯಿಸುತ್ತಿದ್ದ. ಈಂತಹ ಸಂದರ್ಭದಲ್ಲಿ ಕೆಲ ದಿನಗಳ ಹಿಂದೆ ಮತ್ತು ಎರಡು ಹಲ್ಲು ಕಳೆದುಕೊಂಡಿದ್ದ.
ಸಂಗಾತಿಯನ್ನು ಅತೀ ಪ್ರೀತಿಸುತ್ತಿದ್ದ. ಹೆಣ್ಣು ಹುಲಿ ಜೊತೆ ಸೇರುವಾಗ ಹತ್ತಾರು ದಿನಗಳ ಕಾಲ ಕಾಡಿನೊಳಗೆ ಕಣ್ಮರೆಯಾಗುತ್ತಿದ್ದ ಆ ಸಂಧರ್ಭದಲ್ಲಿ ಪ್ರವಾಸಿಗರು ಪ್ರಿನ್ಸ್ ಹುಲಿ ಕಾಣಿಸುತ್ತಿಲ್ಲ ಎಂದು ಚಡಪಡಿಸುತ್ತಿದ್ದರು. ಇದೀಗ ಅಂತಹ ವಿಶ್ವಶ್ರೇಷ್ಠ ಹುಲಿ ಅಗಲಿದೆ. ಪ್ರಿನ್ಸ್ ಹುಲಿ ಸಾವಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರು ಮಾಧ್ಯಮದವರು, ಪ್ರಾಣಿಪ್ರಿಯರು ಮಮ್ಮಲ ಮರುಗುತ್ತಿದ್ದಾರೆ.