ಚಿಕಿತ್ಸೆ ಸಿಗದೆ ಸಾಯಲು ನಿನ್ನನ್ನು ಬಿಡುವುದಿಲ್ಲ ಎಂದು ತಂಗಿ ಹೇಳಿದಳು : ಸುಭಾನ
ನನ್ನ ಕತೆ
ನನ್ನ ಅಮ್ಮ ಯಾವತ್ತೂ ನನ್ನೆದುರು ಅಳುವುದಿಲ್ಲ. ಆದರೆ ನನ್ನ ತಂದೆ ತುಂಬಾ ಮುಗ್ಧ. ನನಗೆ ಹೇಗೆ ಅನಿಸುತ್ತದೆಯೆಂದು ಯಾವತ್ತೂ ನನ್ನನ್ನು ಕೇಳುತ್ತಾ ಇರುತ್ತಾರೆ. ನನ್ನ ತಾಯಿಯ ಬಳಿ ಸುಳ್ಳು ಹೇಳಬಲ್ಲೆ ಆದರೆ ತಂದೆಯ ಬಳಿ ಸುಳ್ಳು ಹೇಳುವುದು ಅಸಾಧ್ಯ. ಆದುದರಿಂದ ಅವರನ್ನು ನೋಡಿ ಮುಗುಳ್ನಗಲು ಯತ್ನಿಸುತ್ತೇನೆ.
ನಂತರ ಅವರು ನನ್ನ ತಲೆ ನೇವರಿಸಿ ಎಲ್ಲವೂ ಬಹಳ ಬೇಗನೇ ಸರಿಯಾಗುವುದೆಂದು ಹೇಳುತ್ತಾರೆ. ಆ ಕ್ಷಣ ನನ್ನ ಕಣ್ಣುಗಳಲ್ಲಿ ನೀರು ಧಾರೆಯಾಗಿ ಹರಿಯುವುದು. ಎಲ್ಲರೆದುರು ಅಳುವುದನ್ನು ನಾನು ದ್ವೇಷಿಸುತ್ತೇನೆ. ನಾನು ಅಳುವಾಗ ನನ್ನ ಮುಖವನ್ನು ಯಾರಾದರೂ ನೋಡಿದರೆ ನನಗೆ ನಾಚಿಕೆಯಾಗುತ್ತದೆ.
ಕೆಲ ತಿಂಗಳ ಹಿಂದೆ ನನ್ನ ಒಬ್ಬಳು ಸ್ನೇಹಿತೆಯ ಮದುವೆ ಸಮಾರಂಭಕ್ಕೆ ನನ್ನ ಸಹೋದರಿಯೊಂದಿಗೆ ಹೋಗಿದ್ದೆ. ನನ್ನ ಅಚ್ಚುಮೆಚ್ಚಿನ ಅಂಗಿಗೆ ಹೊಂದುವಂತೆ ನನ್ನ ತಂದೆ ನನಗೆ ಹಸಿರು ಬಳೆಗಳನ್ನು ತಂದು ಕೊಟ್ಟಿದ್ದರು. ಬಹಳ ಸಮಯದ ಬಳಿಕ ನಾನು ತುಂಬಾ ಖುಷಿಯಲ್ಲಿದ್ದೆ. ಮದುವೆ ಸಮಾರಂಭದಲ್ಲಿ ನನ್ನ ಗೆಳತಿಯ ತಾಯಿ ನನ್ನ ಬಳಿ ತಮಾಷೆಯಾಗಿ ಈ ಮದುವೆ ಸಮಾರಂಭವನ್ನು ಸಂಪೂರ್ಣವಾಗಿ ಆನಂದಿಸುವಂತೆ ಹಾಗೂ ನನ್ನನ್ನು ಯಾರೂ ಮದುವೆಯಾಗಲಿಕ್ಕಿಲ್ಲವಾದುದರಿಂದ ನನಗೆ ಇಂತಹ ಅವಕಾಶ ಮತ್ತೆ ಬಾರದು ಎಂದರು.
ನನಗೆ ತಮಾಷೆ ಅರ್ಥವಾಗುವುದೇ ಇಲ್ಲ. ನಾನು ಜೋರಾಗ ಅತ್ತು ಬಿಟ್ಟೆ ಹಾಗೂ ಅಲ್ಲಿಂದ ಕೂಡಲೇ ಹೊರ ಬಂದು ಬಿಟ್ಟೆ. ಮನೆಗೆ ಹಿಂದಿರುಗುವ ಹಾದಿಯಲ್ಲಿ ನನ್ನ ತಂಗಿ ನನ್ನ ಅಳುವನ್ನು ನಿಲ್ಲಿಸಲು ಅದೆಷ್ಟೋ ಪ್ರಯತ್ನ ಪಟ್ಟಳು.
ನನ್ನ ಬದುಕು ಯಾವಾಗಲೂ ಹೀಗೆಯೇ. ನನಗೆ ಶಾಲೆಗೆ ಹೋಗಬಾರದು ಎಂದು ಹೇಳಲಾಯಿತು. ನನಗೆ ಯಾವಾಗ ಬೇಕಾದರೂ ಏನಾದರೂ ಆಗಬಹುದೆಂದು ಶಿಕ್ಷಕರು ನನ್ನ ಹೆತ್ತವರಲ್ಲಿ ಹೇಳಿದ್ದರು ; ನಾನು ಯಾವತ್ತೂ ಮನೆಯಲ್ಲಿಯೇ ಇರಬೇಕಿತ್ತು. ನನಗೆ ತುಂಬಾ ಅಸೌಖ್ಯವಿದೆ. ನನಗೇನಾಗಿದೆಯೆಂದು ನನ್ನ ಹೆತ್ತವರು ನನಗೆ ಹೇಳಲೇ ಇಲ್ಲ. ಹಲವಾರು ಬಾರಿ ನಾನು ನನ್ನ ಪ್ರಜ್ಞೆ ಕಳೆದುಕೊಳ್ಳುತ್ತೇನೆ; ಕೆಲವೊಮ್ಮೆ ದಿನಕ್ಕೆ ಎರಡು ಬಾರಿ. ನನಗೆ ಎರಡು-ಮೂರು ಗಂಟೆಗಳ ನಂತರ ಪ್ರಜ್ಞೆ ಬರುತ್ತದೆ.
ಇದೆಲ್ಲಾ ಆರಂಭವಾಗಿದ್ದು ನನಗೆ 11 ವರ್ಷ ಆಗಿರುವಾಗ. ನನ್ನ ಹೆತ್ತವರು ಬಹಳ ಬಡವರಾದರೂ, ಅವರಲ್ಲಿದ್ದ ಎಲ್ಲವನ್ನೂ ನನಗಾಗಿ ಖರ್ಚು ಮಾಡಿದರು. ಕೆಲ ತಿಂಗಳ ಹಿಂದೆ ನನ್ನ ತಂಗಿ ಕೆಲಸಕ್ಕೆ ಹೋಗಲು ಆರಂಭಿಸಿದ್ದಳು. ಚಿಕಿತ್ಸೆ ದೊರೆಯದೆ ನನ್ನನ್ನು ಸಾಯಲು ಬಿಡುವುದಿಲ್ಲ ಎಂದು ಆಕೆ ನನ್ನಲ್ಲಿ ಹೇಳಿದಳು. ನಾನು ಹೆಚ್ಚು ಸಮಯ ಬದುಕುವುದಿಲ್ಲವೆಂದು ನನಗೆ ಆಗಾಗ ಅನಿಸುತ್ತದೆ.
ಆ ಮದುವೆಯಿಂದ ನಾನು ಹಿಂದಿರುಗಿದ ದಿನ ನನ್ನ ತಾಯಿ ನನ್ನ ಕೂದಲಿಗೆ ಎಣ್ಣೆ ತಿಕ್ಕುತ್ತಾ ಒಂದು ದಿನ ನನ್ನ ಮದುವೆಯನ್ನು ಒಬ್ಬ ದಯಾಳು ವ್ಯಕ್ತಿಯೊಡನೆ ನಿಗದಿ ಮಾಡುವುದಾಗಿ ಹೇಳಿದರು. ಆಕೆಯನ್ನು ನಾನು ತಡೆಯಲಿಲ್ಲ. ನನಗೆ ಅದನ್ನೂ ನಂಬಬೇಕಿತ್ತು. ನನ್ನ ಜೀವನದಲ್ಲಿ ಯಾರೂ ಬರುವುದಿಲ್ಲವೆಂದು ನನಗೆ ಗೊತ್ತು. ಯಾರು ಕೂಡಾ ನನ್ನನ್ನು ಪ್ರ್ರೀತಿಸುವುದಿಲ್ಲ. ಆದರೆ ಇದರಿಂದ ನನಗೆ ತೊಂದರೆಯಿಲ್ಲ.
ಆದರೆ ಕೆಲವು ದಿನ ನನಗೆ ನಿಜವಾಗಿಯೂ ದೂರ ಹೋಗಬೇಕೆನಿಸುತ್ತದೆ, ನೋವಿನ ಗ್ಗೆ ಭಯವೇ ಆಗದ ಬಹಳ ದೂರದ ಸ್ಥಳಕ್ಕೆ ಹೋಗಬೇಕೆಂದೆನಿಸುತ್ತದೆ. ಜೀವನ ಅಥವಾ ಮರಣದ ಬಗ್ಗೆ ಯೋಚಿಸದೆ ತುಂಬಾ ನಗಬೇಕೆಂದು ಅನಿಸುತ್ತದೆ. ನಾನು ಸ್ಮತಿ ತಪ್ಪಿ ಬಿದ್ದಾಗ ನನ್ನ ತಾಯಿ ನನ್ನನ್ನು ಮತ್ತೆ ನನಗೆ ಪ್ರಜ್ಞೆ ಬರುವ ತನಕ ಅವಳ ಎದೆಗವಚಿಕೊಂಡು ಹಿಡಿಯುತ್ತಾಳೆ.
ನನಗೆ ಅವರ ಮುಂದೆ ಅಳಲು ಸಾಧ್ಯವಿಲ್ಲ. ನಾನು ತುಂಬಾ ಧೈರ್ಯವಂತೆಯಾಗಬೇಕು, ಎಲ್ಲರೂ ಮಲಗಿದ ನಂತರ ಮಾತ್ರ ನಾನು ಮೌನವಾಗಿ ಅಳುತ್ತೇನೆ. ಈ ಜಗತ್ತಿನಲ್ಲಿ ಎಲ್ಲರಿಗೂ ಸಹಜ ಜೀವನ ದೊರೆಯುವುದಿಲ್ಲ. ಎಲ್ಲರಿಗೂ ಕನಸು ಕಾಣಲು, ಜೀವಿಸಲು ಹಾಗೂ ಪ್ರೇಮಿಸಲು ನಾಳೆ ಇರುವುದಿಲ್ಲ.
ಕೆಲ ದಿನಗಳ ಹಿಂದೆ ನನ್ನ ತಂಗಿ ನನ್ನನ್ನು ಬಿಗಿದಪ್ಪಿಕೊಂಡು ‘‘ಅಪ, ಮಧ್ಯರಾತ್ರಿ ಅಳಬೇಡಿ. ಅದರಿಂದ ತುಂಬಾ ನೋವಾಗುತ್ತದೆ, ನಾವೆಲ್ಲರೂ ನಿಮ್ಮೊಂದಿಗೆ ಅಳುತ್ತೇವೆ,’’ ಎಂದಳು. ನಾನು ಕೂಡ ಆಕೆಯನ್ನು ಬಿಗಿದಪ್ಪಿದೆ. ನನಗೆ ನಿಜವಾಗಿ ನನ್ನನ್ನು ಪ್ರೀತಿಸಲು ಒಬ್ಬ ದಯಾಳು ಪುರುಷನ ಅಗತ್ಯವಿಲ್ಲ. ನನಗೆ ಜೀವನದಲ್ಲಿ ಸಾಕಷ್ಟು ಪ್ರೀತಿ ದೊರೆತಿದೆ.
- ಸುಭಾನ