ಬಿಜೆಪಿಯ ಅಪಾಯಕಾರಿ ಆಟಗಳು ಈಶಾನ್ಯ ಭಾಗವನ್ನು ಅಸ್ಥಿರಗೊಳಿಸಬಹುದು: ಕಾಂಗ್ರೆಸ್
ಹೊಸದಿಲ್ಲಿ, ಮಾ.5: ಈಶಾನ್ಯದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಲ್ಲಿ ಇರುವ ಭಿನ್ನಾಭಿಪ್ರಾಯಗಳತ್ತ ಬೆಟ್ಟು ಮಾಡಿರುವ ಕಾಂಗ್ರೆಸ್, ಬಿಜೆಪಿ ಅಧಿಕಾರದ ದಾಹದಿಂದ ಈಶಾನ್ಯ ಭಾಗವನ್ನು ಅಸ್ಥಿರಗೊಳಿಸುವ ಅಪಾಯಕಾರಿ ಆಟವನ್ನು ಆಡುತ್ತಿದೆ ಎಂದು ಸೋಮವಾರ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಣ್ದೀಪ್ ಸುರ್ಜೆವಾಲಾ, ತ್ರಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ವಿಭಜನೆಯ ಮಾತುಗಳನ್ನು ಆಡುತ್ತಿರುವ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯು ಈಶಾನ್ಯ ಭಾಗದಲ್ಲಿ ಸ್ಥಿರತೆ, ಭದ್ರತೆ, ಶಾಂತಿ ಮತ್ತು ಅಭಿವೃದ್ಧಿಯನ್ನು ಕೈಬಿಟ್ಟು ಅಸ್ಥಿರತೆ, ಮತ್ತು ಅಧಿಕಾರದ ಸ್ವಾಧೀನತೆಯ ಅಪಾಯಕಾರಿ ಆಟವನ್ನು ಆಡುತ್ತಿದೆ. ರಾಷ್ಟ್ರವನ್ನು ಮೊದಲು ಎಂದು ಭಾವಿಸಿ ಅಸ್ಸಾಂ ಮತ್ತು ಮಿಝೊರಾಂ ಒಪ್ಪಂದದ ಮೂಲಕ ಆ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ರಾಜೀವ್ ಗಾಂಧಿಯವರಿಂದ ಪ್ರಧಾನಿ ಮೋದಿ ಏನಾದರೂ ಕಲಿಯಬಹುದು ಎಂದು ಆಶಿಸುತ್ತೇನೆ ಎಂದು ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ.
ಏನಾದರೂ, ಹೇಗಾದರೂ ಮಾಡಿ ಅಧಿಕಾರವನ್ನು ಪಡೆಯುವ ಬಿಜೆಪಿಯ ವರ್ತನೆಯು ಇಡೀ ಪ್ರದೇಶವನ್ನು ಅಸ್ಥಿರತೆಗೆ ತಳ್ಳಲಿದೆ ಎಂಬ ಭಯ ಎಲ್ಲರನ್ನು ಕಾಡಲಾರಂಭಿಸಿದೆ ಎಂದು ಸುರ್ಜೆವಾಲಾ ಆತಂಕ ವ್ಯಕ್ತಪಡಿಸಿದ್ದಾರೆ. ತ್ರಿಪುರದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆಯಿಟ್ಟಿರುವ ಐಪಿಎಫ್ಟಿಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಇದೀಗ ಈ ಪಕ್ಷ ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಆಗ್ರಹಿಸುತ್ತಿದೆ. ಇದೀಗ ಈ ಪಕ್ಷದ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಬಿಜೆಪಿ ಸ್ಪಂದಿಸುತ್ತದೆಯೇ ಅಥವಾ ಬುಡಕಟ್ಟು ಜನಾಂಗದ ವ್ಯಕ್ತಿ ಮುಖ್ಯಮಂತ್ರಿ ಆಗಬೇಕೆಂಬ ಆಗ್ರಹವನ್ನು ಒಪ್ಪುತ್ತದೆಯೇ ಎಂಬುದನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮೇಘಾಲಯದಲ್ಲಿ ಪರಸ್ಪರರ ವಿರುದ್ಧ ಸ್ಪರ್ಧಿಸಿದ್ದ ಪ್ರತಿಯೊಂದು ಪಕ್ಷ ಒಟ್ಟಾಗಿ ಸೇರಿ ಸರಕಾರ ರಚಿಸಲು ಮುಂದಾಗಿದೆ. ಇದರಿಂದ ರಾಜ್ಯದಲ್ಲಿ ಸ್ಥಿರತೆ ಬರಲು ಸಾಧ್ಯವೇ? ಈ ಸರಕಾರ 5 ವರ್ಷಗಳ ಕಾಲ ಬಾಳುವುದೇ? ಎಂದು ಸುರ್ಜೆವಾಲಾ ಅನುಮಾನ ವ್ಯಕ್ತಪಡಿಸಿದ್ದಾರೆ.