ಶೂಭಾಗ್ಯ ಯೋಜನೆಯಲ್ಲಿ ಲಂಚ ಸ್ವೀಕಾರ : ಹಿರಿಯಡ್ಕ ಶಾಲಾ ಮುಖ್ಯೋಪಾಧ್ಯಾಯ ಎಸಿಬಿ ಬಲೆಗೆ
ಉಡುಪಿ, ಮಾ.17: ಶಾಲಾ ಶೂ ಭಾಗ್ಯ ಯೋಜನೆಯಲ್ಲಿ ಲಂಚಕ್ಕಾಗಿ ಪೀಡಿಸುತ್ತಿದ್ದ ಹಿರಿಯಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖೋಪಾಧ್ಯಾಯರನ್ನು ಉಡುಪಿ ಭ್ರಷ್ಟಾಚಾರ ನಿಗ್ರಹ ದಳ ಶನಿವಾರ ಬಂಧಿಸಿದೆ.
ಬಂಧಿತರನ್ನು ಮುಖ್ಯೋಪಾಧ್ಯಾಯ ಎಂ.ಕೆ.ವಾಸುದೇವ ಎಂದು ಗುರುತಿಸಲಾಗಿದೆ. ಶೂ ಭಾಗ್ಯ ಯೋಜನೆಯಲ್ಲಿ ಶಾಲೆಗೆ ಶೂ ಸರಬರಾಜು ಮಾಡಿರುವ ಮಣಿಪಾಲದ ಶೂ ಝೋನ್ ಅಂಗಡಿಯ ಮಾಲಕರಲ್ಲಿ ಮುಖ್ಯೋಪಾಧ್ಯಾಯ ವಾಸುದೇವ ಲಂಚಕ್ಕಾಗಿ ಪದೇ ಪದೇ ಅಂಗಡಿಗೆ ಹೋಗಿ ಪೀಡಿಸುತ್ತಿದ್ದರೆಂದು ಎಸಿಬಿಗೆ ದೂರು ನೀಡಲಾಗಿತ್ತು.
ಅದರಂತೆ ಕಾರ್ಯಾಚರಣೆ ನಡೆಸಿದ ಎಸಿಬಿ ತಂಡ ಮುಖೋಪಾಧ್ಯಾಯರ ಕಚೇರಿಗೆ ದಾಳಿ ನಡೆಸಿ ದೂರುದಾರರಿಂದ 7000ರೂ. ಲಂಚದ ಹಣ ಪಡೆಯುತ್ತಿದ್ದ ಮುಖ್ಯೋಪಾಧ್ಯಾಯ ವಾಸುದೇವ ಅವರನ್ನು ಬಂಧಿಸಿದೆ. ಬಂಧಿತ ಮುಖ್ಯೋಪಾಧ್ಯಾಯರನ್ನು ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಎಸಿಬಿ ಪಶ್ಚಿಮ ವಲಯ ಪೊಲೀಸ್ ಅಧೀಕ್ಷಕಿ ಶ್ರುತಿ ಮಾರ್ಗದರ್ಶನದಲ್ಲಿ ಎಸಿಬಿ ಪೊಲೀಸ್ ಉಪಾಧೀಕ್ಷಕ ದಿನಕರ್ ಶೆಟ್ಟಿ ಹಾಗೂ ಪೊಲೀಸ್ ನಿರೀಕ್ಷ ಕರುಗಳಾದ ಜಯರಾಮ್ ಡಿ.ಗೌಡ, ಸತೀಶ್ ಬಿ.ಎಸ್ ಹಾಗೂ ಸಿಬ್ಬಂದಿ ಗಳಾದ ಕೃಷ್ಣಪ್ಪ, ರವೀಂದ್ರ ಗಾಣಿಗ, ಅಬ್ದುಲ್ ಜಲಾಲ್, ಪ್ರಸನ್ನ ದೇವಾಡಿಗ, ಸುರೇಶ್ ನಾಯಕ್, ರಾಘವೇಂದ್ರ, ಸೂರಜ್ ಕಾಪು, ಪಾವನಾಂಗಿ, ರಮೇಶ ಈ ಕಾರ್ಯಾಚರಣೆ ನಡೆಸಿದ್ದರು.