ಚಿತ್ರದುರ್ಗ: ಜಿಗ್ನೇಶ್ ಮೇವಾನಿ ವಿರುದ್ಧ ದೂರು
ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪ
ಚಿತ್ರದುರ್ಗ, ಎ. 7: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ದೂರು ದಾಖಲಿಸಲಾಗಿದೆ.
ಗುಜರಾತ್ನ ವಡಗಾಂವ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ‘ಸಂವಿದಾನ ಉಳಿವಿಗಾಗಿ ಕರ್ನಾಟಕ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣದ ಮಾಡಿರುವ ಬಗ್ಗೆ ಜಿಲ್ಲೆಯ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಮೋದಿ ಪಾಲ್ಗೊಂಡಿದ್ದಾಗ ಕುರ್ಚಿಗಳನ್ನು ಗಾಳಿಗೆ ತೂರಿ, ಗದ್ದಲ ಮಾಡಿ ಎಂದು ಮೇವಾನಿ ಕರೆ ನೀಡಿದ್ದರು ಎಂದು ದೂರಲಾಗಿದೆ. 15 ಲಕ್ಷ ರೂ. ಎಲ್ಲಿ ?, ಉದ್ಯೋಗ ಸೃಷ್ಟಿ ಎಷ್ಟು ಮಾಡಿದ್ದೀರಿ ಎಂದು ಪ್ರಶ್ನಿಸಿ, ಇದನ್ನು ಮಾಡಲು ಆಗದಿದ್ದರೆ ಹಿಮಾಲಯಕ್ಕೆ ಹೋಗಿ ರಾಮಮಂದಿರದ ಘಂಟೆ ಬಾರಿಸಲು ಹೇಳಿ ಎಂದು ಜಿಗ್ನೇಶ್ ಮೇವಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎಂದು ದೂರು ನೀಡಲಾಗಿದೆ.