ದೇಶಾದ್ಯಂತ ಅಂಬೇಡ್ಕರ್ ಜಯಂತಿ ಆಚರಣೆ: ಪಂಜಾಬ್ನಲ್ಲಿ ಘರ್ಷಣೆ
ಹೊಸದಿಲ್ಲಿ, ಎ. 13: ಡಾ. ಬಿ.ಆರ್. ಅಂಬೇಡ್ಕರ್ ಅವರ 127ನೇ ಜನ್ಮ ದಿನಾಚರಣೆಯ ದಿನವಾದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿದರು. ‘‘ಪೂಜ್ಯ ಬಾಬಾಸಾಹೇಬ್ ಅವರು ಸಮಾಜದ ಅಂಚಿಗೆ ತಳ್ಳಲ್ಪಟ್ಟ ಹಾಗೂ ಬಡ ವರ್ಗಕ್ಕೆ ಸೇರಿದ ಲಕ್ಷಾಂತರ ಜನರಿಗೆ ಆಶಾದೀಪವಾಗಿದ್ದರು. ನಮ್ಮ ಸಂವಿಧಾನ ರೂಪಿಸಲು ಅವರು ಪಟ್ಟ ಶ್ರಮಕ್ಕೆ ನಾವು ಋಣಿಯಾಗಿರಬೇಕಿದೆ.’’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್, ‘ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಗೌರವ ಸಲ್ಲಿಸಿದರು. “ಜಾತಿ ಹಾಗೂ ಇತರ ಪೂರ್ವಾಗ್ರಹಗಳಿಂದ ಮುಕ್ತವಾದ ಭಾರತ ರೂಪಿಸಲು ಮಹಿಳೆಯರಿಗೆ ಸಮಾನ ಹಕ್ಕು ನೀಡಲು ತನ್ನ ಜೀವನದುದ್ದಕ್ಕೂ ಹೋರಾಡಿದ ಡಾ. ಅಂಬೇಡ್ಕರ್ ಅವರದ್ದು ಬಹುಮುಖಿ ವ್ಯಕ್ತಿತ್ವ ಹಾಗೂ ಅವರು ದೇಶದ ಮಾದರಿ ವ್ಯಕ್ತಿ’’ ಎಂದರು.
ಪಕ್ಷದ ದಿಲ್ಲಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಂಬೇಡ್ಕರ್ಗೆ ಗೌರವ ಸಲ್ಲಿಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅವರು “ಬದುಕು, ಸಮಾನತೆ, ಮಾನವತೆ, ಭ್ರಾತೃತ್ವ, ಸಾಮಾಜಿಕ ನ್ಯಾಯದ ಚಿಂತನೆ ಹೋರಾಟ ಮುಂದುವರಿಸಲು ಉತ್ತೇಜನ ನೀಡುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ. ಬಾಬಾ ಸಾಹೇಬ್ ಬದುಕಿಗೆ ಸಂಬಂಧಿಸಿದ ಸ್ಥಳಗಳನ್ನು ಸ್ಮಾರಕ ಮಾಡಿ ಹಾಗೂ ಅವರ ಹೆಸರಿನಲ್ಲಿ ಯೋಜನೆ ಆರಂಭಿಸಿ ಎಂದು ನಾನು ಮೋದಿ ಅವರಿಗೆ ಹೇಳಲು ಬಯಸುತ್ತೇನೆ. ಇಲ್ಲದೇ ಇದ್ದರೆ ದಲಿತರ ಅಭಿವೃದ್ಧಿಗೆ ಯಾವುದೇ ದಾರಿ ಇಲ್ಲ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ.
ಬಿಜೆಪಿ ದಲಿತ ವಿರೋಧಿ ಎಂದು ಆರೋಪಿಸಿರುವ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ನ ಸಂಚಾಲಕ ಹಾಗೂ ವಡ್ಗಾಂವ್ನ ಜಿಗ್ನೇಶ್ ಮೇವಾನಿ, ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ದಿನದಂದು ಬಿಜೆಪಿ ಸದಸ್ಯರು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಸಂಚಾರ ಅಂತರ್ ವಲಯಕ್ಕೆ ಮರು ನಾಮಕರಣ ಮಾಡುವ ಕುರಿತು ಸಂಘ ಪರಿವಾರ ಹಾಗೂ ದಲಿತರ ನಡುವೆ ಸಂಭವಿಸಿದ ಕೋಮು ಹಿಂಸಾಚಾರದಲ್ಲಿ ಪಂಜಾಬ್ನ ಫಾಗ್ವಾರಾ ಉದ್ವಿಗ್ನಗೊಂಡಿದೆ.