ಕರ್ನಾಟಕದಲ್ಲಿ ಸ್ಪರ್ಧಿಸುವುದಿಲ್ಲ ಉವೈಸಿ ಪಕ್ಷ
ರಾಜ್ಯದಲ್ಲಿ ಯಾರಿಗೆ ಬೆಂಬಲ ನೀಡಲಿದ್ದಾರೆ ಸಂಸದ ಅಸದುದ್ದೀನ್ ?
ಬೆಂಗಳೂರು, ಎ.15: ಮುಂದಿನ ಕೆಲ ದಿನಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅಸದುದ್ದೀನ್ ಉವೈಸಿಯವರ ಎಐಎಂಐಎಂ ಪಕ್ಷವು ಸ್ಪರ್ಧಿಸುವುದಿಲ್ಲ ಎಂದು ತಿಳಿದುಬಂದಿದೆ.
ಜಾತ್ಯಾತೀತ ಮತಗಳು ವಿಭಜನೆಯಾಗಬಾರದು ಹಾಗು ಜಾತ್ಯಾತೀತ ಪಕ್ಷಗಳಿಗೆ ಹಿನ್ನಡೆಯಾಗಬಾರದು ಎನ್ನುವ ಉದ್ದೇಶದಿಂದ ಉವೈಸಿಯವರ ಪಕ್ಷ ಚುನಾವಣೆಯಿಂದ ಹಿಂದೆ ಸರಿದಿದೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆಯಿಂದ ಎಐಎಂಐಎಂ ಹಿಂದೆ ಸರಿಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವಾದರೂ ಎಐಎಂಐಎಂ ಪಕ್ಷವು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟಗೊಂಡಿಲ್ಲ. ಈ ಮೊದಲು ಅಸದುದ್ದೀನ್ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎನ್ನಲಾಗಿತ್ತು. ಮೂರ್ನಾಲ್ಕು ಸೀಟುಗಳಲ್ಲಿ ಉವೈಸಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲು ಜೆಡಿಎಸ್ ಅವಕಾಶ ಮಾಡಿಕೊಡಲಿದೆ ಎನ್ನಲಾಗಿತ್ತು.
ಒಟ್ಟಿನಲ್ಲಿ ಉವೈಸಿ ಪಕ್ಷವು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲಿದೆಯೇ ಅಥವಾ ಜೆಡಿಎಸ್ ಜೊತೆ ಕೈಜೋಡಿಸಲಿದೆಯೇ ಎನ್ನುವುದು ತಿಳಿಯಲು ಚುನಾವಣೆವರೆಗೆ ಕಾಯಬೇಕಾಗಿದೆ.