ಪಂಜಾಬ್: ದಲಿತ ಸಂಘಟನೆ-ಸಂಘ ಪರಿವಾರದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಯುವಕ ಸಾವು
ಲೂಧಿಯಾನ, ಎ. 29: ರಾಷ್ಟ್ರೀಯ ಹೆದ್ದಾರಿ 1ರ ಸಂಚಾರ ಛೇಧನಕ್ಕೆ ಮರು ನಾಮಕರಣ ಮಾಡುವ ವಿವಾದದ ಕುರಿತು ಸಂಘ ಪರಿವಾರ ಹಾಗೂ ದಲಿತ ಸಂಘಟನೆಗಳ ನಡುವೆ ಫಾಗ್ವಾರದಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಯುವಕ ಇಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘರ್ಷಣೆಯಲ್ಲಿ ಗಂಭೀರ ಗಾಯಗೊಂಡಿದ್ದ ದಲಿತ ಹೋರಾಟಗಾರ ಯಶ್ವಂತ್ ಆಲಿಯಾಸ್ ಬಾಬಿ (19) ಡಿಎಂಸಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
ಈ ಘರ್ಷಣೆಯಲ್ಲಿ ಇತರ ಮೂವರು ಕೂಡ ಗಾಯಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಬಿಗಿ ಭದ್ರತೆಯ ನಡುವೆ ರವಿವಾರ ಬೆಳಗ್ಗೆ ಯಶ್ವಂತ್ ಆಲಿಯಾಸ್ ಬಾಬಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಗೋಲ್ ಚೌಕ್ನಲ್ಲಿ ಎ. 13ರಂದು ಬಿ.ಆರ್. ಅಂಬೇಡ್ಕರ್ ಅವರ ಭಾವಾಚಿತ್ರವನ್ನು ಒಳಗೊಂಡ ಫಲಕವನ್ನು ದಲಿತ ಸಂಘಟನೆಯ ಸದಸ್ಯರು ಅಳವಡಿಸಿದ ಬಳಿಕ ದಲಿತರು ಹಾಗೂ ಸಂಘ ಪರಿವಾರದ ಸದಸ್ಯರ ನಡುವೆ ಘರ್ಷಣೆ ಸಂಭವಿಸಿತ್ತು. ಈ ಘರ್ಷಣೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದರು.
Next Story