20 ರಾಜ್ಯಗಳಲ್ಲಿ ಚಂಡಮಾರುತ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ಹೊಸದಿಲ್ಲಿ, ಮೇ 7: ಉತ್ತರ ಹಾಗೂ ಪೂರ್ವ ಭಾರತದ 20 ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆ ಸುರಿಯಲಿದೆ ಹಾಗೂ ಚಂಡಮಾರುತ ಬೀಸಲಿದೆ ಎಂದು ಹವಾಮಾನ ಇಲಾಖೆ ರವಿವಾರ ಮುನ್ನೆಚ್ಚರಿಕೆ ನೀಡಿದೆ.
ಚಂಡ ಮಾರುತದಿಂದ 73 ಜನರ ಸಾವು ಸೇರಿದಂತೆ ಗರಿಷ್ಠ ನಾಶಕ್ಕೆ ಸಾಕ್ಷಿಯಾಗಿರುವ ಉತ್ತರಪ್ರದೇಶದಲ್ಲಿ ಮುಖ್ಯವಾಗಿ ಪಶ್ಚಿಮ ಭಾಗದಲ್ಲಿ ಚಂಡ ಮಾರುತ ಬೀಸುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಒಡಿಶಾ, ಜಾರ್ಖಂಡ್, ಬಿಹಾರ್, ಹರ್ಯಾಣ ಚಂಡಿಗಢ ಹಾಗೂ ದಿಲ್ಲಿಯಲ್ಲಿ ಕೂಡ ಚಂಡ ಮಾರುತ ಬೀಸುವ ಸಾಧ್ಯತೆ ಇದೆ.
ಉತ್ತರಾಖಂಡ ಹಾಗೂ ಹಿಮಾಚಲಪ್ರದೇಶದಲ್ಲಿ ಮಳೆಯೊಂದಿಗೆ ಆಲಿಕಲ್ಲು ಬೀಳುವ ಸಾಧ್ಯತೆ ಇದೆ. ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೊರಾಂ, ತ್ರಿಪುರಾ, ಕೇರಳ, ಪಶ್ಚಿಮಬಂಗಾಳ, ಸಿಕ್ಕಿಂ, ಪಂಜಾಬ್ ಹಾಗೂ ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮೇ 7 ಹಾಗೂ 8ರಂದು ಚಂಡಮಾರುತ ಬೀಸುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಹರ್ಯಾಣ ಸರಕಾರ ಎಲ್ಲ ಶಾಲೆಗಳನ್ನು ಎರಡು ದಿನಗಳ ಕಾಲ ಮುಚ್ಚಲು ನಿರ್ಧರಿಸಿದೆ. ಹವಾಮಾನ ಇಲಾಖೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ಹೇಳಿದ್ದಾರೆ.