ಬಿಎಂಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ: ದೂರು ದಾಖಲು
ಬೆಂಗಳೂರು, ಜೂ.10: ಪ್ರಯಾಣಿಕನೊಬ್ಬ ಬಿಎಂಟಿಸಿ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಸಂಬಂಧ ಆರೋಪಿಯ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಎಂಟಿಸಿ ಡಿಪೊ-8ನೇ ವಿಭಾಗದ ಚಂದ್ರಶೇಖರ ಹಲ್ಲೆಗೊಳಗಾಗಿರುವ ನಿರ್ವಾಹಕ. ಪುಟ್ಟರಾಜು ಹಲ್ಲೆಮಾಡಿರುವ ಆರೋಪಿ. ಜೂ.9ರ ಮಧ್ಯಾಹ್ನ 12.30ರ ಸುಮಾರಿಗೆ ಲಗ್ಗೆರೆ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ಗೆ ಹತ್ತಿ ಕೇವಲ 5ರೂ.ಗೆ ಟಿಕೆಟ್ ಪಡೆದು, ನಿಗಧಿತ ಸ್ಥಳದಲ್ಲಿ ಇಳಿಯದೆ ಪ್ರಯಾಣವನ್ನು ಮುಂದುವರೆಸಿದ್ದಾನೆ.
ಈ ಬಗ್ಗೆ ಬಸ್ ನಿರ್ವಾಹಕ ಚಂದ್ರಶೇಖರ್ ಪ್ರಶ್ನಿಸಿ, ಟಿಕೆಟ್ ಪಡೆಯುವಂತೆ ಹೇಳಿದ್ದಾರೆ. ಟಿಕೆಟ್ ಪಡೆಯದ ಆರೋಪಿ ಪುಟ್ಟರಾಜು ಬಸ್ ನಿರ್ವಾಹಕನ ಜೊತೆಗೆ ವಾಗ್ವಾದಕ್ಕೆ ಮುಂದಾಗಿದ್ದಾನೆ. ಈ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಬಸ್ನಿರ್ವಾಹಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
Next Story