ನೇಪಾಳ: ಭಾರತೀಯ ಯಾತ್ರಿಕರ ತೆರವು ಕಾರ್ಯ ಕೊನೆ ಹಂತದಲ್ಲಿ
ಕಠ್ಮಂಡು, ಜು. 6: ಕೈಲಾಸ-ಮಾನಸಸರೋವರ ಯಾತ್ರೆಯಿಂದ ಮರಳುತ್ತಿದ್ದಾಗ ನೇಪಾಳದ ದುರ್ಗಮ ಸಿಮಿಕೋಟ್ ಪಟ್ಟಣದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ಯಾತ್ರಿಕರನ್ನು ತೆರವುಗೊಳಿಸುವ ಕಾರ್ಯ ಗುರುವಾರದ ವೇಳೆಗೆ ಕೊನೆಯ ಹಂತಕ್ಕೆ ಬಂದಿದೆ.
ಇನ್ನು ಸುಮಾರು 550 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಬೇಕಾಗಿದೆ.
ಕಳೆದ ವಾರಾಂತ್ಯದಲ್ಲಿ ಭಾರೀ ಮಳೆಯಿಂದಾಗಿ ಟಿಬೆಟ್ ಗಡಿ ಸಮೀಪವಿರುವ ಇನ್ನೊಂದು ಪಟ್ಟಣ ಹಿಲ್ಸದಲ್ಲಿ ನೂರಾರು ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದರು. ಅಲ್ಲಿ ಈಗ ಯಾರೂ ಉಳಿದಿಲ್ಲ ಎಂದು ರಕ್ಷಣಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಭಾರತೀಯ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ನೇಪಾಳದ ಸಿಮಿಕೋಟ್ ಮತ್ತು ಹಿಲ್ಸ ಪಟ್ಟಣಗಳಲ್ಲಿ ಮತ್ತು ಟಿಬೆಟ್ನಲ್ಲಿ ಸುಮಾರು 1,600 ಭಾರತೀಯ ಯಾತ್ರಿಕರು ಸಿಕ್ಕಿಹಾಕಿಕೊಂಡಿದ್ದರು.
Next Story