ಶೀಘ್ರದಲ್ಲಿ ಮೈಸೂರು ವಿ.ವಿ ಕುಲಪತಿ ನೇಮಕ: ಸಚಿವ ಜಿ.ಟಿ.ದೇವೇಗೌಡ
ಮೈಸೂರು,ಜು.13: ಇದೇ ಮೊದಲ ಬಾರಿಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಶುಕ್ರವಾರ ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡ ಅಧಿದೇವತೆ ತಾಯಿ ಶ್ರೀಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಉನ್ನತ ಶಿಕ್ಷಣ ಖಾತೆ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದರು. 'ಕೊಟ್ಟ ಖಾತೆಯನ್ನು ಉತ್ತಮವಾಗಿ ನಿಭಾಯಿಸುತ್ತೇನೆ. ಕಂದಾಯ ಖಾತೆಗೆ ಪಟ್ಟು ಹಿಡಿದಿದ್ದು ನಿಜ, ಅದು ಕಾಂಗ್ರೆಸ್ ಪಾಲಾಗಿದೆ. ಹೀಗಾಗಿ ಉನ್ನತ ಶಿಕ್ಷಣ ಇಲಾಖೆ ಬಗ್ಗೆ ತಿಳಿದುಕೊಂಡು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ. ರಾಜ್ಯಪಾಲರ ಜೊತೆ ಕಾರ್ಯಕ್ರಮ ಮಾಡಿದ್ದೇನೆ. ಹತ್ತು ಸಾವಿರ ಅತಿಥಿ ಉಪನ್ಯಾಸಕರ ನೇಮಕ ಮಾಡಲು ಸಿದ್ಧತೆ ನಡೆದಿದೆ. ಮೈಸೂರು ಕುಲಪತಿ ನೇಮಕ ಅತಿ ಶೀಘ್ರವಾಗಿ ನಡೆಯಲಿದೆ. ಕೆ.ಎಸ್.ಒಯು ಮಾನ್ಯತೆ ವಿಚಾರ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆದಿದೆ ಎಂದರು.
ಈ ಬಾರಿ ದಸರ ವೈಭವೋಪೇತವಾಗಿ ನಡೆಯಲಿದೆ. ದಸರಾ ಆಚರಣೆ ಬಗ್ಗೆ ಈಗಾಗಲೇ ಉನ್ನತ ಕಮಿಟಿ ಸಭೆ ನಡೆದಿದೆ. ದಸರಾ ಅದ್ಧೂರಿ ಆಚರಣೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಮ್ಮತಿ ಸೂಚಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು. ಮೊದಲ ಆಶಾಢ ಶುಕ್ರವಾರಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಮುಂಡಿಬೆಟ್ಟಕ್ಕೆ ಬಂದು ತಾಯಿಯ ದರ್ಶನ ಪಡೆಯುತ್ತಾರೆ. ಉತ್ತಮ ಮಳೆ ಆಗಿ ನಾಡಿನ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ ಎಂದರು.