ಅನ್ಯಾಯ ಆಗಿದ್ದರೆ ಪ್ರಶ್ನಿಸಲಿ, ರಾಜ್ಯ ಒಡೆಯುವ ಕೆಲಸ ಸಲ್ಲ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ, ಜು. 28: ‘ಉತ್ತರ ಕರ್ನಾಟಕ ಭಾಗಕ್ಕೆ ಬಜೆಟ್ನಲ್ಲಿ ಅನ್ಯಾಯ ಆಗಿದ್ದರೆ, ಸಚಿವ ಸ್ಥಾನ ದೊರೆಯದಿದ್ದರೆ ಸರಿಪಡಿಸೋಣ. ಆದರೆ, ರಾಜ್ಯ ಒಡೆಯುವ ಕೆಸಲಕ್ಕೆ ಯಾರೂ ಮುಂದಾಗಬಾರದು ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಕರ್ನಾಟಕ ಎ ಕ್ಲಾಸ್, ಮುಂಬೈ ಕರ್ನಾಟಕ ಬಿ ಕ್ಲಾಸ್, ಹೈದರಾಬಾದ್ ಕರ್ನಾಟಕ ಸಿ ಕ್ಲಾಸ್ನಲ್ಲಿದೆ. ಹೀಗಾಗಿ ಎಲ್ಲರೂ ಕೂಡಿ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ಹೇಳಿದರು.
‘ದಕ್ಷಿಣ ಕರ್ನಾಟಕದವರು ಮತ ಹಾಕಿದ್ದಾರೆ. ಉತ್ತರ ಕರ್ನಾಟಕದವರು ಮತ ಹಾಕಿಲ್ಲ’ ಎಂದು ನಾನು ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆಂದ ಖರ್ಗೆ, ಸಿಎಂ ಜತೆ ನಾನು ಚರ್ಚಿಸಿದ್ದೇನೆ. ಅವರು ಹೇಳಿಕೆಯನ್ನೇ ನೀಡಿಲ್ಲ. ಆದರೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಅಖಂಡ ಕರ್ನಾಟಕವನ್ನು ಒಗ್ಗೂಡಿಸಲು ಬಹಳಷ್ಟು ಕಷ್ಟಪಟ್ಟಿದ್ದಾರೆ. ಕನ್ನಡ ಭಾಷೆ ಮಾತನಾಡುವ ಜನರು ಒಂದೆ ಕಡೆ ಇರಬೇಕೆಂಬ ಕನಸಿನಿಂದ ನಾವು ಒಂದಾಗಿದ್ದೇವೆ. ಇಂತಹ ವೇಳೆ ಪ್ರತ್ಯೇಕ ರಾಜ್ಯದ ಕೂಗು ಸಲ್ಲ. ಆದರೆ, ರಾಜ್ಯ ಒಡೆಯುವ ಚಿಂತನೆ ಮಾಡಬಾರದು ಎಂದರು.
‘ನಾನೊಬ್ಬ ಅಪ್ಪಟ ಕಾಂಗ್ರೆಸಿಗ. ಕಾಂಗ್ರೆಸ್ ಪಕ್ಷದವನೇ ಆಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೆ ಪ್ರಧಾನಿ ಆಗಬೇಕೆಂದು ನಾನು ಬಯಸುತ್ತೇನೆ. ಆದರೆ, ಕಾಂಗ್ರೆಸ್ ಪಕ್ಷ ಎಲ್ಲರನ್ನ ಜೊತೆಗೂಡಿಸಿಕೊಂಡು ಹೋಗುವ ಪಕ್ಷ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲಿದೆ’
-ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಕಾಂಗ್ರೆಸ್ ನಾಯಕ