ಬಕ್ರೀದ್ ಸಂದರ್ಭ ಗೋಹತ್ಯೆ ತಡೆಯಲು ಬಿಜೆಪಿಗೆ ರಾಜೀನಾಮೆ ನೀಡಿದ ಶಾಸಕ
ಹೈದರಾಬಾದ್, ಆ. 13: ಹೈದರಾಬಾದ್ ನಗರದ ಗೋಷಮಹಲ್ ಕ್ಷೇತ್ರದ ವಿವಾದಾತ್ಮಕ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ವಿಚಿತ್ರ ಕಾರಣವೊಂದಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಬರುವ ವಾರ ಆಚರಿಸಲಾಗುವ ಬಕ್ರೀದ್ ಸಂದರ್ಭ ನಡೆಯುವ ಗೋ ಹತ್ಯೆಗಳ ವಿರುದ್ಧ ತಾನು ಕಾರ್ಯಾಚರಿಸುವಾಗ ಪಕ್ಷಕ್ಕೆ ಮುಜುಗರ ಸೃಷ್ಟಿಯಾಗದಿರ ಲೆಂದು ತಾನು ರಾಜೀನಾಮೆ ನೀಡುತ್ತಿರುವುದಾಗಿ ಸಿಂಗ್ ಹೇಳಿದ್ದಾರೆ.
ಹಿಂದೂ ವಾಹಿನಿಯ ಭಾಗವಾಗಿ ತನ್ನ ಮೊದಲ ಆದ್ಯತೆ ಹಿಂದೂ ಧರ್ಮದ ರಕ್ಷಣೆಯಾಗಿದೆ ಎಂದು ಸಿಂಗ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಬಕ್ರೀದ್ ಸಂದರ್ಭ ಸುಮಾರು 3,000 ದನಗಳ ಹತ್ಯೆ ನಡೆಯುವುದು ಎಂದೂ ಅವರು ಹೇಳಿಕೊಂಡಿದ್ದಾರೆ.
ಗೋವುಗಳನ್ನು ರಕ್ಷಿಸಲು ತಾನು ಕ್ರಮ ಕೈಗೊಳ್ಳುವುದಾಗಿ ಹೇಳಿದ ಅವರು ಹೀಗೆ ಮಾಡಿದಾಗ ಪಕ್ಷಕ್ಕೆ ವಿವರಣೆ ನೀಡುವ ಅಥವಾ ಮುಜುಗರ ಸೃಷ್ಟಿಯಾಗುವ ಪ್ರಶ್ನೆಯಿರುವುದಿಲ್ಲ ಎಂದಿದ್ದಾರೆ. ತಮ್ಮ ಪ್ರಚೋದನಾತ್ಮಕ ಭಾಷಣಗಳಿಗೆ ಕುಖ್ಯಾತಿ ಪಡೆದಿರುವ ಸಿಂಗ್ 2017ರಲ್ಲಿ ಕನಿಷ್ಠ ಎರಡು ಬಾರಿ ರಾಜೀನಾಮೆ ಘೋಷಿಸಿ ನಂತರ ಅದನ್ನು ವಾಪಸ್ ಪಡೆದುಕೊಂಡಿದ್ದರು.