ಉಳಿತಾಯದ ಹಣ ಕೇರಳದ ಪರಿಹಾರ ನಿಧಿಗೆ ಅರ್ಪಿಸಿದ ಬಾಲಕಿ!
ಕೋಲ್ಕತಾ, ಆ.23: ಬ್ಯಾಂಕ್ನ ಉಳಿತಾಯ ಖಾತೆಯಲ್ಲಿ ಜೋಪಾನವಾಗಿಟ್ಟಿದ್ದ ಹಣವನ್ನು ಕೋಲ್ಕತಾದ ನಾಲ್ಕರ ಹರೆಯದ ಬಾಲಕಿ ಪ್ರವಾಹಪೀಡಿತ ಕೇರಳದ ಪರಿಹಾರ ನಿಧಿಗೆ ಸಮರ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾಳೆ.
ಜಾದವ್ಪುರ ನಿವಾಸಿ ಅಪರಾಜಿತಾ ಸಹಾ ತನ್ನ ಹುಟ್ಟುಹಬ್ಬದ ವೇಳೆ ಉಡುಗೊರೆ ರೂಪದಲ್ಲಿ ಸ್ವೀಕರಿಸಿದ್ದ 14,800 ರೂ.ವನ್ನು ಡ್ಯಾನ್ಸ್ ತರಗತಿಯ ರಿಹರ್ಸಲ್ಗೆ ಸಿಡಿ ಪ್ಲೇಯರ್ ಖರೀದಿಗಾಗಿ ಬ್ಯಾಂಕ್ ಖಾತೆಯಲ್ಲಿ ಇಟ್ಟಿದ್ದಳು.
ಬುಧವಾರ ಸಿಪಿಎಂ ಕಚೇರಿಗೆ ತನ್ನ ಹೆತ್ತವರೊಂದಿಗೆ ತೆರಳಿದ ಸಹಾ ಸಿಪಿಎಂ ಮುಖಂಡ ಬಿಮನ್ ಬೋಸ್ರನ್ನು ಭೇಟಿಯಾಗಿ ಹಣವನ್ನು ಹಸ್ತಾಂತರಿಸಿದಳು. ಸಿಪಿಎಂ ಪಕ್ಷ ಕೇರಳದ ಪ್ರವಾಹಪೀಡಿತರಿಗಾಗಿ ಪರಿಹಾರ ವಸ್ತುಗಳು ಹಾಗೂ ದೇಣಿಗೆಯನ್ನು ತನ್ನ ಕಚೇರಿಯಲ್ಲಿ ಸಂಗ್ರಹಿಸುತ್ತಿದೆ.
ಟಿವಿ ಚಾನಲ್ಗಳಲ್ಲಿ ಕೇರಳದ ಪ್ರವಾಹದ ದೃಶ್ಯವನ್ನು ನೋಡಿದ ಬಳಿಕ ಬಾಲಕಿ ಸಹಾ ಪ್ರವಾಹಪೀಡಿತ ಕೇರಳ ಜನತೆಗೆ ಹಣವನ್ನು ದಾನವಾಗಿ ನೀಡಲು ನಿರ್ಧರಿಸಿದ್ದಳು.
‘‘ನಾನು ಕೂಡಿಟ್ಟಿದ್ದ ಹಣವನ್ನು ಕೇರಳದ ನನ್ನ ಸಹೋದರಿಯರಿಗೆ ನೀಡುತ್ತಿದ್ದೇನೆ’’ ಎಂದು ಬಾಲಕಿ ಅಪರಾಜಿತಾ ಹೇಳಿದ್ದಾಳೆ.