ಶಿವಮೊಗ್ಗ: ಆಸ್ಪತ್ರೆಗೆ ತೆರಳಿದ ತಾಯಿ-ಮಗಳು ಕೆರೆಯಲ್ಲಿ ಶವವಾಗಿ ಪತ್ತೆ
ಆತ್ಮಹತ್ಯೆ ಶಂಕೆ
ಶಿವಮೊಗ್ಗ, ಆ. 29: ಕೆರೆಯಲ್ಲಿ ತಾಯಿ - ಮಗಳ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದೇವಂಗಿ ಸಮೀಪದ ಹಿಲಿಕೆರೆ ಗ್ರಾಮದ ಕೆರೆಯಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಹಿಲಿಕೆರೆ ಗ್ರಾಮದ ನಿವಾಸಿ ಅರುಣ್ ಎಂಬುವರ ಪತ್ನಿ ನಿಧಿ (30) ಹಾಗೂ ಪುತ್ರಿ ಸೌಪರ್ಣಿಕಾ (6) ಮೃತಪಟ್ಟವರೆಂದು ಗುರುತಿಸಲಾಗಿದೆ. ನಿಧಿಯವರು ಆಸ್ಪತ್ರೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಮಗಳೊಂದಿಗೆ ತೆರಳಿದ್ದರು. ಸಂಜೆಯ ನಂತರವೂ ಅವರು ಮನೆಗೆ ಹಿಂದಿರುಗಿರಲಿಲ್ಲ.
ಕುಟುಂಬದವರು ಪರಿಚಯಸ್ಥರು, ಸಂಬಂಧಿಗಳ ಮನೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಚಾರಿಸಿದ್ದರೂ ನಿಧಿ ಹಾಗೂ ಸೌಪರ್ಣಿಕಾರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಬುಧವಾರ ಬೆಳಗ್ಗೆ ಕೆರೆಯಲ್ಲಿ ಶವಗಳನ್ನು ತೇಲುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ್ದು, ನಂತರ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿಯಿತ್ತು ಪರಿಶೀಲಿಸಿದ್ದಾರೆ. ಕೆರೆಯಿಂದ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯ ನಂತರವಷ್ಟೆ ಸ್ಪಷ್ಟ ಕಾರಣ ತಿಳಿದುಬರಬೇಕಾಗಿದೆ.