ಸರಕಾರಿ ಸಾರಿಗೆ ವ್ಯವಸ್ಥೆಗೆ ಶೀಘ್ರವೇ ‘ಒಂದು ರಾಷ್ಟ್ರ ಒಂದು ಕಾರ್ಡ್’ ಯೋಜನೆ
ಹೊಸದಿಲ್ಲಿ, ಸೆ.3: ವಿವಿಧ ಸಾರಿಗೆ ವಿಧಾನಗಳ ಮಧ್ಯೆ ತಡೆರಹಿತ ಸಂಪರ್ಕ ಸಾಧಿಸುವ ಉದ್ದೇಶದಿಂದ ದೇಶದ ಸರಕಾರಿ ಸಾರಿಗೆ ವ್ಯವಸ್ಥೆಗೆ ಶೀಘ್ರದಲ್ಲೇ ‘ಒಂದು ರಾಷ್ಟ್ರ ಒಂದು ಕಾರ್ಡ್’ ಯೋಜನೆ ಅಳವಡಿಸಲಾಗುವುದು ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ತಿಳಿಸಿದ್ದಾರೆ.
ದೃಢವಾದ ಸಾರಿಗೆ ಕ್ಷೇತ್ರವು ಅರ್ಥವ್ಯವಸ್ಥೆಯ, ಅದರಲ್ಲೂ ಭಾರತದಂತಹ ಅಧಿಕ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರದ ಅರ್ಥವ್ಯವಸ್ಥೆಯ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಚಿರಸ್ಥಾಯಿ, ದೀರ್ಘಬಾಳಿಕೆಯ ಸರಕಾರಿ ಸಾರಿಗೆ ವಿಧಾನದ ಸಂಚಾರ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು. ಕೇವಲ ವಾಹನಗಳನ್ನು ಮಾತ್ರ ಕೇಂದ್ರೀಕರಿಸದೆ ಪ್ರಜೆಗಳು ಪ್ರಥಮ ಎಂಬ ದೃಷ್ಟಿಯಿರುವ ವ್ಯವಸ್ಥೆ ಇದಾಗಿರುತ್ತದೆ. ಸ್ವಚ್ಛ ಸಾರಿಗೆ ವ್ಯವಸ್ಥೆಯನ್ನು ಹೊಂದುವ ಬಗ್ಗೆ ಗಮನ ನೀಡಲಾಗುವುದು ಎಂದು ಕಾಂತ್ ತಿಳಿಸಿದರು.
‘ಇಂಡಿಯಾಸ್ ಮೂವ್ ಟು ನೆಕ್ಸ್ಟ್ ಜೆನ್ ಟ್ರಾನ್ಸ್ಪೋರ್ಟ್ ಸಿಸ್ಟಮ್’ ಎಂಬ ವಿಷಯದಲ್ಲಿ ನಡೆದ ಶೃಂಗಸಭೆಯಲ್ಲಿ ಅವರು ಮಾತನಾಡಿದರು. ಭಾರತದ ಜಿಡಿಪಿಯಲ್ಲಿ ರಸ್ತೆ ಸಾರಿಗೆ ಕ್ಷೇತ್ರವೇ ಶೇ.4ರಷ್ಟು ಕೊಡುಗೆ ನೀಡುತ್ತಿದೆ. ಆದರೆ ಸಾರಿಗೆ ಕ್ಷೇತ್ರವು ಬಹುವಾಗಿ ಖನಿಜ ತೈಲಗಳನ್ನು ಅವಲಂಬಿಸಿದೆ. ಇದರಿಂದ ದೇಶದ ಪ್ರಮುಖ ನಗರಗಳಲ್ಲಿ ಪರಿಸರ ಮಾಲಿನ್ಯದಂತಹ ಸಮಸ್ಯೆ, ತೈಲ ಆಮದು ಬೆಲೆಯಲ್ಲಿ ಸದಾ ಏರಿಕೆ ಮುಂತಾದ ಸಮಸ್ಯೆಗಳು ಹೆಚ್ಚಿವೆ. ಚಲನಶೀಲತೆಯು ಭಾರತದ ಆರ್ಥಿಕತೆಯ ಅಂತಸ್ಸತ್ವವನ್ನು ಹೊರಗೆಡಹಲು ಅತ್ಯಾವಶ್ಯಕ ಅಂಶವಾಗಿದೆ ಎಂದವರು ಹೇಳಿದ್ದಾರೆ. ದೇಶದಾದ್ಯಂತ ಸದೃಢ ಚಲನಶೀಲ ಪರಿಸರ ವ್ಯವಸ್ಥೆಯನ್ನು ಹೊಂದಿರಲು ಸರಕಾರ ಕ್ರಮ ಕೈಗೊಂಡಿದೆ ಎಂದು ನೀತಿ ಆಯೋಗದ ಸಲಹೆಗಾರ ಅನಿಲ್ ಶ್ರೀವಾಸ್ತವ ತಿಳಿಸಿದ್ದಾರೆ.