ಮರೆತೇನೆಂದರೂ ಮರೆಯಲಾಗದ ಕೇಶವ ಮೇಷ್ಟ್ರು
ಶಿಕ್ಷಕರ ದಿನಾಚರಣೆಯ ವಿಶೇಷ
ಕೇಶವ ಮೇಷ್ಟ್ರು
ಪ್ರತಿಯೊಬ್ಬ ಗುರುವು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮೇಲೆ ಪ್ರಭಾವ ಬೀರಿರುತ್ತಾರೆ. ಜೀವನದುದ್ದಕ್ಕೂ ನೆನಪಾಗುತ್ತಲೇ ಇರುತ್ತಾರೆ. ಹಾಗಾಗಿ ಒಂದಿಬ್ಬರ ಬಗ್ಗೆ ಬರೆಯುವುದು ಕಷ್ಟ. ನಾನು ನನ್ನ ಪ್ರಾಥಮಿಕ ಶಿಕ್ಷಣ ಪಡೆದದ್ದು ನನ್ನ ಹುಟ್ಟೂರು ಬಂಟ್ವಾಳ ತಾಲೂಕಿನ ಕುಳಾಲು ಎಂಬ ಹಳ್ಳಿಯ ಸರಕಾರಿ ಶಾಲೆಯಲ್ಲಿ.
ಅದು ಇಂದು ಮಕ್ಕಳ ಕೊರತೆಯಿಂದ ಸೊರಗುತ್ತಿದೆ. ಕುಳಾಲು ಶಾಲೆಯೆಂದರೆ ತಟ್ಟನೆ ನೆನಪಿಗೆ ಬರುವವರು ನಮ್ಮ ಕೇಶವ ಮೇಷ್ಟ್ರು. ಇತ್ತೀಚೆಗೆ ನಮ್ಮ ಕೇಶವ ಮೇಷ್ಟ್ರು ಅತಿಯಾಗಿ ನೆನಪಾಗತೊಡಗಿದ್ದಾರೆ. ಅದಕ್ಕೆ ಕಾರಣವೂ ಇದೆ. ನಾನು ಗಣಿತ ದ ಟ್ಯೂಷನ್ ಹೇಳಿಕೊಡುವಾಗ ಮಕ್ಕಳ 'ಮಗ್ಗಿ'ಯ ಪರದಾಟ ನನ್ನ ಬಾಲ್ಯ ಕಾಲವನ್ನೂ, ಮೇಷ್ಟ್ರನ್ನೂ ಕಣ್ಣ ಮುಂದೆ ನಿಲ್ಲಿಸಿ ಬಿಡುತ್ತದೆ. ಹಾಗಾಗಿ ಒಂದೆರಡು ಸಾಲು ಅವರ ಬಗ್ಗೆಯೇ ಬರೆಯಬೇಕೆಂದೆನಿಸಿತು.
ಸಣಕಲು, ನೀಳಕಾಯದ ವ್ಯಕ್ತಿ ನಮ್ಮ ಕೇಶವ ಮೇಷ್ಟ್ರು. ಅವರ ಕೈಯಲ್ಲಿ ಅವರಷ್ಟೆ ಉದ್ದದ ಮರದ ಅಡಿಕೋಲು. ಆ ಅಡಿಕೋಲಿಗೆ ಹೆದರದ ವಿದ್ಯಾರ್ಥಿಗಳೇ ಇರಲಿಲ್ಲ. ಶಾಲೆಯಲ್ಲಿ ಅದನ್ನವರು ಕೈಯಿಂದ ಕೆಳಗಿರಿಸುತ್ತಿದ್ದುದೇ ವಿರಳ. ಮಾರುದ್ದ ದೂರದಲ್ಲಿ ಮೇಷ್ಟ್ರು ಬರುವುದನ್ನು ನೋಡಿದೊಡನೆ ಅಲ್ಲಲ್ಲಿ ಓಡಾಡಿ ಗದ್ದಲವೆಬ್ಬಿಸುತ್ತಿದ್ದ ನಾವೆಲ್ಲಾ ಓಡಿ ಹೋಗಿ ತರಗತಿಯೊಳಗೆ ಕುಳಿತು ಪುಸ್ತಕ ಬಿಡಿಸಿ ಓದುವಂತೆ ನಟಿಸುತ್ತಿದ್ದೆವು. ಆದರೆ ಮುಖ್ಯ ವಿಚಾರವಿರುವುದು ಈ ಮಗ್ಗಿಯಲ್ಲಿ. ಅದೇನೆಂದರೆ ನನ್ನ ಪ್ರಾಥಮಿಕ ವಿದ್ಯಾಭ್ಯಾಸದ ಪ್ರಾರಂಭದ ದಿನಗಳಲ್ಲಿ ಶಾಲೆಯಲ್ಲಿ ವಾರಕ್ಕೊಂದು ಬಾರಿ ಭಜನಾ ಕಾರ್ಯಕ್ರಮ ವಿರುತ್ತಿತ್ತು. ಸ್ವಲ್ಪ ಸಮಯದಲ್ಲೇ ಅದು ರದ್ದಾಯಿತು ಕೂಡ. ಬೇರೆ ಶಾಲೆಗಳಲ್ಲಿ ಈ ಪದ್ದತಿ ಇತ್ತೇ ಎಂಬುದರ ಬಗ್ಗೆ ನನಗೆ ಅರಿವಿಲ್ಲ. ಅದೇನೇ ಇರಲಿ, ಈ ಭಜನೆಯಿಂದಾಗಿ ನಮಗೆಷ್ಟು ಅನುಕೂಲವಾಯಿತೆಂದರೆ 'ಮಗ್ಗಿ' ನಾಲಿಗೆ ತುದಿಯಲ್ಲಿ ಬಂದು ನಿಲ್ಲುವಂತಾಯಿತು. ಅದು ಹೇಗೆಂದರೆ ಭಜನೆಯ ಸಮಯವಾದೊಡನೆ ಅಡಿಕೋಲಿನೊಂದಿಗೆ ಮೇಷ್ಟ್ರು ಪ್ರತ್ಯಕ್ಷವಾಗುತ್ತಿದ್ದರು. ಹಿಂದೂ ವಿದ್ಯಾರ್ಥಿಗಳೆಲ್ಲಾ ಭಜನೆಗೆ ಹಾಜರಾದರೆ ಉಳಿದ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಮಕ್ಕಳನ್ನು ಒಂದು ಕೋಣೆಯೊಳಗೆ ಸೇರಿಸುತ್ತಿದ್ದರು. ಅಲ್ಲಿ ಭಜನೆ ಪ್ರಾರಂಭವಾದೊಡನೆ ಇಲ್ಲಿ ನಮ್ಮ ಮಗ್ಗಿಯೂ ಆರಂಭವಾಗುತ್ತಿತ್ತು. ಮೇಷ್ಟ್ರು ಪ್ರತಿಯೊಬ್ಬರನ್ನೂ ಮುಂದೆ ನಿಲ್ಲಿಸಿ ಮಗ್ಗಿ ಹೇಳಿಸುತ್ತಿದ್ದರು. ವಾರಕ್ಕೊಂದು ಮಗ್ಗಿ ಎಲ್ಲರೂ ಹೇಳಬೇಕಿತ್ತು. ಅಡಿಕೋಲಿನ ಭಯಕ್ಕೆ ನಾವೆಲ್ಲಾ ಮಗ್ಗಿ ಕಲಿತು ಬರುತ್ತಿದ್ದೆವು. ಒಮ್ಮೊಮ್ಮೆ ಮಧ್ಯದಿಂದ ಮಗ್ಗಿ ಕೇಳಿ ನಮ್ಮನ್ನು ಗೊಂದಲಕ್ಕೀಡು ಮಾಡಿದ್ದೂ ಇದೆ. ನಾನೆಂದರೆ ಮೇಷ್ಟ್ರಿಗೆ ಅಚ್ಚುಮೆಚ್ಚು. ಹಾಗಾಗಿ ನನ್ನನ್ನು ಹಾಗೂ ನನ್ನ ಸೀನಿಯರೊಬ್ಬಳನ್ನು ಮಗ್ಗಿ ಲೀಡರನ್ನಾಗಿ ನೇಮಿಸಿ ಭಜನೆಗೆ ತೆರಳಿದ್ದೂ ಇದೆ. ಆಗಿನ ನಮ್ಮ ಖುಷಿ ಹೇಳತೀರದು. ಬೇಗ ಬೇಗನೆ ಮಗ್ಗಿ ಹೇಳಿಸಿ ಪಟ್ಟಾಂಗ ಹೊಡೆಯುತ್ತಿದ್ದೆವು. ಮೇಷ್ಟ್ರು ಬಂದಾಗ ತಿಳಿಯಲೆಂದು ಯಾರಾದರೊಬ್ಬರನ್ನು ಕಿಟಕಿಯ ಬಳಿ ನಿಲ್ಲಿಸುತ್ತಿದ್ದೆವು. ಅವರು ಬಂದರೆಂದು ತಿಳಿದೊಡನೆ ಲೀಡರ್ ಗಳಿಬ್ಬರೂ ಅಲರ್ಟ್ ಆಗಿ ಮತ್ತೆ ಮಗ್ಗಿಯತ್ತ ತೆರಳುತ್ತಿದ್ದೆವು.
ನಮ್ಮ ಮೇಷ್ಟ್ರಿಗೆ ವಿಚಿತ್ರ ಅಭ್ಯಾಸವೊಂದಿತ್ತು. ಅದೇನೆಂದರೆ ಉಲ್ಟಾ ಮಗ್ಗಿ ಹೇಳಿಸುವುದು. ಈ ಉಲ್ಟಾ ಮಗ್ಗಿ ಹೇಳಿಸುವಾಗಲೆಲ್ಲಾ ನನಗೆ ಜೀವ ಹಿಂಡಿದಂತಾಗುತ್ತಿತ್ತು. ಅದೇನೇ ಇರಲಿ, ಅವರಿಂದಾಗಿ ಮಗ್ಗಿಯಲ್ಲಿ ಇತರ ವಿದ್ಯಾರ್ಥಿಗಳಿಗಿಂತ ನಾವು ಒಂದು ಕೈ ಮೇಲೆ ಇರುತ್ತಿದ್ದೆವು.
ಅಕ್ಷರ ಉಚ್ಛಾರ ಸರಿಪಡಿಸುವಲ್ಲಿ ಅವರು ತುಂಬಾ ಶ್ರಮವಹಿಸುತ್ತಿದ್ದರು. ಬ್ಯಾರಿ ಹಾಗೂ ತುಳು ಭಾಷೆ ಮಾತನಾಡುವ ಅದರಲ್ಲೂ ಹೆಚ್ಚಾಗಿ ಹುಡುಗರಲ್ಲಿ ನ,ಳ,ಹ ಕಾರಗಳ ಉಚ್ಚಾರಗಳಲ್ಲಿ ತೊಡಕುಂಟಾಗುತ್ತಿತ್ತು. ಇದು ಪ್ರಾದೇಶಿಕ ಭಾಷೆಯ ಪ್ರಭಾವದಿಂದಲೂ ಹೌದು. 'ಳ' ಕಾರಕ್ಕಾಗಿ 'ಅರಳಿ ಮರದ ಕೆಳಗೆರಡರಣೆಗಳು ಉರುಳಿ ಹೊರಳಾಡುತ್ತಿದ್ದವು' ಈ ಸಾಲನ್ನೂ, 'ಹ' ಕಾರಕ್ಕಾಗಿ 'ನೇಗಿಲ ಹಿಡಿದಾ ಹೊಲದೊಳು ಹಾಡುತ' ಈ ಸಾಲನ್ನೂ ಹೇಳಿಸುತ್ತಿದ್ದರು. ತಾಳ್ಮೆ ಯಿಂದ ಹೇಳಿಕೊಟ್ಟು ಕೊನೆಗೆ ಸರಿ ದಾರಿಗೆ ಬರಲಿಲ್ಲವೆಂದರೆ 'ಅಡಿಕೋಲಿನ' ರುಚಿ ತೋರಿಸುತ್ತಿದ್ದರು.
ಮೇಷ್ಟ್ರು ಸೋತಿದ್ದು ಇಲ್ಲಿ ನೋಡಿ. ನನ್ನ ಸೀನಿಯರೊಬ್ಬಳು 'ರ' ವನ್ನು 'ಗ' ಎಂದು ಉಚ್ಜರಿಸುತ್ತಿದ್ದಳು. ಬಾರ' ಅನ್ನುವುದನ್ನು 'ಬಾಗ' ಎನ್ನುತ್ತಿದ್ದಳು. ಅದೊಂದು ವಿಚಿತ್ರ 'ಗ' ದಂತೆ ಕೇಳಿಸುತ್ತಿತ್ತು. ಅವಳ ಉಚ್ಛಾರ ವನ್ನು ಸರಿಪಡಿಸಲು ಮೇಷ್ಟ್ರು ಭಗೀರಥ ಪ್ರಯತ್ನ ನಡೆಸಿದ್ದರು. ತರಗತಿಯಲ್ಲಿ ಸಾಧ್ಯವಾಗದೆ ಕೊನೆಗೆ ಅಧ್ಯಾಪಕರ ಕೊಠಡಿಯಲ್ಲಿ ಕುಳ್ಳಿರಿಸಿ ಹೇಳಿ ಕೊಟ್ಟರೂ ಪ್ರಯೋಜನವಾಗಲೇ ಇಲ್ಲ. 'ರ' ಗ' ಆಗಿಯೇ ಉಳಿಯಿತು.
ನಮಗೂ ನಮ್ಮ ಸೀನಿಯರ್ ಗಳಿಗೂ ಆಗೊಮ್ಮೆ ಈಗೊಮ್ಮೆ ಶೀತಲ ಸಮರ ನಡೆಯುತ್ತಲೇ ಇತ್ತು. ಹೀಗೆ ಒಮ್ಮೆ ಜಗಳವಾಡುತ್ತಾ ಸ್ವಾತಿ' ಎಂಬ ಹುಡುಗಿಗೆ ಪ್ರಾಸಬದ್ದವಾಗಿ 'ಕೋತಿ' ಎಂದು ಬೈದು ಬಿಟ್ಟೆ. ಮರುದಿನ ಬೆಳಿಗ್ಗೆ ಶಾಲೆಗೆ ಹಾಜರಾದೊಡನೆ ಮೇಷ್ಟ್ರ ಕಡೆಯಿಂದ ಕರೆ ಬಂತು. ವಿಷಯವೇನೆಂದು ತಿಳಿಯದೆ ನಾನು ಮಾಮೂಲಿ ನಂತೆ ಮೇಷ್ತ್ರ ಬಳಿ ಹೋದೆ. ಬೆಳ್ಳಂಬೆಳಗ್ಗೇ ನನಗೆ ಮಂಗಳಾರತಿ ಎತ್ತಿದರು. ಈ 'ಕೋತಿ' ಕೂಗುತ್ತಲೇ ಮೇಷ್ಟ್ರ ಬಳಿ ಹೋಗಿ ಚಾಡಿ ಹೇಳಿದ್ದು ನನಗೆ ಆಗ ತಿಳಿಯಿತು. ಮೇಷ್ಟ್ರಿಗೆ ನನ್ನ ಬಳಿ ಅದೆಷ್ಟು ಪ್ರೀತಿಯಿತ್ತೆಂದರೆ ಅವರು ನನಗೆ ಗದರಿಸಿದರೇ ವಿನಾ ಹೊಡೆಯಲಿಲ್ಲ.
ಹೀಗೆ ಮೇಷ್ಟ್ರು ನಮ್ಮ ಜೊತೆಗೆ ಕಳೆದುದು ಅತ್ಯಲ್ಪ ಸಮಯವಷ್ಟೆ. ಅವರಿಗೆ ಅದೇನಾಯ್ತೋ ತಿಳಿಯೆ. ಅಚಾನಕ್ಕಾಗಿ ಕಣ್ಣುಗಳ ದೃಷ್ಟಿ ಕಳೆದುಕೊಂಡು ಶಾಶ್ವತವಾಗಿ ಅಂಧರಾಗಿಬಿಟ್ಟರು.ಅಲ್ಲಿಗೇ ಅವರ ವೃತ್ತಿ ಜೀವನ ಮುಗಿದು ಹೋಯಿತು. ನಾವೆಲ್ಲಾ ಸೇರಿ ಅವರ ಮನೆಗೆ ತೆರಳಿ ಬೀಳ್ಕೊಟ್ಟು ಬಂದ ನೆನಪು.
ಅವರು ಗಳಿಸಿದ ಅಪಾರ ಶಿಷ್ಯ ವೃಂದ ಅವರನ್ನು ಸದಾ ಕಾಲ ಸ್ಮರಿಸುತ್ತಲೇ ಇರುತ್ತದೆ.