ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ಎಂಬುದು ಅಸಂಗತತೆ : ಅಜಿತ್ ದೋವಲ್
ಹೊಸದಿಲ್ಲಿ, ಸೆ.5: ಜಮ್ಮು-ಕಾಶ್ಮೀರ ರಾಜ್ಯ ಪ್ರತ್ಯೇಕ ಸಂವಿಧಾನವನ್ನು ಹೊಂದಿರುವುದು ಬಹುಷಃ ಅಸಂಗತತೆಯಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದು, ಭಾರತದ ಸಾರ್ವಭೌಮತೆಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲಾಗದು ಎಂದಿದ್ದಾರೆ.
ಸಂವಿಧಾನದ 35-ಎ ವಿಧಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇರುವ ಸಂದರ್ಭದಲ್ಲೇ ದೋವಲ್ ನೀಡಿರುವ ಹೇಳಿಕೆ ಗಮನಾರ್ಹವಾಗಿದೆ. ವಿವೇಕಾನಂದ ಅಂತರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ವಲ್ಲಭಭಾಯಿ ಪಟೇಲ್ ಅವರ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ದೋವಲ್, ಸಾರ್ವಭೌಮತೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗದು ಅಥವಾ ದುರ್ಬಲಗೊಳಿಸಲಾಗದು. ಬ್ರಿಟಿಷರು ಭಾರತವನ್ನು ಬಿಟ್ಟು ತೆರಳುವಾಗ ಭಾರತವು ಬಲಿಷ್ಟ ಸಾರ್ವಭೌಮ ದೇಶವಾಗಿರಲು ಬಹುಷಃ ಬಯಸಿರಲಿಲ್ಲ ಎಂದರು.
ಆದರೆ ಬ್ರಿಟಿಷರ ಕುತಂತ್ರದ ಬಗ್ಗೆ ಅರಿವಿದ್ದ ಪಟೇಲರು ಇದಕ್ಕೆ ಆಸ್ಪದ ನೀಡಲಿಲ್ಲ. ದೇಶದ ಜನತೆ ಸ್ವತಂತ್ರವಾಗಿ ಬದುಕುವಂತಾಗಲು ಸಂವಿಧಾನದಲ್ಲಿ ಆಸ್ಪದ ನೀಡಲಾಗಿದೆ. ಇಡೀ ದೇಶಕ್ಕೆ ಒಂದೇ ಸಂವಿಧಾನ ಇರಬೇಕು. ಆದರೆ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಪ್ರತ್ಯೇಕ ಸಂವಿಧಾನವಿದ್ದು ಇದೊಂದು ಅಸಂಗತತೆಯಾಗಿದೆ ಎಂದು ದೋವಲ್ ಹೇಳಿದರು.
ರಾಷ್ಟ್ರ ಕಟ್ಟುವ ಕೆಲಸವು ಒಂದು ಶಾಖೋತ್ಪನ್ನ ಪ್ರಕ್ರಿಯೆಯಾಗಿದೆ. ಇಲ್ಲಿ ಉತ್ಪನ್ನವಾಗುವ ಶಾಖದಲ್ಲಿ ವಿವಿಧ ಅಸ್ಮಿತೆಗಳು ಒಗ್ಗೂಡಿದರೆ ಅದು ಒಂದೇ ಅನನ್ಯತೆಯಾಗುತ್ತದೆ ಎಂದು ದಾವಲ್ ಹೇಳಿದರು.