ಐವರು ಹೋರಾಟಗಾರರ ಗೃಹಬಂಧನ ಅವಧಿ ವಿಸ್ತರಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ, ಸೆ.6: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಪುಣೆ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಐವರು ಹೋರಾಟಗಾರರ ಗೃಹಬಂಧನ ಅವಧಿಯನ್ನು ಸುಪ್ರೀಂಕೋರ್ಟ್ ಸೆ.12ರ ತನಕ ವಿಸ್ತರಿಸಿದೆ.
ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಪುಣೆ ಸಹಾಯಕ ಪೊಲೀಸ್ ಕಮಿಶನರ್ ನ್ಯಾಯಾಲಯದ ಮೇಲೆ ಅಪಾದನೆ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತು.
ಸುದ್ದಿಗೋಷ್ಠಿ ನಡೆಸಿದ್ದ ಮಹಾರಾಷ್ಟ್ರ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಜಸ್ಟಿಸ್ ಡಿ.ವೈ. ಚಂದ್ರಚೂಡ್, ಪ್ರಕರಣ ನಮ್ಮ ಮುಂದೆ ಇರುವ ಕಾರಣ ನಿಮ್ಮ ಪೊಲೀಸರು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸುವಂತೆ ನಿರ್ದೇಶಿಸಿ. ಸುಪ್ರೀಂಕೋರ್ಟ್ ತಪ್ಪು ಮಾಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುವುದನ್ನು ಕೇಳಲು ನಾವು ಇಷ್ಟಪಡುವುದಿಲ್ಲ’’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ ತುಷಾರ್ ಮೆಹ್ತಾಗೆ ನ್ಯಾಯಪೀಠ ಸೂಚಿಸಿದೆ. ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಳ್ಳಬಾರದು ಎಂದು ಆದೇಶಿಸಲು ನ್ಯಾಯಪೀಠ ನಿರಾಕರಿಸಿತು.
ಪುಣೆ ಪೊಲೀಸರು ಹೋರಾಟಗಾರರಾದ ಸುಧಾ ಭಾರದ್ವಾಜ್, ವರವರ ರಾವ್, ಗೌತಮ್ ನವ್ಲಾಖಾ, ವೆರ್ನಾನ್ ಗೋನ್ಸಾಲ್ವೆಸ್ ಹಾಗೂ ಅರುಣ್ ಫೆರರಾರನ್ನು ದೇಶದ ವಿವಿಧ ಭಾಗಗಳಿಂದ ಬಂಧಿಸಿದ್ದರು.