ದಾವಣಗೆರೆಯಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರಿನ ನಾಲ್ವರು ಯುವಕರು ಮೃತ್ಯು
ದಾವಣಗೆರೆ, ಸೆ.8: ಕಾರೊಂದು ಅಪಘಾತಕ್ಕೀಡಾಗಿ ನಾಲ್ವರು ಯುವಕರು ಮೃತಪಟ್ಟ ಘಟನೆ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
ಮೃತರನ್ನು ಬೆಂಗಳೂರು ಇಂದಿರಾ ನಗರ ನಿವಾಸಿಗಳಾದ ವಿನಯ್(27), ಅಜಯ್(32), ಸಿದ್ದಪ್ಪ(28) ಹಾಗೂ ವಿನಯ್(30) ಎಂದು ಗುರುತಿಸಲಾಗಿದೆ. ಈ ಪೈಕಿ ಸಿದ್ದಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಉಳಿದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಚಾಮರಾಜಪೇಟೆಯ ಡಿಟಿಡಿಸಿ ಕೊರಿಯರ್ ಉದ್ಯೋಗಿಗಳಾಗಿದ್ದ ಈ ಆರು ಮಂದಿ ಗೋಕರ್ಣಕ್ಕೆ ಪ್ರವಾಸ ಹೊರಟಿದ್ದರು. ಇವರು ಸಂಚರಿಸುತ್ತಿದ್ದ ಕ್ರಿಯೇಟ್ ಕಾರು ಹನಗವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಢಿಕ್ಕಿ ಹೊಡೆದಿದೆ. ಬಳಿಕ ಲಾರಿಯೊಂದಕ್ಕೂ ಕಾರು ಢಿಕ್ಕಿಯಾಗಿದೆ. ಇದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದರೆ, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಹರಿಹರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.