ರಾಜ್ಯ ವಕ್ಫ್ಬೋರ್ಡ್ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಝಮೀರ್ ಅಹ್ಮದ್
ಬೆಂಗಳೂರು, ಸೆ.8: ರಾಜ್ಯ ವಕ್ಫ್ ಬೋರ್ಡ್ನ ಕೇಂದ್ರ ಕಚೇರಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಶನಿವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ದಾರೂಲ್ ಔಕಾಫ್(ವಕ್ಫ್ ಬೋರ್ಡ್ ಕಚೇರಿ)ನಲ್ಲಿ ನಡೆದ ಸಭೆಯಲ್ಲಿ ವಕ್ಫ್ ಆಸ್ತಿಗಳ ಎರಡನೆ ಹಂತದ ಸಮೀಕ್ಷೆ, ನೋಂದಣಿ ಆಗದೆ ಇರುವ ವಕ್ಫ್ ಆಸ್ತಿಗಳ ನೋಂದಣಿಗೆ ಅನುಸರಿಸಬೇಕಾದ ಕ್ರಮಗಳು, ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ವಕ್ಫ್ ಆಸ್ತಿಗಳ ಪ್ರಕರಣಗಳು. ವಕ್ಫ್ ಆಸ್ತಿಗಳ ಸಂರಕ್ಷಣೆ ಯೋಜನೆಯಡಿಯಲ್ಲಿ ರಾಜ್ಯದ ವಕ್ಫ್ ಸಂಸ್ಥೆಗಳಿಗೆ ಬಿಡುಗಡೆಯಾಗಿರುವ ಅನುದಾನ, ವಕ್ಫ್ ಆಸ್ತಿಗಳ ದುರಸ್ತಿ ಮತ್ತು ನವೀಕರಣ ಹಾಗೂ ಅಭಿವೃದ್ಧಿಗೆ ಬಿಡುಗಡೆಯಾಗಿರುವ ವಿಶೇಷ ಅನುದಾನದ ಬಳಕೆ, ವಕ್ಫ್ ಸಂಸ್ಥೆಗಳಿಗೆ ಆಡಳಿತ ಸಮಿತಿಗಳ ರಚನೆ, ಮುತವಲ್ಲಿಗಳ ನೇಮಕ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ರಾಜ್ಯ ವಕ್ಫ್ ಬೋರ್ಡ್ನ ಆಡಳಿತಾಧಿಕಾರಿ ಎ.ಬಿ.ಇಬ್ರಾಹೀಮ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್, ವಿಶೇಷಾಧಿಕಾರಿ(ಸರ್ವೇ) ಮುಜೀಬುಲ್ಲಾ ಝಫಾರಿ, ಮುಖ್ಯ ಕಾನೂನು ಅಧಿಕಾರಿ ಖಾನ್ ಲಿಯಾಖತ್ ಅಲಿಖಾನ್, ಸಹಾಯಕ ಕಾರ್ಯದರ್ಶಿ(ಆಡಳಿತ) ಅಲ್ಲಾ ಬಖಷ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಮುನೀರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.