ಕಾಶ್ಮೀರ ಕುರಿತು ಪಾಕ್ ಸೇನಾ ವರಿಷ್ಠನ ಹೇಳಿಕೆ: ಯಾವುದೇ ಪ್ರತಿಕ್ರಿಯೆ ನೀಡದ ಮೋದಿ ವಿರುದ್ಧ ಶಿವಸೇನೆ ಆಕ್ರೋಶ
ಹೊಸದಿಲ್ಲಿ, ಸೆ. 8: ಪಾಕಿಸ್ತಾನದ ಸೇನಾ ವರಿಷ್ಠ ಕಮರ್ ಜಾವೆದ್ ಬಾಜ್ವಾ ಅವರ ಪ್ರಚೋದನಕಾರಿ ಹೇಳಿಕೆಗೆ ಶಿವಸೇನೆ ಶನಿವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಹಾಗೂ ನೆರೆ ದೇಶದ ಈ ರೀತಿಯ ಹೇಳಿಕೆಗೆ ಸಂಬಂಧಿಸಿ ಯಾವುದೇ ಕ್ರಮಗಳನ್ನು ಕೈಗೊಳ್ಳದ ಕೇಂದ್ರ ಸರಕಾರವನ್ನು ಖಂಡಿಸಿದೆ. ಇಸ್ಲಾಮಾಬಾದ್ನ ಎರಡು ಮುಖ ಸ್ಪಷ್ಟವಾಗಿ ಬಹಿರಂಗವಾಗಿದೆ.
ಒಂದೆಡೆ ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಶಾಂತಿ ಬಗ್ಗೆ ಮಾತನಾಡುತ್ತಿದ್ದಾರೆ, ಇನ್ನೊಂದೆಡೆ ಸೇನಾ ವರಿಷ್ಠ ಗಡಿಯಲ್ಲಿ ಹರಿದ ತನ್ನ ಯೋಧರ ರಕ್ತ ಹರಿದಿರುವುದಕ್ಕೆ ಸೇಡು ತೀರಿಸಿಕೊಳ್ಳುವಂತೆ ಸೇನೆಗೆ ಕರೆ ನೀಡುತ್ತಿದ್ದಾರೆ ಎಂದು ಶಿವಸೇನೆ ತನ್ನ ಮುಖವಾಣಿಯಾದ ‘ಸಾಮ್ನಾ’ದಲ್ಲಿ ಹೇಳಿದೆ. ‘ಸಾಮ್ನಾ’ದ ಸಂಪಾದಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ದಾಳಿ ಮಾಡಿದ ಸೇನೆ, 56 ಇಂಚು ಎದೆ ಹೊಂದಿರುವ ಮೋದಿ ಪಾಕಿಸ್ತಾನದ ಸೇನಾ ವರಿಷ್ಠನ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕಿತ್ತು ಎಂದಿದೆ. ಇಂತಹ ಹಲವು ಹೇಳಿಕೆಗಳು, ಕದನ ವಿರಾಮ ಉಲ್ಲಂಘನೆ ಹಾಗೂ ಭಯೋತ್ಪಾದಕರ ದಾಳಿ ನಡುವೆಯೂ ಭಾರತ ಸರಕಾರ ಹೇಳಿಕೆ ನೀಡುವುದನ್ನು ಹೊರತುಪಡಿಸಿ ಯಾವುದೇ ಕ್ರಮಗಳನ್ನು ತೆಗೆದುಕೊಂಂಡಿಲ್ಲ ಶಿವಸೇನೆ ಹೇಳಿದೆ.
“ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಚೀನಾ, ಪಾಕಿಸ್ತಾನ ಹಾಗೂ ಕಾಶ್ಮೀರ ವಿವಾದ ಹುಟ್ಟಿರುವುದಕ್ಕೆ ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರನ್ನು ಟೀಕಿಸುತ್ತಿದೆ. ಆದರೆ, ನೆರೆಯ ದೇಶದ ವಿರುದ್ಧ ಇದುವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.”