ಮೋದಿ ನೇತೃತ್ವದಲ್ಲಿ ಭಾರತ ದುರಂತದತ್ತ ಸಾಗುತ್ತಿದೆ: ಮಲ್ಲಿಕಾರ್ಜುನ ಖರ್ಗೆ
ಮುಂಬೈ, ಸೆ.9: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ದುರಂತದತ್ತ ಸಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಶನಿವಾರ ಮಹಾರಾಷ್ಟ್ರ ಕಾಂಗ್ರೆಸ್ ಆಯೋಜಿಸಿದ್ದ ಜನಸಂಘರ್ಷ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಖರ್ಗೆ, ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಮಾಡುವ ಮೂಲಕ 11 ಲಕ್ಷ ಕೋಟಿಗೂ ರೂ.ಗೂ ಅಧಿಕ ಮೊತ್ತವನ್ನು ಸಂಗ್ರಹಿಸಿದ ಕೇಂದ್ರ ಸರಕಾರ ಅದನ್ನೆಲ್ಲ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಂಥವರಿಂದಾಗಿ ಕಳೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಕೇವಲ ಒಂದು ಚುನಾವಣಾ ಯಂತ್ರವಾಗಿದೆ ಹಾಗಾಗಿ ಅದು ಒಂದು ಭರವಸೆಯನ್ನೂ ಈಡೇರಿಸಿಲ್ಲ. ವಿವಿಧ ಹೆಸರುಗಳಲ್ಲಿ ಯೋಜನೆಗಳನ್ನು ರೂಪಿಸಿರುವ ಮೋದಿ ಅವುಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತಂದಿಲ್ಲ ಎಂದು ಖರ್ಗೆ ಅಭಿಪ್ರಾಯಿಸಿದ್ದಾರೆ. ಎಂಪಿಸಿಸಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಮಾತನಾಡಿ, ಬಿಜೆಪಿ ಸರಕಾರವು 2014ರಿಂದ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.211 ಮತ್ತು ಡೀಸೆಲ್ ಮೇಲಿನ ತೆರಿಗೆಯಲ್ಲಿ ಶೇ.443ರಷ್ಟು ಏರಿಸಿದೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಹಾಗಾಗಿ ಸರಕಾರದ ಈ ನಡೆಯನ್ನು ವಿರೋಧಿಸಿ ಮತ್ತು ಬದಲಾವಣೆಯನ್ನು ಕೋರಿ ನಡೆಸಲಾಗುತ್ತಿರುವ ಈ ಬಂದ್ಗೆ ಎಲ್ಲರೂ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.